
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ(ಡಿ.12): ಸಾಲಬಾಧೆ ತಾಳಲಾರದೇ ರೈತ ದಂಪತಿ ತಮ್ಮದೇ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಾಲೂಕಿನ ಪಾಳ್ಯ ಬಳಿಯ ಕಟ್ಟೆಗದ್ದೆ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ನಟೇಶ್ (55), ಚಿನ್ನಮ್ಮ (45) ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ.
ಈ ದಂಪತಿ ಬ್ಯಾಂಕ್ ಮತ್ತು ಕೈಸಾಲವಾಗಿ ಲಕ್ಷ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ತಾವು ಬೆಳೆದಿದ್ದ ಬೆಳೆ ಕೈಕೊಟ್ಟಿತ್ತು. ಹೀಗಾಗಿ ನಿರೀಕ್ಷಿತ ಪ್ರಮಾಣದ ಆದಾಯದ ಆಸೆ ಕನಸಿನ ಮಾತಾಗಿತ್ತು. ಹೀಗಾಗಿ ಸಾಲ ತೀರಿಸಲು ಪರದಾಡುತ್ತಿದ್ದರು. ಈ ನಡುವೆ ಸಾಲ ಕೊಟ್ಟವರು ವಾಪಸ್ ಕೊಡಿ ಎಂದು ನಿತ್ಯವೂ ಒತ್ತಾಯ ಮಾಡುತ್ತಿದ್ದರು. ಒಂದೆಡೆ ಸಾಲಗಾರರ ಕಾಟ, ಮತ್ತೊಂದೆಡೆ ಬ್ಯಾಂಕ್ ಸಾಲ ತೀರಿಸುವುದು ಹೇಗೆ ಎಂದು ದಂಪತಿ ಚಿಂತೆಗೆ ಬಿದ್ದಿದ್ದರು.
ತುಮಕೂರು: ಪ್ರೀತಿಸಿದ ಹುಡುಗಿ ಮನೆ ಮುಂದೆಯೇ ಯುವಕ ಆತ್ಮಹತ್ಯೆ, ಕಾರಣ?
ಇದರಿಂದ ಚಿಂತಾಕ್ರಾಂತರಾದ ಚಿನ್ನಮ್ಮ, ನಿನ್ನೆ ತಡರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ ಎದ್ದಾಗ ಪತ್ನಿ ಮನೆಯಲ್ಲಿ ಇಲ್ಲದೇ ಇದ್ದುದನ್ನು ಕಂಡ ನಟೇಶ್ ಆತಂಕಗೊಂಡು, ಹುಡುಕಾಟ ನಡೆಸಿದ್ದರು. ಕಡೆಗೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿದ ಕೂಡಲೇ ಪತಿಯೂ ಸಾವಿನ ಹಾದಿ ತುಳಿದಿದ್ದಾರೆ.
ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎರಡೂ ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ. ಸಾಲದ ಶೂಲಕ್ಕೆ ಅಂಜಿ ದಂಪತಿ ಸಾವಿಗೆ ಶರಣಾಗಿರುವ ಘಟನೆ ಬಹುತೇಕರಲ್ಲಿ ಕಣ್ಣೀರು ತರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ