
ಬೆಂಗಳೂರು (ಜೂ.19): ಇಡೀ ಜಗತ್ತನ್ನೇ ರಕ್ಕಸವಾಗಿ ಕಾಡಿದ ಕೋವಿಡ್ ಸೋಂಕಿಗೆ ಬಲಿಯಾಗಿದ್ದರೂ ಸಂಚಾರಿ ಮಹಿಳಾ ಪೊಲೀಸ್, ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ, ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಒಂದು ವರ್ಷದ ಮಗು ಅಕ್ಷರಶಃ ಅನಾಥವಾಗಿದೆ.
ಬೆಂಗಳೂರಿನಲ್ಲಿ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಎಂದಿನಿಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋದ ಪ್ರಿಯಾಂಕಾಗೆ ರಾತ್ರಿ 11.30ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಆಸ್ಪತ್ರೆಗೂ ಹೋಗಲಾಗದೇ ಹಾಸಿಗೆಯಲ್ಲಿಯೇ ನರಳಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
Bengaluru: ತ್ರಿಬಲ್ ಡ್ಯೂಟಿ ಮಾಡಿದ ಟ್ರಾಫಿಕ್ ಎಎಸ್ಐಗೆ ಹೃದಯಾಘಾತ ?: ಮನೆಗೆ ಹೋಗುವಾಗ ಸಾವು
ಕರ್ನಾಟಕ ಪೊಲೀಸ್ ಇಲಾಖೆಗೆ ಕೆಲ ವರ್ಷಗಳ ಹಿಂದೆ ಸೇರ್ಪಡೆ ಆಗಿದ್ದ ಪ್ರಿಯಾಂಕಾ 2018ರಲ್ಲಿ ಮದುವೆಯಾಗಿದ್ದಳು. ಆದರೆ, ದುರಾದೃಷ್ಟ ಎಂಬಂತೆ ಜಗತ್ತನ್ನೇ ಕಾಡಿದ ಕೋವಿಡ್ ಮಹಾಮಾರಿಗೆ ಪ್ರಿಯಾಂಕಾ ಅವರ ಪತಿ 2021ರಲ್ಲಿ ಸಾವನ್ನಪ್ಪಿದ್ದರು. ಇದರಲ್ಲಿಯೂ ಒಂದು ಮನಕಲಕುವ ವಿಚಾರವೆಂದರೆ ಆಗ ಇವರು ಗರ್ಭಿಣಿಯಾಗಿದ್ದರು. ಇನ್ನು ಕೋವಿಡ್ನಿಂದ ಗಂಡನನ್ನು ಕಳೆದುಕೊಂಡರೂ ದೃತಿಗೆಡದೇ ತನ್ನ ಸಂಚಾರಿ ಪೊಲೀಸ್ ಕರ್ತವ್ಯವನ್ನು ಮುಂದುವರೆಸಿಕೊಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಹುಟ್ಟುತ್ತಲೇ ತಂದೆ ಇಲ್ಲದೇ ಜನಿಸಿದ್ದ ಮಗು, ಈಗ ಒಂದು ವರ್ಷದಲ್ಲೇ ಜನ್ಮ ನೀಡಿದ ತಾಯಿಯನ್ನೂ ಕಳೆದುಕೊಂಡು ಅನಾಥವಾಗಿದೆ.
ಎರಡು ದಿನಗಳ ಹಿಂದೆ ಹೃದಯಾಘಾತ ತಡೆವ ಬಗ್ಗೆ ತರಬೇತಿ: ಬೆಂಗಳೂರು ಸಂಚಾರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೇವ್ ಲೈಫ್ ಫೌಡೇಶನ್ ವತಿಯಿಂದ (SAVE LIFE FOUNDATION) ಹಾಗೂ ಟಿಟಿಆರ್ಎಸ್ಐ ಸಹಯೋಗದೊಂದಿಗೆ, ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಷಯಗಳ ಬಗ್ಗೆ ಜೂ.12ರಿಂದ ಜೂ.17ರವರೆಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಲಾಯಿತು. ಆದರೆ, ಇದಾದ ಎರಡೇ ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ವಿಭಾಗದ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾರೆ.
ತ್ರಿಬಲ್ ಡ್ಯೂಟಿ ಮಾಡಿದ್ದ ಟ್ರಾಫಿಕ್ ಎಎಸ್ಐ ಸಾವು!
ಬೆಂಗಳೂರು (ಜ.22): ಟ್ರಾಫಿಕ್ ಡ್ಯೂಟಿ ಮುಗಿಸಿ ಮನೆಗೆ ಹೋಗುವಾಗ ಶಿವಾಜಿನಗರದ ಸಂಚಾರಿ ವಿಭಾಗದ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಸತ್ಯ ಅವರು ಹೃದಯಾಘಾತವಾಗಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಚಾರಿ ಎಎಸ್ಐ ಸತ್ಯ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದರು. ಡ್ಯೂಟಿ ಮುಗಿಸಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಿ (ತ್ರಿಬಲ್ ಡ್ಯೂಟಿ) ವಾಪಾಸ್ ಮನೆಗೆ ಹೋಗುವಾಗ ಹೃದಯಾಘಾತ ಆಗಿದೆ. ಸತತ 24 ಗಂಟೆಗಳ ಕಾಲ ಕೆಲಸ ಮಾಡಿದ್ದರಿಂದ ತೀವ್ರ ಒತ್ತಡದಿಂದ ಸಾವನ್ನಪ್ಪಿದ್ದರು. ಪೊಲೀಸ್ ಇಲಾಖೆಯ ಹಣೆ ಬರಹವೇ ಇಷ್ಟು. ಬೆಳಗ್ಗೆ 8 ರಿಂದ ಮಾರನೆ ದಿನ 8 ಗಂಟೆಯವರೆಗೆ ಡ್ಯೂಟಿ ಮಾಡ್ತಾರೆ. ಮಾಡಿಲ್ಲವೆಂದರೆ ಮೆಮೋ ಇಶ್ಯೂ ಮಾಡ್ತಾರೆ. ಸರ್ಕಾರಕ್ಕೆ ಪೊಲೀಸರ ಬಗ್ಗೆ ಗಮನ ಇಲ್ಲ ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.
BENGALURU- ಸಂಚಾರ ದಟ್ಟಣೆ ತಗ್ಗಿಸಲು ಡ್ರೋನ್ ಮೊರೆಹೋದ ಪೊಲೀಸರು
ತ್ರಿಬಲ್ ಡ್ಯೂಟಿ ಬಗ್ಗೆ ಸ್ಪಷ್ಟನೆ ಇರಲಿಲ್ಲ: ಆದರೆ, ಎಸ್ಐ ಸತ್ಯ ಅವರು ದಿನದ 24 ಗಂಟೆಗಳ ಕಾಲ (ತ್ರಿಬಲ್ ಡ್ಯೂಟಿ) ಮಾಡಿದ್ದಾರೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ತಮ್ಮ ಕೆಲಸವನ್ನು ಮುಗಿಸಿ ಮನೆಗೆ ಹೋಗುವ ವೇಳೆ ಕುಸಿದುಬಿದ್ದು, ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಶಿವಾಜಿನಗರ ಟ್ರಾಫಿಕ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸತ್ಯ ಅವರು, ಕರ್ತವ್ಯದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಸಂತಾಪ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ