
ವಿಜಯಪುರ (ಜೂ. 30): ಕೃಷ್ಣಾತೀರದ ನರಭಕ್ಷಕ ಮೊಸಳೆಗೆ (Crocodile)ಮತ್ತೊಂದು ಜೀವ ಬಲಿಯಾಗಿದೆ. ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೃಷ್ಣಾನದಿ ತೀರದ ಹಂಡರಗಲ್ ಗ್ರಾಮದ ನದಿತೀರದಲ್ಲಿ ಘಟನೆ ನಡೆದಿದ್ದು, ಹಂಡರಗಲ್ ಗ್ರಾಮದ ನಾಗಪ್ಪ ಸಂಜೀವಪ್ಪ ಉಂಡಿ (55) ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಕೃಷ್ಣಾನದಿ ತೀರಕ್ಕೆ ನಾಗಪ್ಪ ಉಂಡಿ ಆಡು ಮೇಯಿಸಲು ಹೋಗಿದ್ದರು. ಆಡುಗಳು ಮನೆಗೆ ಮರಳಿದ್ದವು, ಆದರೆ ನಾಗಪ್ಪ ನಾಪತ್ತೆಯಾಗಿದ್ದರು.
ಗ್ರಾಮದ ನದಿತೀರದಲ್ಲಿ ಇಂದು ಶವ ನಾಗಪ್ಪ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನರಭಕ್ಷಕ ಮೊಸಳೆಗೆ ಎರಡು ಬಲಿ: ಇನ್ನು ನರಭಕ್ಷಕ ಮೊಸಳೆಗಳಿಗೆ ಬಲಿಯಾದ ಈ ತಿಂಗಳಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಇದೇ ಹಂಡರಗಲ್ ಗ್ರಾಮದ ಬಳಿಯ ನಾಗರಾಳ ಗ್ರಾಮದ ವ್ಯಕ್ತಿ ಕಳೆದ ತಿಂಗಳು ಜೀವ ಕಳೆದುಕೊಂಡಿದ್ದರು. ಇದೇ ಜೂನ್ ತಿಂಗಳ 2ರಂದು ನಾಗರಾಳ ಗ್ರಾಮದ ಮಲ್ಲನಗೌಡ.ಎಸ್.ಬಿರಾದಾರ (50) ಮೊಸಳೆಗೆ ಬಲಿಯಾಗಿದ್ದರು. ನದಿತೀರಕ್ಕೆ ಸ್ನಾನಕ್ಕೆಂದು ಹೋಗಿ ಮಲ್ಲನಗೌಡ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ಚಿತೆ ಮೇಲಿದ್ದ ಮಹಿಳೆಯ ಶವ ಎತ್ತಿ ನೆಲಕ್ಕೆ ಬಡಿದು, ಕಾಲಿನಿಂದ ತುಳಿದ ಕಾಡಾನೆ!
2 ದಿನದ ನಂತರ ಮೊಸಳೆ ತಿಂದು ಛಿದ್ರವಾಗಿದ್ದ ಶವ ಪತ್ತೆಯಾಗಿತ್ತು. 2 ದಿನದ ಕಾರ್ಯಾಚರಣೆ ನಂತರ ಜೂನ್ 4ರಂದು ಮಲ್ಲನಗೌಡನ ಶವ ಪತ್ತೆಯಾಗಿತ್ತು. ಇದೀಗ ಇದೇ ಗ್ರಾಮದ ಬಳಿಯ ಹಂಡರಗಲ್ ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿದೆ.
ಗ್ರಾಮಸ್ಥರ ಆಕ್ರೋಶ: ನರಭಕ್ಷಕ ಮೊಸಳೆ/ಮೊಸಳೆಗಳ ಕಾರಣದಿಂದಾಗಿ ನದಿತೀರದ ಗ್ರಾಮದವರಲ್ಲಿ ಆತಂಕ ಸೃಷ್ಟಿಯಾಗಿದೆ. ನರಭಕ್ಷಕ ಮೊಸಳೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಮೊಸಳೆ ಬಲಿಯಾದೊಡನೆ ಅರಣ್ಯ ಇಲಾಖೆ ವ್ಯಾಪಕ ಜಾಗೃತಿ ಪ್ರಚಾರ ಮಾಡಬೇಕಿತ್ತು. ಮಾಡಿದ್ದರೆ ಇಂದಿನ ಘಟನೆ ತಪ್ಪಿಸಬಹುದಿತ್ತೆಂದು ಗ್ರಾಮಸ್ಥರು ಆಕ್ರೋಶ ಹೊರಾಹಿದ್ದಾರೆ
ಇದನ್ನೂ ಓದಿ: ನದಿ ತೀರದ ಗ್ರಾಮಸ್ಥರಿಗೆ ಭೀತಿ, ಬಾಗಲಕೋಟೆಯಲ್ಲಿ ಹೆಚ್ಚುತ್ತಿದೆ ಮೊಸಳೆ ಪಾರ್ಕ್ ಬೇಡಿಕೆ
ಮೊದಲ ಮೊಸಳೆ ಬಲಿಯಾದಾಗ ಡಂಗೂರ ಸಾರುವಂತೆ ಗ್ರಾ.ಪಂನವರಿಗೆ ಸೂಚಿಸಿ ಅರಣ್ಯ ಇಲಾಖೆ ಸುಮ್ಮನಾಗಿತ್ತು. ಆದರೆ ನರಭಕ್ಷಕ ಮೊಸಳೆಗೆ ಈಗ ಮತ್ತೊಂದು ಜೀವ ಬಲಿಯಾಗಿದೆ. ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಅನಾಹುತ ತಡೆಗಟ್ಟಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ