ಅಕ್ರಮವಾಗಿ ವಾಸ: ಬಾಂಗ್ಲಾ ಪ್ರಜೆಗೆ ಜಾಮೀನು ನೀಡಲು ಒಪ್ಪದ ಹೈಕೋರ್ಟ್‌

By Kannadaprabha NewsFirst Published Feb 9, 2023, 10:14 AM IST
Highlights

ಪ್ರಕರಣದ ಇನ್ನೂ ಹಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಜಾಮೀನಿಗೆ ಅರ್ಹನಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ಭಾರತದಲ್ಲಿ ಕಳೆದ 20 ವರ್ಷಗಳಿಂದ ಅಕ್ರಮವಾಗಿ ನೆಲೆಸಿ ಗುಜರಿ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾದ ಬಾಂಗ್ಲಾದೇಶದ ಪ್ರಜೆಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ. ಬೆಂಗಳೂರಿನಲ್ಲಿ ಗುಜರಿ ಅಂಗಡಿ ಹೊಂದಿದ್ದ ಸೈಯದುಲ್‌ ಅಖೋನ್‌ ಅಲಿಯಾಸ್‌ ಶಾಹಿದ್‌ ಅಹ್ಮದ್‌ (42) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಅಕ್ರಮವಾಗಿ ಭಾರತದೊಳಗೆ ನುಸುಳಿ ಕಳೆದ 20 ವರ್ಷಗಳಿಂದ ನೆಲೆಸಿರುವ ಗಂಭೀರ ಸ್ವರೂಪದ ಆರೋಪ ಅರ್ಜಿದಾರನ ಮೇಲಿದೆ. ಇವು ದೇಶದ ಭದ್ರತೆಗೆ ಅಪಾಯ ಒಡ್ಡುವ ಕೃತ್ಯಕ್ಕೆ ಸಂಬಂಧಿಸಿದ ಆರೋಪಗಳಾಗಿವೆ. ಜತೆಗೆ, ಪ್ರಕರಣದ ಇನ್ನೂ ಹಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಜಾಮೀನಿಗೆ ಅರ್ಹನಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದನ್ನು ಓದಿ: ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೆಹಿತನ ಇರಿದು ಕೊಂದ ಗೆಳೆಯ: ಒಟ್ಟಿಗೇ ಮದ್ಯ ಸೇವನೆ ವೇಳೆ ಜಗಳ

ಪಾಸ್‌ಪೋರ್ಟ್ ಇಲ್ಲದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪ ಸಂಬಂಧ ಅರ್ಜಿದಾರನನ್ನು 2022ರ ಮೇ 23ರಂದು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದರು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸೈಯದುಲ್‌ ಅಖೋನ್‌ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ.
ಅರ್ಜಿದಾರ ಪರ ವಕೀಲರು, ಶಾಹಿದ್‌ ಅಹ್ಮದ್‌ ಅರ್ಜಿದಾರನ ಭಾರತೀಯ ಪ್ರಜೆಯಾಗಿದ್ದಾರೆ. ಆತ ಉತ್ತರಪ್ರದೇಶದಲ್ಲಿ ಜನಿಸಿದ್ದಾರೆ. ಆತನ ಕುಟುಂಬದವರು ಈಗಲೂ ಉತ್ತರ ಪ್ರದೇಶದಲ್ಲೇ ನೆಲೆಸಿದ್ದಾರೆ. ಅರ್ಜಿದಾರ ಭಾರತೀಯ ಪಾಸ್‌ಪೋರ್ಟ್‌ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಹೊಂದಿದ್ದಾರೆ. ಹೀಗಿದ್ದರೂ, ತನಿಖಾಧಿಕಾರಿಗಳು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆದ್ದರಿಂದ, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

ಅದನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಅರ್ಜಿದಾರ ಬಾಂಗ್ಲಾದೇಶದ ಪ್ರಜೆಯಾಗಿದ್ದಾರೆ. ಪಾಸ್‌ಪೋರ್ಟ್‌ ಹಾಗೂ ವೀಸಾ ಇಲ್ಲದೆಯೇ ಭಾರತ ಪ್ರವೇಶಿಸಿದ್ದಾನೆ. ಬೆಂಗಳೂರಿನಲ್ಲಿ ಗುಜರಿ ಅಂಗಡಿ ನಡೆಸುತ್ತಿರುವ ಆತ ತನ್ನ ವಾಸದ ವಿಳಾಸವನ್ನು ಬೆಂಗಳೂರಿಗೆ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದ. ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಆದ್ದರಿಂದ, ಆತನಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ಇದನ್ನು ಓದಿ: TUMAKURU: ಹಫ್ತಾ ವಸೂಲಿ ಆರೋಪ : ಪುಂಡರಿಂದ ವ್ಯಾಪಾರಿ ಮೇಲೆ ಹಲ್ಲೆ

click me!