Davanagere: ಕೊಲೆ ಆರೋಪಿ 8 ಕಿ.ಮೀ. ದೂರವಿದ್ದರೂ ಪತ್ತೆಹಚ್ಚಿದ ಪೊಲೀಸ್‌ ಡಾಗ್‌ ತಾರಾ

By Sathish Kumar KHFirst Published Aug 9, 2023, 8:46 PM IST
Highlights

ಹಣ ಕೊಟ್ಟು ವಾಪಸ್‌ ಕೊಡದ ಸ್ನೇಹಿತನ ಮೇಲಿನ ಹಳೆಯ ದ್ವೇಷಕ್ಕಾಗಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು 8 ಕಿ.ಮೀ ಓಡಿಹೋಗಿ ಪತ್ತೆಹಚ್ಚಿದ ದಾವಣಗೆರೆ ಪೊಲೀಸ್‌ ಡಾಗ್‌ ತಾರಾ.

ವರದಿ- ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್
ದಾವಣಗೆರೆ (ಆ.09): ಹಳೇ ವೈಷಮ್ಯ ಹಿನ್ನಲೆ ಯುವಕನ ಕೊಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ತಾರಾಳ ಸಹಾಯದಿಂದ ಬೇಧಿಸಿದ್ದಾರೆ. ಕೊಲೆ ನಡೆದು 12 ಗಂಟೆ ಕಳೆಯುವಷ್ಟರಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಪೊಲೀಸರಿಗೆ ಸಾಧ್ಯವಾಗಿದ್ದು ಡಾಗ್ ಸ್ಕ್ವಾಡ್‌ಗೆ ಹೊಸದಾಗಿ ಬಂದು ಕ್ರೈಂ ಬ್ರಾಂಚ್ ಗೆ ಬಲ ತುಂಬಿರುವ ತಾರಾ ಎಂಬ ಶ್ವಾನ. ತಾರಾ ಶ್ವಾನ ಕೊಲೆ ನಡೆದ ಸ್ಥಳದಿಂದ ಸುಮಾರು 8 ಕಿ ಮಿ ದೂರ ಕ್ರಮಿಸಿ ಆರೋಪಿ ಮನೆ ಬಳಿ ನಿಂತಿದ್ದು ಇವನೇ ಕೊಲೆಗಾರ ಎಂದು ಸುಳಿವು ನೀಡಿತ್ತು. ಶ್ವಾನದ ವಾಸನೆ ಹಿಡಿದ ದಾವಣಗೆರೆ ಗ್ರಾಮಾಂತರ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ ಕೊಲೆ ಹಿಂದಿನ ಕಾರಣ ಸತ್ಯ ಬಿಚ್ಚಿಟ್ಟಿದ್ದಾರೆ. ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ  ಆ.6 ರಂದು ಯುವಕನೊಬ್ಬನ ಕೊಲೆ ನಡೆದಿದೆ. ಯಾವುದೋ ಕೊಲೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಮಲ್ಲಶೆಟ್ಟಿಹಳ್ಳಿ ಕ್ರಾಸ್ ಗೆ ಓಡಿದ್ದಾರೆ. ಯುವಕನ ತಲೆಗೆ ಬಲವಾಗಿ ದೊಣ್ಣೆ ರಾಡ್ ನಿಂದ ಹೊಡೆದ ಗುರುತುಗಳಿದ್ದು ಇದು ನೋಡಿದ ತಕ್ಷಣ ಕೊಲೆ ಇರಬಹುದು ಪೊಲೀಸರು ಶಂಕಿಸಿದ್ದಾರೆ. ಆತನ ಗುರುತು ವಿಳಾಸ ಪತ್ತೆ ಹಚ್ಚಿದಾಗ  ಈತ ರಾಮನಗರ  26 ವರ್ಷದ ಯುವಕ  ನರಸಿಂಹ ಎಂಬುದು ಪೊಲೀಸರಿಗೆ ತಿಳಿದುಬಂದಿದೆ. 

ಪುನೀತ್, ಸ್ಪಂದನಾ ಸಾವಿನ ಬೆನ್ನಲ್ಲೇ, ಕೇರಳ ತಂತ್ರಿಗಳ ಬಳಿ ಅಷ್ಟಮಂಗಳ ಪ್ರಶ್ನೆ: ಈಡಿಗ ಸ್ವಾಮೀಜಿ ಮುಂದಾಳತ್ವ

ನರಸಿಂಹ ಸಾವಿನ ಬಗ್ಗೆ ದೂರು ದಾಖಲು: ರಾಮನಗರದ ಯುವಕ ಕೊಲೆ ಪ್ರಕರಣದ ಬಗ್ಗೆ ಆ.7 ರಂದು ಶ್ರೀರಾಮನಗರದ ಲಲಿತಮ್ಮ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಶ್ರೀರಾಮನಗರ ವಾಸಿಯಾದ ನಮ್ಮ ತಂಗಿ ತಿಮ್ಮಕ್ಕನ ಮಗ ನರಸಿಂಹ, ಮಲ್ಲಶೆಟ್ಟಿಹಳ್ಳಿ ಹತ್ತಿರ ಎನ್.ಹೆಚ್-48 ರಸ್ತೆಯ ಸರ್ವಿಸ್ ರಸ್ತೆಯಲ್ಲಿ ತೀರಿಕೊಂಡಿರುತ್ತಾನೆಂದು ತಿಳಿದು ಬಂದ ಮೇರೆಗೆ ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಸರ್ವಿಸ್ ರಸ್ತೆಯ ಬದಿಯಲ್ಲಿ ನರಸಿಂಹನ ಹೆಣ ಬಿದ್ದಿತ್ತು. ಈತನ ತಲೆಗೆ ಬಲವಾದ ರಕ್ತಗಾಯವಾಗಿ ನೆಲದ ಮೇಲೆ ರಕ್ತ ಹರಿದಿತ್ತು. ಆ.6 ರಂದು ರಾತ್ರಿ ಯಾವುದೋ ಸಮಯದಲ್ಲಿ ನರಸಿಂಹನ ತಲೆಗೆ ಯಾರೋ ಯಾವುದೋ ಕಾರಣಕ್ಕೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಇವರ ಮೇಲೆ ಕಾನೂನು ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.  

ಎಂಟು ಕಿಲೋಮೀಟರ್‌ ನಿಲ್ಲದೇ ಓಡಿದ ಶ್ವಾನ: ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ತಕ್ಷಣ ಕೊಲೆ ಮಾಡಿದ ಆರೋಪಿಗಳನ್ನು ಸೆರೆಹಿಡಿಯಲು ಕಾರ್ಯಪ್ರವೃತ್ತರಾಗಿದ್ದಾರೆ.. ದಾವಣಗೆರೆ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಕಿರಣ್‌ ಕುಮಾರ್ ನೇತೃತ್ವದಲ್ಲಿ ಆರೋಪಿತರ ಪತ್ತೆಕಾರ್ಯಕ್ಕೆ ಹಾರೂನ್ ಅಖರ್, ಪಿಎಸ್‌ಐ ನೇತೃತ್ವದ ಪೊಲೀಸ್ ತಂಡ ಹಾಗೂ ದಾವಣಗೆರೆ ಜಿಲ್ಲಾ ಡಾಗ್ ಸ್ಟಾಡ್‌ ಕೈಂ ವಿಭಾಗದ 'ತಾರಾ' ಎಂಬ ಶ್ವಾನವು  ಮುಂದಾಗಿದೆ. ಕೊಲೆಯಾದ ಮಲ್ಲಶೆಟ್ಟಿಹಳ್ಳಿ ಕ್ರಾಸ್ ನಿಂದ ಹೊರಟ ತಾರಾ ಶ್ವಾನ.. ಎನ್ ಹೆಚ್ 4 ರಸ್ತೆ ಮುಖಾಂತರ ಬಾಡಾ ಕ್ರಾಸ್ ವರೆಗು ಬಂದು, ನಂತರ ಎಸ್ ಎಸ್ ಹೈಟೆಕ್ ಆಸ್ಪತ್ರೆ ದಾಟಿ ಸುಮಾರು 8 ಕಿ ಮೀ ಗಳನ್ನು ಕ್ರಮಿಸಿ  ಶ್ರೀರಾಮನಗರದ ಮನೆಯೊಂದರ ಬಳಿ ನಿಂತಿದೆ. ಆ ಮನೆಯಲ್ಲಿ ವಾಸವಾಗಿದ್ದವನು ಬೇರೆ ಯಾರು ಅಲ್ಲ.. ಕೊಲೆ ಮಾಡಿದ ಶಿವಯೋಗಿ ಎಂಬುದು ಪೊಲೀಸರಿಗೆ ಖಚಿತವಾಗಿದೆ. ಸುಮಾರು ಎಂಟು ಕಿ.ಮೀ ಕ್ರಮಿಸಿ ಆರೋಪಿತರ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾದ ತಾರಾ ಕಾರ್ಯಕ್ಕೆ ಪೊಲೀಸರೇ ಅಚ್ಚರಿಪಟ್ಟಿದ್ದಾರೆ.  

ಮುತ್ತೈದೆ ಸಾವಿನ ಭಾಗ್ಯ ಕಂಡ ಸ್ಪಂದನಾಗೆ ತಾಳಿ ಕಟ್ಟಿ ಕಳಿಸಿಕೊಟ್ಟ ವಿಜಯ್‌

ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿ: ಕೊಲೆ ಆರೋಪಿ ಶಿವಯೋಗಿ ಮತ್ತು ನರಸಿಂಹ ಇಬ್ಬರೂ ಪರಿತರರು, ಹೆಚ್ಚಾಗಿ ಸ್ನೇಹಿತರೂ ಆಗಿದ್ದರು. ನರಸಿಂಹ ನಿಮ್ಮ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿ ಶಿವಯೋಗಿ ಬಳಿ 35 ಸಾವಿರ ರೂ. ಅಡ್ವಾನ್ಸ್‌ ಹಣ ಪಡೆದಿದ್ದಾನೆ. ನಂತರ, ಎಷ್ಟು ಬಾರಿ ಕೆಲಸಕ್ಕೆ ಕರೆದರೂ ಬಂದಿಲ್ಲ. ಇದಾದ ನಂತರ ಹಣವನ್ನು ಮರಳಿಸಿ ಕೊಡು ಎಂದರೂ ಕೊಡದೇ ಸತಾಯಿಸಿದ್ದಾನೆ. ನಂತರ ಶಿವಯೋಗಿ ಪೊಲೀಸ್‌ ಠಾಣೆಗೆ ದೂರು ನೀಡಿದ, ನರಸಿಂಹನನ್ನು ಜೈಲಿಗೆ ಕಳುಹಿಸಿದ್ದನು. ನರಸಿಂಹನ ಮೇಲೆ  ನಾವು ದಾವಣಗೆರೆ ವಿದ್ಯಾನಗರ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ  ಜೈಲಿಗೆ ಹೋಗಿ ಬಂದ ಸಿಟ್ಟಿನಿಂದ ಶಿವಯೋಗಿ ಮೇಲೆ ದ್ವೇಷ ಸಾಧಿಸುತ್ತಿದ್ದನು. ಹೀಗೆ ಬಿಟ್ಟರೆ ಮುಂದೊಂದು ದಿನ ನನ್ನನ್ನು ಕೊಲೆ ಮಾಡುತ್ತಾನೆಂಬ ಭಯದಿಂದ ನರಸಿಂಹನನ್ನು ಆ.6 ರಂದು  ರಾತ್ರಿ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ ಸರ್ವಿಸ್ ರಸ್ತೆ ಪಕ್ಕದಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿ ಆಗಿದ್ದನು.

ಪೊಲೀಸರು ಆರೋಪಿ ಶಿವಯೋಗಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಆರೋಪಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸಪೆಕ್ಟರ್  ಕಿರಣ್ ಕುಮಾರ್, ಪಿಎಸ್ ಐ  ಹಾರೂನ್ ಅಖರ್, ಪಿಎಸ್‌ಐ,  ಎ.ಎಸ್.ಐ ನಾರಪ್ಪ  ಮತ್ತು ಸಿಬ್ಬಂದಿ ಹಾಗು ಡಾಗ್ ಸ್ವ್ಕಾಡ್ ನ ತಾರಾ ಬಳಗವನ್ನು ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ ಅರುಣ್ ಶ್ಲಾಘಿಸಿರುತ್ತಾರೆ.

click me!