Chandrashekhar Guruji Murder: ಗುರೂಜಿ ಹಂತಕರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

Published : Jul 05, 2022, 03:09 PM ISTUpdated : Jul 05, 2022, 04:45 PM IST
Chandrashekhar Guruji Murder: ಗುರೂಜಿ ಹಂತಕರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಸಾರಾಂಶ

Chandrashekhar Guruji Murder Exclusive Information: ಸರಳ ವಾಸ್ತು ಮೂಲಕ ಜನಪ್ರಿಯರಾಗಿದ್ದ ಚಂದ್ರಶೇಖರ್‌ ಗುರೂಜಿ ಅವರನ್ನು ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಹುಬ್ಬಳ್ಳಿ: ಖ್ಯಾತ ಜ್ಯೋತಿಷಿ, ವಾಸ್ತು ತಜ್ಞ ಚಂದ್ರಶೇಖರ್‌ ಗುರೂಜಿಯವರ ಹತ್ಯೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಅದರಲ್ಲೂ ಕೊಲೆ ಮಾಡಿದ ರೀತಿ ಎಲ್ಲರಲ್ಲೂ ಭೀತಿ ಹುಟ್ಟಿಸುವಂತಿದೆ. ಇದೀಗ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ್‌ ಮರೆವಾಡನನ್ನು ಬಂಧಿಸಿದ್ದಾರೆ. ಘಟನೆಯ ಬೆನ್ನಲ್ಲೇ ವಿಶೇಷ ತನಿಖಾ ತಂಡವನ್ನು ಹುಬ್ಬಳ್ಳಿ - ಧಾರವಾಡ ಪೊಲೀಸ್‌ ಆಯುಕ್ತ ಲಾಬೂರಾಂ ರಚಿಸಿದ್ದರು. ತನಿಖಾ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಘಟನೆ ನಡೆದು ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣ ಏನು ಎಂಬುದರ ಬಗ್ಗೆ ತಿಳಿಯಲು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

ಜತೆಗಿದ್ದವರಿಂದಲೇ ಕೊಲೆ:

ಚಂದ್ರಶೇಖರ್‌ ಗುರೂಜಿ ಹತ್ಯೆಯನ್ನು ಮಾಡಿದವರು ಬೇರಾರೂ ಅಲ್ಲ ಅವರ ಜೊತೆಗೇ ಕೆಲಸ ಮಾಡಿಕೊಂಡಿದ್ದ ಮಹಾಂತೇಶ ಶಿರೂರು ಮತ್ತು ಮಂಜುನಾಥ್‌ ಮರೆವಾಡ. ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿ ಮಹಾಂತೇಶ ಶಿರೂರು. ಈತ ಈ ಹಿಂದೆ ಗುರೂಜಿ ಜೊತೆಗೇ ಕೆಲಸ ಮಾಡುತ್ತಿದ್ದ, ಆಕೆಯ ಪತ್ನಿಯೂ ಚಂದ್ರಶೇಖರ್‌ ಗುರೂಜಿ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಮಹಾಂತೇಶ ಶಿರೂರಿಗೆ ಮದುವೆ ಮಾಡಿಸಿದ್ದು ಕೂಡ ಚಂದ್ರಶೇಖರ್‌ ಗುರೂಜಿ ಎನ್ನಲಾಗಿದೆ. ಹತ್ಯೆಗಿರುವ ಕಾರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದು ರಿಯಲ್‌ ಎಸ್ಟೇಟ್‌ ವ್ಯವಹಾರ ಕಾರಣವಾಯಿತಾ ಎಂಬ ಬಗ್ಗೆ ವಿಚಾರಣೆ ಆರಂಭವಾಗಿದೆ. 

ಮೂಲಗಳ ಮಾಹಿತಿ ಪ್ರಕಾರ ಮಹಾಂತೇಶ ಶಿರೂರು ಗುರೂಜಿ ಜತೆ ಬಹಳ ವರ್ಷದಿಂದ ಜತೆಗಿದ್ದ. ಗೋಕುಲ್ ರೋಡ್​​ನ ಗೂರೂಜಿ ಅಪಾರ್ಟ್​ಮೆಂಟ್​ನಲ್ಲೇ ಹಂತಕ ವಾಸ ಮಾಡುತ್ತಿದ್ದ. ಗೋಕುಲ್ ರಸ್ತೆ ಡೆಕ್ತಾನ್​ ಹಿಂಭಾಗದ ಅಪಾರ್ಟ್​ಮೆಂಟ್​ನಲ್ಲಿ ಗುರೂಜಿ ವಾಸವಿದ್ದರು. 2016ರವರೆಗೂ ಗುರೂಜಿ ಜತೆಗೇ ಇದ್ದ ಮಹಾಂತೇಶ್ ಶಿರೂರು. 2019ರವರೆಗೂ ಗುರೂಜಿ ಜತೆಗೆ ಹಂತಕನ ಪತ್ನಿ ಕೆಲಸಕ್ಕಿದ್ದಳು. ಇವರಿಬ್ಬರಿಗೂ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Chandrashekhar Guruji Murder: 40 ಸೆಕೆಂಡ್‌ನಲ್ಲಿ 60 ಬಾರಿ ಚುಚ್ಚಿ ಕೊಲೆ, CCTVಯಲ್ಲಿ ಸೆರೆಯಾಯ್ತು ದೃಶ್ಯ 

40 ಸೆಕೆಂಡ್‌ಳಲ್ಲಿ 60 ಬಾರಿ ಚುಚ್ಚಿ ಕೊಲೆ:

ಏಷ್ಯಾನೆಟ್‌ ನ್ಯೂಸ್‌ಗೆ ಘಟನೆಯ ಸಿಸಿಟಿವಿ ದೃಶ್ಯ ಸಿಕ್ಕಿದ್ದು, ಚಂದ್ರಶೇಖರ್‌ ಗುರೂಜಿಗೆ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿರುವ ತೀವ್ರತೆಯನ್ನು ನೋಡಿದರೆ, ವೈಯಕ್ತಿಕ ವೈಷಮ್ಯದಿಂದಲೇ ಈ ಕೊಲೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವೈಯಕ್ತಿಕ ದ್ವೇಷವಿದ್ದಾಗ ವ್ಯಕ್ತಿ ಒಳಗಿರುವ ಎಲ್ಲಾ ಸಿಟ್ಟನ್ನು ಈ ರೀತಿ ಹೊರ ಹಾಕಿರುವ ಸಾವಿರಾರುಪ ಪ್ರಕರಣಗಳು ನಮ್ಮ ಕಣ್ಣಮುಂದಿದೆ. ನಲವತ್ತು ಸೆಕೆಂಡ್‌ಗಳಲ್ಲಿ ಅರವತ್ತು ಬಾರಿ ಚುಚ್ಚಿ ಚಂದ್ರಶೇಖರ್‌ ಗುರೂಜಿಯನ್ನು ಕೊಲೆ ಮಾಡಲಾಗಿದೆ. ಇಬ್ಬರು ಹಂತಕರು ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಸುಮಾರು ಒಂದು ನಿಮಿಷಗಳ ಅಂತರದೊಳಗೆ ಚಂದ್ರಶೇಖರ್‌ ಗುರೂಜಿಯನ್ನು ಹಂತಕರು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪ್ರಕರಣದ ಆರೋಪಿಗಳು ಹೋಟೆಲ್‌ನಿಂದ ಅಚೆ ಓಡಿ ಹೋಗುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಸಾಮಾನ್ಯವಾಗಿ ಬಾಡಿಗೆ ಹಂತಕರು ಈ ರೀತಿಯಾಗಿ ಹತ್ಯೆ ಮಾಡುವುದಿಲ್ಲ. ಬಾಡಿಗೆ ಹಂತಕರು ಕೊಲೆ ಮಾಡುವ ಸುಪಾರಿ ಪಡೆದ ನಂತರ ಸಾಯಿಸುವದಷ್ಟೇ ಮುಖ್ಯವಾಗಿರುತ್ತದೆ. ಈ ರೀತಿ ಕೋಪವನ್ನು ಹೊರ ಹಾಕುವವರಲ್ಲ. ಜತೆಗೆ ಸಾರ್ವಜನಿಕವಾಗಿಯೂ ಈ ರೀತಿಯ ಕೃತ್ಯಕ್ಕೆ ಕೈ ಹಾಕುವುದಿಲ್ಲ. ಈ ಎಲ್ಲವನ್ನೂ ಗಮನಿಸಿದರೆ ಯಾವುದೋ ಹಳೇ ದ್ವೇಷದಿಂದಲೇ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್‌ ಲಾಬೂರಾಮ್‌ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್‌ ನಲ್ಲಿ ರಿಸಪ್ಶನ್‌ನಲ್ಲಿಯೇ ಚಾಕು ಇರಿದು ಹಂತಕರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Vastu Expert Chandrashekhar Murder: ಚಂದ್ರಶೇಖರ್‌ ಗುರೂಜಿಗೆ 60 ಬಾರಿ ಚುಚ್ಚಿ ಕೊಲೆ!

ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. "ಜುಲೈ 2 ರಂದು ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್‌ ಗುರೂಜಿ ನಾಳೆ ಹೋಟೆಲ್‌ ರೂಮ್‌ ಖಾಲಿ ಮಾಡಬೇಕಿತ್ತು. ಇಂದು ಬೆಳಗ್ಗೆ ರಿಶಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕು ಇರಿದಿದ್ದಾರೆ' ಎಂದು ಹೋಟೆಲ್‌ ಸಿಬ್ಬಂದಿ ತಿಳಿಸಿದ್ದಾರೆ. 

ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್‌, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ
ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ!