
ಬೆಂಗಳೂರು (ಮಾ.23): ಸಿಲಿಕಾನ್ ಸಿಟಿಯ ಡಿಜೆ ಹಳ್ಳಿಯಲ್ಲಿ ನಡೆದಿದ್ದ ಅಪ್ರಾಪ್ತೆಯ ಬರ್ಬರ ಕೊಲೆ ಪ್ರಕರಣದ ಆರೋಪಿ ಶಬೀಲ್ ಅಂತಿಮವಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಈತ ಪತ್ತೆಯಾಗಿದ್ದು ಬರೋಬ್ಬರಿ ರಾಜಸ್ಥಾನದ ಅಜ್ಮೀರ್ನಲ್ಲಿ! ಸಿನಿಮೀಯ ಶೈಲಿಯಲ್ಲಿ ನಡೆದ ಈ ಬಂಧನ ಪ್ರಕ್ರಿಯೆ ಮತ್ತು ಆರೋಪಿ ಸಿಕ್ಕಿಬಿದ್ದ ರೀತಿ ನಿಜಕ್ಕೂ ರೋಚಕವಾಗಿದೆ.
ಕೆಲವು ದಿನಗಳ ಹಿಂದೆ ಡಿಜೆ ಹಳ್ಳಿಯಲ್ಲಿ ನಡೆದಿದ್ದ ಅಪ್ರಾಪ್ತೆಯ ಕೊಲೆ ಇಡೀ ನಗರವನ್ನೇ ಬೆಚ್ಚಿಬೀಳಿಸಿತ್ತು. ತಾನೇ ಮದುವೆ ಮಾಡಿಕೊಳ್ಳುವುದಕ್ಕೆ ಅಪ್ರಾಪ್ತ ಬಾಲಕಿಯೊಂದಿಗೆ ಅದ್ಧೂರಿ ನಿಶ್ಚಿತಾರ್ಐ ಮಾಡಿಕೊಂಡಿದ್ದ ಶಬೀಲ್, ನಂತರ ಆಕೆಯ ಮೇಲೆ ಅನುಮಾನಪಟ್ಟು ಇಬ್ಬರೂ ಗುಟ್ಟಾಗಿ ಸೇರುತ್ತಿದ್ದ ಜಾಗಕ್ಕೆ ಕರೆದೊಯ್ದು ಭೀಕರವಾಗಿ ಕೊಲೆ ಮಾಡಿದ್ದನು. ಇಬ್ಬರೂ ಏಕಾಂತದಲ್ಲಿರುವಾಗ ಜಗಳ ನಡೆದಿದ್ದು, ಈ ವೇಳೆ ಆರೋಪಿ ಶಬೀಲ್ ಅಪ್ರಾಪ್ತ ಬಾಲಕಿಯ ಎದೆಭಾಗ, ಮರ್ಮಾಂಗಕ್ಕೆ ಚಾಕು ಇರುದು ವಿಕೃತಿ ಮೆರೆದಿದ್ದಾನೆ. ನಂತರ ಆಕೆಯ ಕತ್ತನ್ನು ಕೊಯ್ದು ಕೊಲೆ ಮಾಡಿ ಪರಾರಿ ಆಗಿದ್ದನು. ಇನ್ನು ಕೊಲೆ ಮಾಡಿದ ಬಳಿಕ ಇದರ ಪರಿಣಾಮ (ಪೊಲೀಸ್ ತನಿಖೆ ಹಾಗೂ ಜೈಲು ಶಿಕ್ಷೆ) ಎದುರಿಸಲು ಹೆದರಿದ ಆರೋಪಿ ಶಬೀಲ್, ತನ್ನ ಮನೆ, ಕುಟುಂಬ ಮತ್ತು ಸ್ನೇಹಿತರ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದನು. ಪೊಲೀಸರ ಕೈಗೆ ಸಿಕ್ಕರೆ ತನಗೆ ಉಳಿಗಾಲವಿಲ್ಲ ಎಂದು ಅರಿತಿದ್ದ ಆಸಾಮಿ ಸದ್ದಿಲ್ಲದೆ ಬೆಂಗಳೂರಿನಿಂದ ಎಸ್ಕೇಪ್ ಆಗಿ ರಾಜಸ್ಥಾನದ ಅಜ್ಮೀರ್ಗೆ ಓಡಿಹೋಗಿದ್ದನು.
ತಾನು ಮಾಡಿದ ಭೀಕರ ಕೃತ್ಯಕ್ಕೆ ಪಶ್ಚಾತ್ತಾಪ ಪಡಲು ನಿರ್ಧರಿಸಿದ ಶಬೀಲ್, ಅಜ್ಮೀರ್ನ ದರ್ಗಾ ಮತ್ತು ಮಸೀದಿಗಳಲ್ಲಿ ಕಾಲ ಕಳೆಯುತ್ತಿದ್ದ. ಅಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಆತ, ಯಾರಿಗೂ ಅನುಮಾನ ಬಾರದಂತೆ ದರ್ಗಾದಲ್ಲೇ ಮಲಗುತ್ತಿದ್ದನು. ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು ಎಂಬುದು ಆತನ ಲೆಕ್ಕಾಚಾರವಾಗಿತ್ತು.
ಇತ್ತ ಡಿಜೆ ಹಳ್ಳಿ ಪೊಲೀಸರು ಆರೋಪಿಯ ಪತ್ತೆಗಾಗಿ ಡಿಜಿಟಲ್ ತಂತ್ರವನ್ನು ಬಳಸಿದರು. ಆರೋಪಿ ಶಬೀಲ್ನ ಫೋಟೊವನ್ನು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯ ಸಾರ್ವಜನಿಕರ ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಶೇರ್ ಮಾಡಿದ್ದರು. ಇದೇ ವೇಳೆ ಡಿಜೆ ಹಳ್ಳಿಯ ಯುವಕನೊಬ್ಬ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದ್ದ. ಅಲ್ಲಿ ಮಸೀದಿಗೆ ಪ್ರಾರ್ಥನೆಗೆ ಬರುತ್ತಿದ್ದ ವ್ಯಕ್ತಿಯ ಮುಖ ಮತ್ತು ತನ್ನ ವಾಟ್ಸ್ ಆ್ಯಪ್ನಲ್ಲಿದ್ದ ಫೋಟೊ ಒಂದೇ ಆಗಿರುವುದನ್ನು ಗಮನಿಸಿದ ಯುವಕ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಡಿಜೆ ಹಳ್ಳಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಜ್ಮೀರ್ ದರ್ಗಾ ಬಳಿಯೇ ಶಬೀಲ್ನನ್ನು ಸುತ್ತುವರಿದು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.
ಪೊಲೀಸರ ತನಿಖೆಯ ವೇಳೆ ಆರೋಪಿ ಮತ್ತು ಅಪ್ರಾಪ್ತೆಯ ನಡುವೆ ನಿಶ್ಚಿತಾರ್ಥ ನಡೆದಿರುವ ವಿಡಿಯೋ ಲಭ್ಯವಾಗಿದೆ. ನಿಶ್ಚಿತಾರ್ಥದ ಬಳಿಕ ಶಬೀಲ್ ಯುವತಿಯ ಮೇಲೆ ಅತಿಯಾದ ಅನುಮಾನ ಪಡಲು ಆರಂಭಿಸಿದ್ದ ಎನ್ನಲಾಗಿದೆ. ಇದೇ ಅನುಮಾನ ಜಗಳಕ್ಕೆ ತಿರುಗಿ ಕೊನೆಯಲ್ಲಿ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿ ಹೊರಡುವ ಸಿಸಿಟಿವಿ ದೃಶ್ಯಗಳನ್ನು ಕೂಡ ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ತಾಂತ್ರಿಕತೆ ಮತ್ತು ಸಾರ್ವಜನಿಕರ ಜಾಗರೂಕತೆಯಿಂದ ಹಂತಕ ಶಬೀಲ್ ಈಗ ಕಂಬಿ ಎಣಿಸುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ