ಮೇಯರ್ ಪಟ್ಟಕ್ಕೆ ಡೀಲ್ ಮಾಡಿದ್ದಾಯ್ತು, ಇದೀಗ ಕೊಲೆ ಬೆದರಿಕೆ

By Suvarna NewsFirst Published May 12, 2022, 4:32 PM IST
Highlights

* ಮೇಯರ್ ಪಟ್ಟಕ್ಕೆ ಡೀಲ್ ಮಾಡಿದ್ದಾಯ್ತು. ಇದೀಗ ಕೊಲೆ ಬೆದರಿಕೆ
* ಇತ್ತ ಮೇಯರ್ ಸ್ಥಾನವೂ ಇಲ್ಲ ಅತ್ತ ಹಣವೂ ಕಳೆದುಕೊಂಡ್ರು
* ಜೀವ ಬೆದರಿಕೆ ಹಾಕಲಾಗಿದೆ ಎಂದು ನಾಪತ್ತೆಯಾದ ದೂರುದಾರ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಮೇ.12):
ಮೇಯರ್ ಸ್ಥಾನ ಕೊಡಿಸುತ್ತೇನೆಂದು ಶಾಸಕ ನಾಗೇಂದ್ರ ಮಾವ ಎರಿಸ್ವಾಮಿ ಎಂಬುವರು ಕಾರ್ಪೋರೇಟರ್ ಒಬ್ಬರ ಬಳಿ‌ ಮೂರುವರೆ ಕೋಟಿ ಹಣ ಪಡೆದಿದ್ರಂತೆ. ಈ ಕುರಿತು ಇಷ್ಟು ದಿನ ತೆರೆಮರೆಯಲ್ಲಿದ್ದ ಡೀಲ್ ವಿಚಾರ ಇದೀಗ ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ. 

ಇತ್ತ ಹಣವೂ ಇಲ್ಲ ಅತ್ತ ಮೇಯರ್ ಪಟ್ಟವೂ ಇಲ್ಲದೇ ಕಂಗಾಲಾಗಿರೋ ಕಾರ್ಪೋರೇಟರ್‌ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕಾರ್ಪೋರೇಟರ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಇನ್ನೂ ನಿನ್ನೆ(ಮೇ.11) ಶಾಸಕ ನಾಗೇಂದ್ರ ಮಾವ ಎರಿಸ್ವಾಮಿ ವಿರುದ್ಧ ದೂರು ದಾಖಲಾಗಿತ್ತಿದ್ದಂತೆ ಕಾಂಗ್ರೆಸ್ ನಾಯಕರು ಅಸೀಫ್ ವಿರುದ್ಧ ಮುಗಿ ಬಿದ್ದಿದ್ದಾರೆ. ದೂರು ನೀಡಿದ ಬಳಿಕ ಎರಿಸ್ವಾಮಿ ಕೊಲೆಯ ಬೆದರಿಕೆ ಹಾಕಿರೋ ಹಿನ್ನೆಲೆ  ಆಸೀಫ್ ಕೂಡಾ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗ್ತಿದೆ.‌ ಬೆದರಿಕೆ ಹಾಕಿರೋ‌ ಬಗ್ಗೆ ಎಸ್ಪಿ ಸೈದುಲ್ ಅಡಾವತ್ ಸ್ಪಷ್ಟನೆ ನೀಡಿದ್ದು ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ..

ಬಳ್ಳಾರಿ ಮೇಯರ್ ಸ್ಥಾನಕ್ಕೆ ಕೋಟಿ ಕೋಟಿ ಡೀಲ್‌: ಶಾಸಕ ನಾಗೇಂದ್ರ ಮಾವನ ವಿರುದ್ಧ ತಿರುಗಿಬಿದ್ದ ಪಾಲಿಕೆ ಸದಸ್ಯ

ಕಾಂಗ್ರೆಸ್ ನಾಯಕರು ಗರಂ
 ಇತ್ತ ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು  ಕಿಡಿಕಾರಿದ್ದು ಅಸೀಫ್ ಹಾಗು ಎರ್ರಿಸ್ವಾಮಿ ಇಬ್ಬರು ಕಾಂಗ್ರೆಸ್ ಮುಖಂಡರು. ಇಬ್ಬರ ನಡುವೆ ಬೇರೆಯ ವಿಷಯಕ್ಕೆ  ಜಗಳವಿತ್ತು. ಅದರ ದುರುಪಯೋಗ ಪಡೆದು ಅಸೀಪ್ ನನ್ನ ಎತ್ತಿ ಕಟ್ಟಲಾಗಿದೆ ಎನ್ನುತ್ತಿದ್ದಾರೆ ಅಲ್ಲದೇ ಇದರ ಹಿಂದೆ  ಬಿಜೆಪಿ ನಾಯಕರ  ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಬಳ್ಳಾರಿ ಗ್ರಾಮೀಣಕ್ಕೆ ಶ್ರೀರಾಮುಲು ಸ್ಪರ್ಧೆ ಮಾಡಲೂ ಮುಂದಾಗಿರೋ, ಹಿನ್ನೆಲೆ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರ  ವರ್ಚಸ್ಸು ಕೆಡಿಸಲು  ಈ ರೀತಿ ಮಾಡಲಾಗ್ತಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಜೆ‌.ಎಸ್ ಆಂಜಿನೇಯಲು ಆರೊಪಿಸಿದ್ದಾರೆ..
 
 ಬಳ್ಳಾರಿ ರಾಜಕೀಯ ಅಂದ್ರೇನೇ ರೆಬಲ್
 ಹೌದು, ಬಳ್ಳಾರಿ ರಾಜಕೀಯವಂದ್ರೇನೇ ಹಾಗೇ ಇಲ್ಲಿ ಹಣ, ಜಗಳ, ಹೊಡೆದಾಟ, ಗತ್ತು, ಗಾಂಭೀರ್ಯ ಅಪರೇಷನ್ ಎಲ್ಲವೂ ಇಲ್ಲಿರುತ್ತದೆ. 1999ರ ಸೋನಿಯಾಗಾಂಧಿ ಮತ್ತು ಸುಷ್ಮಾಸ್ವರಾಜ್ ನಡುವೆ ನಡೆದ ಚುನಾವಣೆ  ಬಳಿಕ ಬಳ್ಳಾರಿ ರಾಜಕೀಯ ಕೇವಲ ರಾಜ್ಯಕ್ಕೆ ಮಾತ್ರವಲ್ಲ ರಾಷ್ಟಮಟ್ಟಕ್ಕೂ ಹೋಗಿದೆ ಅದು ಕೆಲವೊಮ್ಮೆ ಪ್ರಖ್ಯಾತಿ ಮತ್ತು ಕೆಲವೊಮ್ಮೆ ಕುಖ್ಯಾತಿಯನ್ನು ಪಡೆದಿದೆ. ಹೀಗೆ ರೆಬಲ್ ರಾಜಕೀಯದಿಂದ ಹೆಸರು ವಾಸಿಯಾಗಿರೋ ಬಳ್ಳಾರಿಯಲ್ಲಿ ಇದೀಗ ಮೇಯರ್ ಪಟ್ಟಕ್ಕಾಗಿ ಡೀಲ್ ನಡೆಸಿದ ಪ್ರಕರಣ ಹೊರಗೆ ಬಂದಿದೆ.

 ಕಳೆದರೆಡು ತಿಂಗಳ  ಹಿಂದಿಯೇ ಮೇಯರ್ ಉಪಮೇಯರ್ ಚುನಾವಣೆ ನಡೆದಿದೆ.  ಆದ್ರೇ ಅದರ ಸಾಧಕ ಭಾದಕದ ಕಥೆಗಳು ಇದೀಗ ಒಂದೊಂದಾ ಗಿಯೇ ಹೊರಗೆ ಬರುತ್ತಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿರೋ ಹಿನ್ನೆಲೇ ಸಂಪುರ್ಣ ಬಹುಮತ ಇದ್ದ ಕಾಂಗ್ರೆಸ್ನಲ್ಲಿ ಎಲ್ಲರೂ ಆಕಾಂಕ್ಷಿಗಳೇ ಆಗಿದ್ರು.  ಈ ವೇಳೆ  ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಮಾವ ಎರ್ರಿಸ್ವಾಮಿ ಪಾಲಿಕೆ ಮೇಯರ್ ಪಟ್ಟವನ್ನ ಕೊಡಿಸೋದಾಗಿ 30 ನೇ ವಾರ್ಡಿನ ಕಾಂಗ್ರೆಸ್ ಕಾರ್ಪೊರೇಟರ್ ಡಿ.ಎನ್.ಎಂ ಆಸೀಫ್ ಬಳಿ ಬರೊಬ್ಬರಿ ಮೂರುವರೆ ಕೋಟಿ ಪೆಡೆದಿದ್ದಾರೆ. ಆದ್ರೇ, ಮೀಸಲಾತಿ ಬದಲಾಗಿ ಮಹಿಳಾ ಮೀಸಲಾತಿ ಬಂದ ಹಿನ್ನೆಲೆ ರಾಜೇಶ್ವರಿ ಎನ್ನುವವರು ಮೇಯರ್ ಆದ್ರು. ಹೀಗಾಗಿ ಅಸೀಫ್ ಅವರಿಗೆ ಮೇಯರ್ ಸ್ಥಾನ ಕೈತಪ್ಪಿತ್ತು. ಆಗಿನಿಂದಲೂ ಹಣ ವಾಪಸ್ ನೀಡುವಂತೆ ಎರಿಸ್ವಾಮಿಯನ್ನು ಕೇಳುತ್ತಿದ್ರು.  ವಾಪಸ್ ನೀಡದ ಹಿನ್ನೆಲೆ ಇದೀಗ ಹಣದ ವ್ಯವಹಾರ ಬಯಲು ಮಾಡಿದ್ದು, ಕೌಲ್ಬಜಾರ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
 
ಒಟ್ಟಾರೆ ಪಾಲಿಕೆ ಮೇಯರ್ ಸ್ಥಾನಕ್ಕೆ ಮೂರುವರೆ ಕೋಟಿ ಡೀಲ್ ವಿಚಾರ ಈಗ ಇಡೀ ಬಳ್ಳಾರಿಯಲ್ಲಷ್ಟೇ ಅಲ್ಲ ಕಾಂಗ್ರೆಸ್ ನಾಯಕರಲ್ಲೂ ದೊಡ್ಡ ಮಟ್ಟದಲ್ಲಿ  ಚರ್ಚೆಗೀಡು ಮಾಡಿದೆ. ಒಂದು ವೇಳೆ ಇದು ನಿಜಕ್ಕೂ ನಡೆದಿದ್ದೇ ಆದಲ್ಲಿ ಅದಕ್ಕಿಂತ ದುರಂತ ಮೊತ್ತೊಂದಿಲ್ಲ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ತನಿಖೆ ಮಾಡಿದ್ರೆ ಯಾರು ಸತ್ಯ, ಯಾರು ಸುಳ್ಳು ಎನ್ನುವುದು ಬಯಲಿಗೆ ಬರಲಿದೆ.

click me!