
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಜು.30): ಏನು ಮಾಡಲು ಹೋಗಿ ಇನ್ನೇನು ಮಾಡಿದ್ರು, ಅನ್ನೋ ಹಾಗೇ ಆಗಿದೆ ಬಳ್ಳಾರಿ ಜಿಲ್ಲೆಯ ಪೊಲೀಸರ ಕತೆ. ಯಾವುದೋ ಪ್ರಕರಣದಲ್ಲಿ ಇನ್ನಾರನ್ನೋ ಹೊಡೆಯೋ ಮೂಲಕ ದೊಡ್ಡ ರಾದ್ದಾಂತ ಮಾಡಿ ಕೊಂಡಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧವೇ ಜನಾಕ್ರೋಶ ಭುಗಿಲೆದ್ದು, ಪ್ರತಿಭಟನೆ ಮಾಡಿ ಮೂರು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ಯನ್ನು ತಡೆದಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದಾದ್ರೂ ಏನು..? ಪೊಲೀಸರ ವಿರುದ್ಧ ಇಷ್ಟೊಂದು ಜನರು ಆಕ್ರೋಶ ಹೊರಹೊಮ್ಮಲು ಕಾರಣ ಮಾತ್ರ ಸಣ್ಣದು. ಆದ್ರೇ, ತಾಳ್ಮೆ ಕಳೆದು ಕೊಂಡ ಪೊಲೀಸರು ಮಾತ್ರ
ರೈತನೊಬ್ಬನ ಕಾಲು ಮುರಿದ್ದಾರೆ. ಕುರುಗೋಡು ತಾಲೂಕಿನ ಕೋಳೂರು ಕ್ರಾಸ್ನಲ್ಲಿ ಹೊಂಡವೊಂದರಲ್ಲಿ ಬೆಳ್ಳಂಬೆಳಿಗ್ಗೆ ಶವವೊಂದು ತೇಲಿ ಬಂದಿದೆ. ಇದನ್ನು ನೋಡಿದ ಸಾರ್ವಜನಿಕರು ಕುರುಗೋಡು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಮಹಿಳೆ ಯಾರು.. ? ಶವ ಯಾಕೆ ಇಲ್ಲಿ ತೇಲಿ ಬಂದಿದೆ ..? ಆತ್ಮಹತ್ಯೆಯೋ ಕೊಲೆಯೋ..? ಎನ್ನುವ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿರುವಾಗ ಮಹಿಳೆ ಶವ ನೋಡಲು ಜನರು ತಂಡಪೋ ತಂಡವಾಗಿ ಬಂದಿದ್ದಾರೆ. ಶವ ಹೊಂಡದಿಂದ ಹೊರ ತೆಗೆಯುವಾಗಲೂ ಜನರು ನುಕುನುಗ್ಗಲು ಮಾಡಿದ್ದಾರೆ.
ಇದರಿಂದ ತಾಳ್ಮೆ ಕಳೆದುಕೊಂಡು ಪೊಲೀಸರು ಜನರನ್ನು ಚದುರಿಸಲು ಲಾಠಿ ಬಿಸಿದ್ದಾರೆ. ಈ ವೇಳೆ ಜನರು ಓಡಿ ಹೋಗೋವಾಗ ಈರಣ್ಣ ಎನ್ನುವ ರೈತ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಆದ್ರೇ, ಪೊಲೀಸರ ಹೊಡೆತದಿಂದಲೇ ಕಾಲು ಮುರಿದಿದೆ ಎಂದು ಜನರು ಬಳ್ಳಾರಿ ಸಿರುಗುಪ್ಪ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದು ಪೊಲೀಸರ ಮೇಲೂ ಜನರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಉತ್ತರಕನ್ನಡ: ಕಪ್ಪು ಅರಿಶಿನ ವ್ಯಾಪಾರದ ಹೆಸರಲ್ಲಿ ದಂಪತಿಗೆ ದೋಖಾ, ನಾಲ್ವರ ಬಂಧನ
ತಾಳ್ಮೆ ಕಳೆದುಕೊಂಡ ಪೊಲೀಸರಿಂದಲೇ ಇಷ್ಟೊಂದು ಅವಾಂತರ: ಇನ್ನೂ ಕೋಳೂರು ಕ್ರಾಸ್ನ ಹೊಂಡದಲ್ಲಿದ್ದ ಪತ್ತೆಯಾದ ಶವ ಬಳ್ಳಾರಿ ಮೂಲದ ನೂರ್ ಜಹಾನ್ ಎನ್ನಲಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ. ಇದೇ ಶವ ನೋಡಲು ಹೋಗಿಯೇ ಇಷ್ಟೋಂದು ದೊಡ್ಡ ರಾದ್ದಾಂತವಾಗಿದೆ. ಇನ್ನೂ ಗಲಾಟೆ ನಡೆಯುತ್ತಿದ್ದ ಮಾರ್ಗವಾಗಿ ಹೋಗುತ್ತಿದ್ದ ಶಾಸಕ ಗಣೇಶ್, ಮಧ್ಯೆಸ್ಥಿಕೆ ವಹಿಸಿದ ಗಲಾಟೆ ನಿಯಂತ್ರಣಕ್ಕೆ ತಂದಿದ್ದಾರೆ. ಕೂಡಲೇ ಗಾಯಾಳು ಈರಣ್ಣ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೇ, ಇದ್ಯಾವುದಕ್ಕೂ ಒಪ್ಪದ ಗ್ರಾಮಸ್ಥರು ಕುರುಗೋಡು ಪಿಎಸ್ಐ ಮಣಿಕಂಠ ಅವರನ್ನು ವರ್ಗಾವಣೆ ಮಾಡೋವರೆಗೂ ಪ್ರತಿಭಟನೆ ನಿಲ್ಲೋಸೋದಿಲ್ಲವೆಂದು ಪಟ್ಟು ಹಿಡಿದ್ರು. ಜನರನ್ನು ನಿಯಂತ್ರಣ ಮಾಡೋದ್ರಲ್ಲಿ ಮತ್ತು ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ ಶಾಸಕ ಗಣೇಶ್ ಗ್ರಾಮಸ್ಥರ ಮತ್ತು ಪೊಲೀಸರ ಮಧ್ಯೆ ಶಾಂತಿ ಸಭೆ ಮಾಡೋದಾಗಿ ಹೇಳಿದ್ದಾರೆ.
ಹುಬ್ಬಳ್ಳಿ: ಜೂಜಾಡುತ್ತಿದ್ದ ಆರಕ್ಷಕರ ಬಂಧನ, ಪೊಲೀಸರನ್ನೇ ಅಂದರ್ ಮಾಡಿದ ಖಡಕ್
ಎಡವಟ್ಟು ಮಾಡೋದ್ರಲ್ಲಿ ಕುರುಗೋಡು ಠಾಣೆ ಎತ್ತಿದ ಕೈ:
ಕಳೆದ ಮೂರು ತಿಂಗಳ ಹಿಂದೆಯೂ ಇದೇ ಕುರುಗೋಡು ಠಾಣೆ ಪಿಎಸ್ಐ ರಾಥೋಡ್ ಎನ್ನುವವರು ಸಾರ್ವಜಕರಿಗೆ ಕಾರಣವಿಲ್ಲದೇ ಹೊಡೆದಿದ್ದಾರೆ ಎನ್ನವ ಆರೋಪದ ಹಿನ್ನೆಲೆ ವರ್ಗಾವಣೆಗೊಂಡಿದ್ರು. ಇದೀಗ ಅದೇ ಸ್ಥಳಕ್ಕೆ ಬಂದ ಮಣಿಕಂಠ ಅವರು ಕೂಡ ಇದೇ ಸಾರ್ವಜನಿಕರಿಗೆ ಹಲ್ಲೆ ಮಾಡಿ ಸುದ್ದಿಯಾಗಿದ್ದಾರೆ. ಒಟ್ಟಾರೇ ಸಾರ್ವಜನಿಕರ ಜೊತೆ ಸಹಕಾರ ಮಾಡೋದ್ರ ಮೂಲಕ ಪ್ರಕರಣಗಳನ್ನು ಬೇದಿಸೋ ಕೆಲಸ ಮಾಡಬೇಕಾದ ಪೊಲೀಸರು ಇದೀಗ ದರ್ಪ ತೋರಿಸಿರೋದು ನಾಚಿಕೆಗೇಡಿನ ಸಂಗತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ