ಬಂಟ್ವಾಳ: ನೀರಿಲ್ಲದೆ ಕೃಷಿ ನಾಶ, ಮನನೊಂದು ರೈತ ಆತ್ಮಹತ್ಯೆ

By Kannadaprabha NewsFirst Published May 9, 2024, 12:04 PM IST
Highlights

ಪುತ್ತೂರು ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಭಾಸ್ಕರ್ ರೈ ಆತ್ಮಹತ್ಯೆ ಮಾಡಿದವರು. ಭಾಸ್ಕರ್ ರೈ ಅವರು ಪುದು ಗ್ರಾಮದ ಪೆಲಪಾಡಿ ಎಂಬಲ್ಲಿ ಪತ್ನಿಯ ತಮ್ಮನ ಮನೆಯ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಟ್ವಾಳ(ಮೇ.09):  ನೀರಿನ‌ ಸಮಸ್ಯೆಯಿಂದ ಕೃಷಿ ನಾಶವಾಗಿದ್ದು, ಇದರಿಂದ ಮನನೊಂದ ಕೃಷಿಕರೊಬ್ಬರು ಕುಡಿಯಲು ನೀರು ಸೇದುವ ಬಾವಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ವೇಳೆ ನಡೆದಿದೆ.

ಪುತ್ತೂರು ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಭಾಸ್ಕರ್ ರೈ (53) ಆತ್ಮಹತ್ಯೆ ಮಾಡಿದವರು. ಭಾಸ್ಕರ್ ರೈ ಅವರು ಪುದು ಗ್ರಾಮದ ಪೆಲಪಾಡಿ ಎಂಬಲ್ಲಿ ಪತ್ನಿಯ ತಮ್ಮನ ಮನೆಯ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾಸ್ಕರ್ ರೈ ಅವರು ಪುತ್ತೂರಿನ ಕೆದಂಬಾಡಿ ಗ್ರಾಮದಲ್ಲಿ ವಾಸವಾಗಿದ್ದು, ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪೆಲಪಾಡಿಯಿಂದ ಮದುವೆಯಾಗಿದ್ದರು‌. ಕೃಷಿಯನ್ನು ನಂಬಿ ಬದುಕುತ್ತಿದ್ದ ಇವರಿಗೆ ಇತ್ತೀಚಿನ ದಿನಗಳಲ್ಲಿ ಕೃಷಿಗೆ ನೀರಿನ ಸಮಸ್ಯೆ ಉಂಟಾಗಿ ಕೃಷಿಗೆ ಹಾನಿಯಾಗಿತ್ತು.

ದಾಬಸ್‌ಪೇಟೆ: ಫೋನ್ ಬಳಸಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ

ಕೃಷಿಯೇ ಮೂಲಾಧಾರವಾಗಿದ್ದ ಇವರಿಗೆ ನೀರಿನ ಸಮಸ್ಯೆಯಿಂದ ಕೃಷಿ ಹಾಳಾದ ಕಾರಣ ಮನನೊಂದು, ನಿದ್ರಾಹೀನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಪತ್ನಿಯ ತಮ್ಮನ ಮನೆ ಪುದುವಿಗೆ ಬಂದಿದ್ದರು. ಅಲ್ಲಿಂದ ನಿದ್ರಾಹೀನತೆ ಸಮಸ್ಯೆಗೆ ಪರಿಹಾರಕ್ಕಾಗಿ ಮಂಗಳೂರಿನ ವೈದ್ಯರ ಬಳಿಗೆ ಚಿಕಿತ್ಸೆಗೆ ತೆರಳಿ ವಾಪಸ್‌ ಬಾವನ ಮನೆಯಲ್ಲಿ ಉಳಿದುಕೊಂಡಿದ್ದರು.

ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದು, ಮಧ್ಯ ರಾತ್ರಿ ಇವರು ಮಲಗಿದ್ದಲ್ಲಿ ಇಲ್ಲದೆ ಕಾಣೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ಬಾವಿಯಲ್ಲಿ ನೀರು ಎಳೆಯಲು ಹಾಕಿರುವ ರಾಟೆಯ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಮ್ಮಶುಭಕರ ರೈ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!