
ಬೆಂಗಳೂರು (ಫೆ.11): ಸಿಲಿಕಾನ್ ಸಿಟಿಯಲ್ಲಿ ಸಂಬಂಧಗಳಿಗೆ ಕಳಂಕ ಹಚ್ಚುವ ಆಘಾತಕಾರಿ ಘಟನೆಯೊಂದು ನಡೆದಿದೆ. ಮನೆಯಲ್ಲಿ ರಕ್ಷಣೆ ನೀಡಬೇಕಾದ ಮಾವನೇ ಸೊಸೆಯ ಮೇಲೆ ಕಣ್ಣು ಹಾಕಿ, ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಈಗ ಕಂಬಿ ಎಣಿಸುವ ಭೀತಿಯಲ್ಲಿದ್ದಾನೆ.
ಬೆಂಗಳೂರಿನ ಆರ್.ಟಿ.ನಗರದ ನಿವಾಸಿಯಾಗಿರುವ ಅಬ್ದುಲ್ ಹಫೀಜ್ ವಿರುದ್ಧ ಆತನ ಸೊಸೆಯೇ ದೂರು ನೀಡಿದ್ದಾರೆ. ಆರೋಪಿ ಅಬ್ದುಲ್ ಹಫೀಜ್ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಫೌಂಡರ್ ಆಗಿದ್ದು, ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿದ್ದರೂ ಮನೆಯಲ್ಲಿ ಮಾತ್ರ ವಿಕೃತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಸೊಸೆಯ ಸೌಂದರ್ಯದ ಬಗ್ಗೆ ಅಶ್ಲೀಲವಾಗಿ ಪತ್ರ ಬರೆಯುತ್ತಿದ್ದ ಮಾವ, ಆ ಪತ್ರವನ್ನು ಆಕೆಯ ಮುಂದೆಯೇ ಓದಿ ವಿಕೃತಾನಂದ ಅನುಭವಿಸುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಮಾವ ಅಬ್ದುಲ್ ಹಫೀಜ್ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಾವನ ಈ ಅಸಭ್ಯ ವರ್ತನೆಯಿಂದ ರೋಸಿಹೋದ ಮಹಿಳೆ, ನಡೆದ ಎಲ್ಲ ವಿಚಾರವನ್ನು ತನ್ನ ಪತಿಗೆ ವಿವರಿಸಿದ್ದಾಳೆ. ಈ ವೇಳೆ ಮಗ ಕೂಡ ತಂದೆಗೆ ಬೈದು ಬುದ್ಧಿ ಹೇಳಿದ್ದಾನೆ. ಆದರೆ ತಿದ್ದಿಕೊಳ್ಳದೇ ಹಳೆ ಚಾಳಿ ಬಿಡದೇ ಕಿರುಕುಳ ಮುಂದುವರಿಸಿದ್ದಾನೆ.
ಲಿಫ್ಟ್ನಲ್ಲಿ ಬಲತ್ಕಾರಕ್ಕೆ ಯತ್ನ; ಅತಿರೇಕಕ್ಕೆ ಹೋದ ಕಿರುಕುಳ
ಮಗ ಬುದ್ಧಿ ಹೇಳಿದರೂ ಸುಧಾರಿಸದ ಅಬ್ದುಲ್ ಹಫೀಜ್, ಇತ್ತೀಚೆಗೆ ಲಿಫ್ಟ್ನಲ್ಲಿ ಸಂತ್ರಸ್ತೆ ಒಬ್ಬಳೇ ಸಿಕ್ಕಾಗ ಆಕೆಯನ್ನು ತಡೆದು ಬಲವಂತಪಡಿಸಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ ಅತಿರೇಕದ ವರ್ತನೆ ತೋರಿದ್ದಾನೆ. ಮಾವನ ಈ ಕಾಮದ ಕಾಟ ತಾಳಲಾರದೆ ಸಂತ್ರಸ್ತ ಮಹಿಳೆ ಕೊನೆಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಆರ್ಟಿ ನಗರ ಪೊಲೀಸರಿಂದ ಎಫ್ಐಆರ್ ದಾಖಲು
ಸಂತ್ರಸ್ತೆಯ ದೂರಿನ ಮೇರೆಗೆ ಆರ್.ಟಿ.ನಗರ ಪೊಲೀಸರು ಆರೋಪಿ ಅಬ್ದುಲ್ ಹಫೀಜ್ ವಿರುದ್ಧ ವಿವಿಧ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಯ ಫೌಂಡರ್ ಆಗಿ ಸಾವಿರಾರು ಮಕ್ಕಳಿಗೆ ಭವಿಷ್ಯ ರೂಪಿಸಬೇಕಾದ ವ್ಯಕ್ತಿ, ಸ್ವಂತ ಸೊಸೆಯ ಮೇಲೆಯೇ ದೌರ್ಜನ್ಯ ಎಸಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ