Bengaluru: ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ವ್ಯಾಪಾರಿಗಳ ಸುಲಿಗೆ: 7 ಜನರ ಬಂಧನ

By Govindaraj SFirst Published Nov 19, 2022, 2:59 PM IST
Highlights

ಅಕ್ರಮ ವ್ಯವಹಾರ ನಡೆಸುತ್ತಿದ್ದೀರಿ, ಪ್ರಕರಣ ದಾಖಲಿಸುವುದಾಗಿ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿ 7 ಮಂದಿ ಕಿಡಿಗೇಡಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ನ.19): ಅಕ್ರಮ ವ್ಯವಹಾರ ನಡೆಸುತ್ತಿದ್ದೀರಿ, ಪ್ರಕರಣ ದಾಖಲಿಸುವುದಾಗಿ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿ 7 ಮಂದಿ ಕಿಡಿಗೇಡಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಬಾಣವಾರ ಪ್ರಕಾಶ್‌ ಮೂರ್ತಿ, ವಿಜಯನಗರ ಪ್ರದೀಪ್‌ ಗೌಡ, ದಾಸನಪುರದ ಧ್ರುವರಾಜ್‌, ಮಾದವಾರದ ರಮ್ಯಾ, ಅಂಚೆಪಾಳ್ಯದ ಸುಶ್ಮಿತಾ, ನೆಲಮಂಗಲದ ಹತ್ತಿರದ ನಾರಾಯಣಪುರ ಜಯಲಕ್ಷ್ಮಿ ಹಾಗೂ ಇಂದ್ರ ಬಂಧಿತರಾಗಿದ್ದು, ಆರೋಪಿಗಳಿಂದ  2 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಭದ್ರಪ್ಪ ಲೇಔಟ್‌ನ ಅಂಗಡಿಗಳಿಗೆ ತೆರಳಿ ವ್ಯಾಪಾರಿಗಳನ್ನು ಬೆದರಿಸಿ ಆರೋಪಿಗಳು ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದವನಿಗೆ ಮರಣದಂಡನೆ

ಸುಲಿಗೆಯೇ ಜೀವನ: ಈ ನಕಲಿ ಮಾನವ ಹಕ್ಕುಗಳ ಆಯೋಗದ ತಂಡಕ್ಕೆ ಪ್ರದೀಪ್‌ ನಾಯಕನಾಗಿದ್ದು, ಆತನ ವಿರುದ್ಧ ಬೆಂಗಳೂರು, ತುಮಕೂರು, ರಾಯಚೂರು ಹಾಗೂ ಮೈಸೂರಿನಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಮತ್ತೊಬ್ಬ ಆರೋಪಿ ಪ್ರಕಾಶ್‌ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್‌ ಹಿನ್ನಲೆಯ ಈ ಇಬ್ಬರು, ವ್ಯಾಪಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಣವಂತರನ್ನು ಬೆದರಿಸಿ ಹಣ ಸುಲಿಗೆ ಮಾಡಿಸುವ ಸಲುವಾಗಿ ಜೈ ಭೀಮ್‌ ಸೇವಾ ಟ್ರಸ್ಟ್‌ ಮತ್ತು ಭಾರತೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹೆಸರಿನ ಸಂಘಟನೆ ಸ್ಥಾಪಿಸಿದ್ದರು. ತನ್ನ ಕಾರಿನ ಮೇಲೆ ಜೈ ಭೀಮ್‌ ಸೇವಾ ಟ್ರಸ್ಟ್‌ ಅಧ್ಯಕ್ಷ ಎಂಬುದಾಗಿ ಪ್ರಕಾಶ್‌ ನಾಮ ಫಲಕ ಹಾಕಿಕೊಂಡಿದ್ದ.

ಅಂಗಡಿಗಳಿಗೆ ನುಗ್ಗಿ ತಾವು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಆಗ ವ್ಯಾಪಾರಸ್ಥರಿಗೆ ಅಕ್ರಮವಾಗಿ ಕಾನೂನು ಬಾಹಿರ ವಸ್ತುಗಳನ್ನು ಮಾರಾಟ ಮಾಡುತ್ತೀರ ಎಂದು ಬೆದರಿಸುತ್ತಿದ್ದ ಆರೋಪಿಗಳು, ನಿಮ್ಮ ಮೇಲೆ ಪ್ರಕರಣ ದಾಖಲಿಸಬಾರದು ಎಂದರೆ 10ರಿಂದ 50 ಸಾವಿರ ರವರೆಗೆ ಹಣಕ್ಕೆ ಬೇಡಿಕೆ ಒಡ್ಡುತ್ತಿದ್ದರು. ಹಣ ಕೊಡದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Bengaluru: ಟಾಕಿಂಗ್‌ ಟಾಮ್‌ ಬಳಸಿ ಡ್ರಗ್ಸ್‌ ಕಳ್ಳಸಾಗಣೆ: ಮೂವರ ಬಂಧನ

ಅದರಂತೆ ನ.14ರಂದು ಕೊಡಿಗೇಹಳ್ಳಿ ಸಮೀಪದ ಭದ್ರಪ್ಪ ಲೇಔಟ್‌ನಲ್ಲಿ ಅಂಗಡಿಗೆ ಗ್ಯಾಸ್‌ ಏಜೆನ್ಸಿ ಹಾಗೂ ಫ್ಯಾನ್ಸಿ ಸ್ಟೋರ್‌ಗಳ ಮೇಲೆ ಆರೋಪಿಗಳು ದಾಳಿ ನಡೆಸಿದ್ದರು. ಆಗ ಅಂಗಡಿ ಮೇಲೆ ಕೇಸ್‌ ದಾಖಲು ಮಾಡುತ್ತೇವೆ ಎಂದು ಬೆದರಿಸಿ .7 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಬಳಿಕ ಆರೋಪಿಗಳ ವರ್ತನೆ ಮೇಲೆ ಶಂಕೆಗೊಂಡ ವ್ಯಾಪಾರಿಗಳು, ಕೊಡಿಗೇಹಳ್ಳಿ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಉಪ್ಪಾರಪೇಟೆ ಸಮೀಪ ಮತ್ತೊಂದು ಅಂಗಡಿಗೆ ನುಗ್ಗಿ ಹಣ ವಸೂಲಿ ಮಾಡುವಾಗಲೇ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!