ಬೆಚ್ಚಿ ಬೀಳಿಸುತ್ತಿದೆ ಹಾವೇರಿ ರೈತರ ಆತ್ಮಹತ್ಯೆ, 10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್!

By Suvarna NewsFirst Published Nov 3, 2022, 3:10 PM IST
Highlights

ಈ ವರ್ಷ  ಭಾರಿ ಮಳೆ ಸುರಿದು ಆದ ಬೆಳೆ ಹಾನಿಗೆ ನೊಂದು ರೈತ ಜೀವ ಕಳೆದುಕೊಳ್ತಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಪೈರು ನೀರುಪಾಲಾಗಿ ರೈತ ನೇಣಿಗೆ ಕೊರಳೊಡ್ಡುತ್ತಿದ್ದಾನೆ. ಕೃಷಿ ಸಚಿವರ ಜಿಲ್ಲೆ ಹಾವೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಬೆಚ್ಚಿ ಬೀಳಿಸುತ್ತಿದೆ.

ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ(ಅ.3): ಈ ವರ್ಷ  ಭಾರಿ ಮಳೆ ಸುರಿದು ಆದ ಬೆಳೆ ಹಾನಿಗೆ ನೊಂದು ರೈತ ಜೀವ ಕಳೆದುಕೊಳ್ತಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಪೈರು ನೀರುಪಾಲಾಗಿ ರೈತ ನೇಣಿಗೆ ಕೊರಳೊಡ್ಡುತ್ತಿದ್ದಾನೆ. ಕಳೆದ ಐದಾರು ವರ್ಷಗಳ ಹಿಂದೆ ಬರಗಾಲಕ್ಕೆ ತುತ್ತಾಗಿದ್ದ  ಜಿಲ್ಲೆಯ ಅನ್ನದಾತರು ಈಗ ಅತಿವೃಷ್ಟಿ ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ. ಕೃಷಿ ಸಚಿವರ ಜಿಲ್ಲೆ ಹಾವೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಬೆಚ್ಚಿ ಬೀಳಿಸುತ್ತಿದೆ. ದೇಶದ ಬೆನ್ನೆಲುಬು ಅಂತ ಕರೆಯೋ ರೈತ ನಿರಂತರ ಬೆಳೆ ಹಾನಿ ಹಾಗೂ ಸಾಲದ ಹೊಡೆತಕ್ಕೆ ಸಿಲುಕಿ ಜೀವ ಕಳೆದುಕೊಳ್ತಿದ್ದಾರೆ. ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಕೃಷಿ ಸಚಿವ ಬಿ.ಸಿ ಪಾಟೀಲ್ ತವರು ಜಿಲ್ಲೆ. ಹಾವೇರಿ ಜಿಲ್ಲೆಯಲ್ಲಿ ಜೂನ್‌ನಿಂದ ಇಲ್ಲಿಯವರೆಗೆ 56 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022ನೇ ಸಾಲಿನಲ್ಲಿ ಈ ವರೆಗೆ ಒಟ್ಟು 112 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 

10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್: ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಪ್ರಕೃತಿ ಮುನಿಸಿಕೊಂಡರೆ ಮೊದಲು ಸಂಕಷ್ಟಕ್ಕೆ ಸಿಲುಕುವವನೆ ಅನ್ನದಾತ. 2015 ರಲ್ಲಿ ಮಂಡ್ಯ ಬಿಟ್ಟರೆ ರಾಜ್ಯದಲ್ಲಿ ಅದರಲ್ಲೂ  ಹಾವೇರಿಯಲ್ಲೇ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗುತ್ತಿದೆ. ನಿರಂತರ ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟ ಎದುರಿಸಿದ್ದರು. ಅದಲ್ಲದೆ  ಈಗ ಅತಿವೃಷ್ಟಿ, ಪ್ರವಾಹ, ಮಳೆಯಿಂದ ಹೊಲದಲ್ಲಿ ನಿಂತ ನೀರು, ಮಳೆ ನಿಂತ ನಂತರ ಭೂಮಿಯಿಂದ ಉಕ್ಕುತ್ತಿತ್ತಿರುವ ಅಂತರ್ಜಲ, ಜಾನುವಾರಗಳಿಗೆ ವಿಚಿತ್ರ ಕಾಯಿಲೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸಿ ಬೆಳೆಹಾನಿಯಿಂದ ಮಾಡಿದ ಸಾಲವನ್ನೂ ತೀರಿಸಲಾಗದೆ ರೈತರು ಕಂಗಾಲಾಗಿದ್ದಾರೆ. ಸಾಲ-ಶೂಲ ಮಾಡಿ ಬಿತ್ತನೆ ಮಾಡಿದ ಖರ್ಚು ಕೂಡ ರೈತರ ಕೈ ಸೇರಿಲ್ಲ. ಸರ್ಕಾರ ನೀಡುವ ಪರಿಹಾರವನ್ನೇ ರೈತರು ನೆಚ್ಚಿಕೊಳ್ಳುವಂತಾಗಿದ್ದು. ಮಾಡಿದ ಸಾಲತೀರಿಸಲಾಗದೇ ನಿತ್ಯವೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ
ವರದಿಯಾಗುತ್ತಿವೆ.

ಹಾವೇರಿ ಜಿಲ್ಲೆಯಲ್ಲಿ ಜೂನ್‌ ನಿಂದ ಶುರುವಾದ ಮಳೆಗಾಲ ಇನ್ನೂ ಮುಗಿದಿಲ್ಲ. ನೆರೆ, ಅತಿವೃಷ್ಟಿಯಿಂದ ಮುಂಗಾರು ಬೆಳೆಗಳೆಲ್ಲ ರೈತರಿಗೆ ಕೈಕೊಟ್ಟಿವೆ. ಬೆಳೆದ ಬೆಳೆಗಳು ಕೊಳೆತು ಹಾಳಾಗಿವೆ. ಕೃಷಿ, ತೋಟಗಾರಿಕೆ, ತರಕಾರಿ ಬೆಳೆಗಳು ಹಾನಿಯಾಗಿವೆ. ಅಳಿದುಳಿದ ಬೆಳೆಗಳನ್ನೂ ಕಟಾವು ಮಾಡಲಾಗದೇ ರೈತರು ಕಂಗಾಲಾಗಿದ್ದಾರೆ. ಬಡ ರೈತರು ಮುಂದೇನು ಮಾಡಬೇಕು ಎಂದು ಗೊತ್ತಾಗದೇ, ಮಾಡಿದ ಸಾಲಕ್ಕೆ ಹೆದರಿ ಆತ್ಮಹತ್ಯೆಯತ್ತ ಹೆಜ್ಜೆ ಇಡುತ್ತಿರುವ ಆತಂಕಕಾರಿ ಬೆಳವಣಿಗೆಗಳು  ಜಿಲ್ಲೆಯಲ್ಲಿ ನಡೆಯುತ್ತಲೆ ಇವೆ.

Mysuru : 22 ದಿನಗಳಿಂದ 5 ಸಾವಿರ ಎಕರೆ ಭತ್ತದ ಬೆಳೆಗೆ ನೀರಿಲ್ಲ

ಈ ವರ್ಷದ ಜನವರಿಯಿಂದ ಇದುವರೆಗಿನ 10 ತಿಂಗಳಲ್ಲಿ ಒಬ್ಬರು ರೈತ ಮಹಿಳೆ ಸೇರಿದಂತೆ ಬರೋಬ್ಬರಿ 112 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಜೂನ್‌ ನಿಂದ ಇಲ್ಲಿಯವರೆಗೆ 56 ರೈತ ಆತ್ಮಹತ್ಯೆ ಕೇಸ್ ಗಳು ದಾಖಲಾಗಿವೆ. ಅದರಲ್ಲೂ ಸೆಪ್ಟೆಂಬರ್ ತಿಂಗಳಲ್ಲೇ ಬರೋಬ್ಬರಿ 20 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Chikkaballapura: ಎಲ್ಲಾ ಬೆಳೆ ಕಳೆದುಕೊಂಡ ರೈತರಿಗೆ ಈಗ ಭತ್ತದ ಆಸರೆ

ಬಿತ್ತನೆ ಮಾಡಿದ ಖರ್ಚು ಕೂಡ ರೈತರಿಗೆ ಈ ಬಾರಿ  ದೊರೆತಿಲ್ಲ. ಸರ್ಕಾರ ನೀಡುವ   ಪರಿಹಾರವನ್ನೇ ರೈತರು ನೆಚ್ಚಿಕೊಳ್ಳುವಂತಾಗಿದ್ದು, ಮಾಡಿದ ಸಾಲ ತೀರಿಸಲಾಗದೇ ನಿತ್ಯವೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರು ಬೆಳೆಹಾನಿ ಮತ್ತು ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಒಂದೆಡೆ ಬಿದ್ದ ಹೊಡೆತಕ್ಕೆ ಸಾಲ ಮಾಡಿ  ತೊಂದರೆ ಅನುಭವಿಸಿದ್ದ ರೈತರು ಈ ವರ್ಷ ಅತಿಯಾದ ಮಳೆಗೆ ನಲುಗಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ. ಬ್ಯಾಂಕು, ಫೈನಾನ್ಸ್ ಗಳು, ಕೈಗಡ ಸಾಲ ಹೀಗೆ ಸಾಲ ಮಾಡಿಕೊಂಡಿರುವ ರೈತರು, ಅದನ್ನು ತೀರಿಸಲಾಗದೇ ನೇಣಿಗೆ ಕೊರಳೊಡ್ಡುತ್ತಿದ್ದಾರೆ. 

click me!