Kodagu: ಕೊಡಗಿನ ಅರಣ್ಯದಲ್ಲಿ ತರಬೇತಿ ಪಡೆದಿದ್ದ ಉಗ್ರ ಶಾರೀಕ್!

By Sathish Kumar KHFirst Published Dec 5, 2022, 11:23 AM IST
Highlights

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರಿಕ್ ಬಂಧನದ ಬಳಿಕ ಅವನ ಒಂದೊಂದೇ ಮುಖವಾಡ ಬಯಲಾಗತೊಡಗುತ್ತಿವೆ. ಅವನು ಕೊಡಗಿನಲ್ಲಿ ಕೆಲವು ತರಬೇತಿ ಪಡೆದಿದ್ದ ಎನ್ನುವ ವಿಷಯ ಗೊತ್ತಾಗಿದ್ದು, ಕೊಡಗಿನ ಪೊಲೀಸರು ಮತ್ತು ಜನರು ಬೆಚ್ಚಿಬೀಳಿಸುವಂತೆ ಮಾಡಿದೆ.

ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.5)  : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರಿಕ್ ಬಂಧನದ ಬಳಿಕ ಅವನ ಒಂದೊಂದೇ ಮುಖವಾಡ ಬಯಲಾಗತೊಡಗುತ್ತಿವೆ. ಅವನು ಕೊಡಗಿನಲ್ಲಿ ಕೆಲವು ತರಬೇತಿ ಪಡೆದಿದ್ದ ಎನ್ನುವ ವಿಷಯ ಗೊತ್ತಾಗಿದ್ದು, ಕೊಡಗಿನ ಪೊಲೀಸರು ಮತ್ತು ಜನರು ಬೆಚ್ಚಿಬೀಳಿಸುವಂತೆ ಮಾಡಿದೆ.

ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಡುತ್ತಿರುವ ಆತಂಕಕಾರಿ ವಿಷಯ. ಹೌದು ಉಗ್ರ ಶಾರಿಕ್ ಕಳೆದ ಆರು ತಿಂಗಳ ಹಿಂದೆಯಷ್ಟೇ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನಮ್ಮೆಲೆ ಗ್ರಾಮದ ಸಮೀಪ ಇರುವ ವೋಟೆಕಾಡ್ ನೇಚರ್ ಕ್ಯಾಂಪ್ ಹೋಂಸ್ಟೇನಲ್ಲಿ ಉಗ್ರ ಶಾರಿಕ್ ಕೆಲವು ತರಬೇತಿ ಪಡೆದಿದ್ದ ವಿಷಯ ಈಗ ಬಯಲಾಗಿದೆ. ಹೀಗಾಗಿ, ಮಂಗಳೂರು ಪೊಲೀಸರು ಹೋಂ ಸ್ಟೇಗೆ ಭೇಟಿ ನೀಡಿ ಅಲ್ಲಿ ತಂಗಿದ್ದ ವೇಳೆ ಏನೆಲ್ಲಾ ಚಟುವಟಿಕೆ ನಡೆಸಿದ್ದನು ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. 

ಮಂಗಳೂರು ಬಾಂಬ್‌ ಸ್ಫೋಟ: ಮೈಸೂರಿಗೂ ಮುನ್ನ ಕೇರಳದಲ್ಲಿದ್ದ ಶಾರೀಕ್‌

ಟ್ರಕ್ಕಿಂಗ್ ಅಥವಾ ಪರ್ವತಾರೋಹಿಗಳಿಗಾಗಿ ತಮಿಳುನಾಡಿನ ರಾಜನ್ ಎಂಬುವರು ನೀಡಿದ ಜಂಗಲ್ ಸರ್ವೈವಲ್  ಕ್ಯಾಂಪಿನಲ್ಲಿ ಉಗ್ರ ಶಾರಿಕ್ ತರಬೇತಿ ಪಡೆದಿದ್ದ. 2022 ರ ಮೇ ತಿಂಗಳ ಕೊನೆಯ ವಾರದಲ್ಲಿ ಅಂದರೆ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಜಂಗಲ್ ಸರ್ವೈವಲ್ ಎಂಬ ವಿಷಯದಲ್ಲಿ ತರಬೇತಿ ಪಡೆದಿದ್ದನು. ಈ ತರಬೇತಿ ಮೂಲಕ ಅವನು ಕಾಡಿನಲ್ಲಿ ಇದ್ದುಕೊಂಡು ಉಗ್ರ ಚಟುವಟಿಕೆ ನಡೆಸುದಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ತರಬೇತಿ ಪಡೆದನಾ ಎನ್ನುವ ಅನುಮಾನ ಶುರುವಾಗಿದೆ. ತಮಿಳುನಾಡಿನ ರಾಜನ್ ಎಂಬುವರು ಪರ್ವತಾರೋಹಿಗಳು ಮತ್ತು ಟ್ರಕ್ಕಿಂಗ್ ಮಾಡುವವರಿಗಾಗಿ ತರಬೇತಿ ಆಯೋಜಿಸಿದ್ದರು. 

ತರಬೇತಿ ವಿಷಯಗಳೇನು?
ಈ ತರಬೇತಿಯಲ್ಲಿ ಅರಣ್ಯದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಹೇಗೆ? ಅಕಸ್ಮಾತ್ ಅರಣ್ಯದಲ್ಲಿ ತಪ್ಪಿಸಿಕೊಂಡಲ್ಲಿ ಅಲ್ಲಿ ಆಹಾರ ಉತ್ಪಾದನೆ ಮಾಡಿಕೊಳ್ಳುವುದು ಹೇಗೆ? ಮುಂತಾದ ವಿಷಯಗಳನ್ನು ಹೇಳಿಕೊಡಲಾಗಿತ್ತು. ಈ ವೇಳೆ ಶಾರಿಕ್ ಕೂಡ ನಾನು ಟ್ರಕ್ಕಿಂಗ್ ಮಾಡುವವನು ಎಂದು ತರಬೇತಿ ಪಡೆದಿದ್ದಾನೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ಬಂಧಿತನಾಗಿ ವಿಚಾರಣೆ ನಡೆಸುತ್ತಿರುವ ಉಗ್ರ ಶಾರಿಕ್, ಈ ವಿಷಯವನ್ನು ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿರಬಹುದು. ಹೀಗಾಗಿ, ಕೊಡಗು ಮತ್ತು ಕೇರಳ ರಾಜ್ಯಗಳ ಗಡಿಭಾಗದಲ್ಲಿ ಇರುವ ವೆಸ್ಟ್ ನಮ್ಮೆಲೆ ಗ್ರಾಮ ಸಮೀಪದಲ್ಲಿ ಇರುವ ವೋಟೆಕಾಡ್ ನೇಚರ್ ಕ್ಯಾಂಪ್ ಹೋಂಸ್ಟೇಗೆ ಭಾನುವಾರ ಬೆಳಿಗ್ಗೆ ಬಂದ ಮಂಗಳೂರು ಪೊಲೀಸರ ತಂಡ ಪರಿಶೀಲನೆ ಮಾಡಿದೆ. ಅಲ್ಲದೆ ಹೋಂಸ್ಟೇ ಮಾಲೀಕ ನವೀನ್ ಮತ್ತು ಅಲ್ಲಿಯ ಸಿಬ್ಬಂದಿ ರಿಕ್ಕಿ ಎಂಬ ಇಬ್ಬರನ್ನು ಮಂಗಳೂರು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಹೆಚ್ಚಿನ ವಿಚಾರಣೆಗಾಗಿ ಸೋಮವಾರ ಮಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ ಎಂದು ಪೊಲೀಸ್ ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.

ಕುಕ್ಕರ್‌ ಬಾಂಬ್‌ ಸ್ಫೋಟ: ಶಂಕಿತ ಉಗ್ರ ಶಾರೀಕ್‌ಗೆ ಬರುತ್ತಿದ್ದ ಹಣದ ಮೂಲದ ಬಗ್ಗೆ ತನಿಖೆ

ಕೊಡಗು ಉಗ್ರ ತರಬೇತಿ ತಾಣ? 
ಇಲ್ಲಿ ಮುಖ್ಯವಾಗಿ ಗಮನಿಸುವುದಾದರೆ ಶಾರಿಕ್ ನಿಜವಾಗಿಯೂ ಅರಣ್ಯದಲ್ಲಿ ಇದ್ದುಕೊಂಡು ಭಯೋತ್ಪಾದನಾ ಚಟುವಟಿಕೆ ನಡೆಸುವ ಯೋಚನೆ ಈ ಉಗ್ರನಿಗೆ ಇತ್ತಾ ಎನ್ನುವ ಅನುಮಾನ ಕಾಡುತ್ತಿದೆ. ಈ ಹಿಂದೆ ಕೂಡ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದಲ್ಲಿ ಉಗ್ರ ಅಬ್ದುಲ್ ಮದನಿ ಅಡಗಿ ಬಾಂಬ್ ತಯಾರಿಕೆಯಲ್ಲಿ ನಿರತನಾಗಿದ್ದನು. ಈಗ ಶಾರಿಕ್ ಇಂತಹ ತರಬೇತಿಯನ್ನು ಪಡೆದಿರುವುದನ್ನು ನೋಡಿದರೆ ಕೊಡಗು ನಿಜವಾಗಿಯೂ ಉಗ್ರರ ತರಬೇತಿಯ ತಾಣವಾಗುತ್ತಿದೆಯಾ ಎನ್ನುವ ಅನುಮಾನ ದಟ್ಟವಾಗಿದೆ.

click me!