
ಬೆಂಗಳೂರು(ನ.30): ರಾಜಧಾನಿಯ ಶೇಷಾದ್ರಿಪುರಂನಲ್ಲಿ ನಿನ್ನೆ(ನ.29, ಶನಿವಾರ) ನಡೆದ ಶರಣಮ್ಮ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆಗೆ ಕಾರಣವಾದ ಆಘಾತಕಾರಿ ಹಿನ್ನೆಲೆಯನ್ನು ಬಯಲು ಮಾಡಿದ್ದಾರೆ. ಆರೋಪಿಯನ್ನು ಶರಣಮ್ಮ ಅವರ ತಂಗಿ ಮದುವೆಯಾಗಲು ನಿರಾಕರಿಸಿದ್ದೆ ಈ ಬರ್ಬರ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯಪುರ ಮೂಲದ ಶರಣಮ್ಮ (23) ಎಂಬ ಮಹಿಳೆಯನ್ನು ಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಶೇಷಾದ್ರಿಪುರಂ ಪೊಲೀಸರು ತನಿಖೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಕೊಲೆ ಮಾಡಿದ ಆರೋಪಿ ವಿಜಯಪುರ ಜಿಲ್ಲೆಯ ಇಂಡಿ ಮೂಲದ ನಾಗಪ್ಪ ಎಂದು ಗುರುತಿಸಲಾಗಿದೆ. ಈತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ.
ಆರೋಪಿ ನಾಗಪ್ಪ ಕೊಲೆಯಾದ ಶರಣಮ್ಮ ಅವರ ತಂಗಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗುವುದಾಗಿ ಆಕೆಯ ಕುಟುಂಬದವರಿಗೂ ತಿಳಿಸಿದ್ದ. ಆದರೆ, ಯುವತಿ (ಶರಣಮ್ಮಳ ತಂಗಿ) ನಾಗಪ್ಪನನ್ನು ಅವಾಯ್ಡ್ ಮಾಡಿದ್ದಳು. ಇತ್ತೀಚೆಗೆ ನಾಗಪ್ಪನ ಕಾಟಕ್ಕೆ ಬೇರೆಡೆ ಸ್ಥಳಾಂತರಗೊಂಡಿದ್ದಳು.
ನಿನ್ನೆ (ಘಟನೆ ನಡೆದ ದಿನ) ನಾಗಪ್ಪ ಯುವತಿಯ ವಿಳಾಸ ಕೇಳಲು ಶರಣಮ್ಮಳ ಬಳಿ ಬಂದಿದ್ದನು. 'ನಿನ್ನ ತಂಗಿ ಎಲ್ಲಿದ್ದಾಳೆ, ಅಡ್ರೆಸ್ ಹೇಳು' ಎಂದು ಒತ್ತಾಯಿಸಿದ್ದಾನೆ. 'ವಿಳಾಸ ಗೊತ್ತಿಲ್ಲ' ಎಂದು ಶರಣಮ್ಮ ಹೇಳಿದ್ದಕ್ಕೆ, ಮೊದಲೇ ಖರೀದಿಸಿ, ತನ್ನ ಬೆನ್ನ ಹಿಂದೆ ಬಚ್ಚಿಟ್ಟುಕೊಂಡು ಬಂದಿದ್ದ ದೊಡ್ಡ ಚಾಕುವಿನಿಂದ ಆಕೆಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ.
ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದ ಆರೋಪಿ ನಾಗಪ್ಪನನ್ನು ತಡರಾತ್ರಿ ಪೊಲೀಸರು ಆತನ ಸ್ನೇಹಿತನ ಮನೆಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ