ರಾಜಸ್ಥಾನದ ಜಲೋರ್ನಲ್ಲಿ, ಬಾಬಾ ತನ್ನದೇ ಆಶ್ರಮದ ಭಕ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದ್ದು ಇದಕ್ಕೆ ಆಶ್ರಮದ ಸಾಧ್ವಿಯೂ ಕೂಡ ಸಹಕರಿಸಿದ್ದಾಳೆ ಎನ್ನಲಾಗಿದೆ. ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದ ಅರ್ವಾ ಜಾನಿಪುರ ಗ್ರಾಮದಲ್ಲಿರುವ ಮಾನವ ಸೇವಾ ವಿಶ್ವ ಗುರು ಭಗವಾನ್ ದತ್ತಾತ್ರೇಯ ಆಶ್ರಮದಲ್ಲಿ ಕಾಳಸರ್ಪ ದೋಷವನ್ನು ಪರಿಹಾರ ಮಾಡುವ ನೆಪದಲ್ಲಿ 21 ದಿನಗಳಲ್ಲಿ 108 ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ.
ಜಲೋರ್ (ಆ.2): ಕೆಲ ವರ್ಷದ ಹಿಂದೆ ಒಟಿಟಿ ವೇದಿಕೆಯಲ್ಲಿ ಆಶ್ರಮ್ ಹೆಸರಿನ ವೆಬ್ ಸಿರೀಸ್ ಬಂದಿತ್ತು. ಬಹುತೇಕ ಅಂಥದ್ದೇ ಕತೆಯನ್ನು ಹೋಲುವ ನಿಜ ಪ್ರಕರಣ ನಡೆದಿದೆ. ಪೊಲೀಸರು ಪ್ರಕರಣದ ಕುರಿತಾದ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದಾರೆ, ಸಂತ್ರಸ್ತೆ ಕೂಡ ಪೊಲೀಸರಿಗೆ ಸಾಕಷ್ಟು ಪುರಾವೆಗಳನ್ನು ಹಸ್ತಾಂತರಿಸಿದ್ದಾಳೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಇದೀಗ ಪೊಲೀಸರು ದೊಡ್ಡ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದಲ್ಲಿ ಇರುವ ಆಶ್ರಮ ಇದಾಗಿದ್ದು, ಶತಮಾನಗಳಷ್ಟು ಹಳೆಯ ಇತಿಹಾಸ ಹೊಂದಿದೆ. ಕಾಳಸರ್ಪ ದೋಷ ನಿವಾರಣೆಯ ಹೆಸರಿನಲ್ಲಿ ಬಾಬಾ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಯು ದೂರಿದ್ದಾಳೆ. 108 ದಿನದಲ್ಲಿ ನೀನು ನನ್ನ ಜೊತೆ 21 ಬಾರಿ ಸಂಬಂಧ ಬೆಳೆಸಬೇಕು ಎಂದು ಬಾಬಾ ಹೇಳಿದ್ದ ಎನ್ನಲಾಗಿದೆ. ಇದರಿಂದ ನಿನ್ನ ಕಾಳಸರ್ಪ ದೋಷ ನನ್ನ ಮೇಲೆ ಬರುತ್ತದೆ ಎಂದೆಲ್ಲಾ ಆರೋಪಿಗೆ ಹೇಳಿದ್ದ ಎಂದು ತಿಳಿಸಲಾಗಿದೆ. ಪೋಸ್ಟ್ನ ಮೂಲಕ ಸಂತ್ರಸ್ತೆಯು ಪೊಲೀಸರಿಗೆ ತನ್ನ ದೂರನ್ನು ಸಲ್ಲಿಸಿದ್ದಾಳೆ. ಜುಲೈ 27ರಂದು ಪೊಲೀಸರು ಈ ಪತ್ರವನ್ನು ಪಡೆದುಕೊಂಡಿದ್ದಯ, ಜುಲೈ 28 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಎಫ್ಐಆರ್ ದಾಖಲು ಮಾಡಲಾಗಿದೆ.
ಜಲೋರ್ನ ಮಾನವ ಸೇವಾ ವಿಶ್ವ ಗುರು ಭಗವಾನ್ ದತ್ತಾತ್ರೇಯ ಆಶ್ರಮದ ಬಾಬಾ ತಾಗಾರಾಮ್ ತನ್ನನ್ನು ಅತ್ಯಾಚಾರ ಮಾಡಿದ್ದು, ಅವರ ಸಹಾಯಕಿ ಸಾಧ್ವಿ ಹೇಮಲತಾ ಇದರ ವಿಡಿಯೋ ಮಾಡಿದ್ದಾರೆ. ರೇಪ್ ಮಾಡುವ ವೇಳೆ ಸಂತ್ರಸ್ತೆಯು ಚೀರಾಡಿದರೆ, ಸಾಧ್ವಿ ಆಕೆಯ ಬಾಯಿಗೆ ಬಟ್ಟೆ ತುರುಕುತ್ತಿದ್ದಳು ಎನ್ನುವ ವಿಷಯ ಬಹಿರಂಗವಾಗಿದೆ. ರಾಜಸ್ಥಾನದ ಜಲೋರ್ನ ಸಂಚೋರ್ನಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಸಂತ್ರಸ್ತೆ ಜಲೋರ್ನ ಚಿಟಲ್ವಾನಾ ತಹಸಿಲ್ ನಿವಾಸಿ ಎಂದು ಸಂಚೋರ್ನ ಸರ್ವಾನಾ ಪೊಲೀಸ್ ಠಾಣೆಯ ಉಸ್ತುವಾರಿ ಕಿಷ್ಣರಾಮ್ ಬಿಷ್ಣೋಯ್ ಹೇಳಿದ್ದಾರೆ. ಜೋಧಪುರದಲ್ಲಿ ಅವರು ಕೆಲಸ ಮಾಡತ್ತಿದ್ದಾರೆ. ತನ್ನ ಪತಿ ಮತ್ತು ಅತ್ತೆಯಂದಿರು ದೇವತಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಕೆಯ ಪತಿ 2021 ರಲ್ಲಿ ಮಾನವ ಸೇವಾ ವಿಶ್ವ ಗುರು ದತ್ತಾತ್ರೇಯ ಆಶ್ರಮಕ್ಕೆ ಕರೆತಂದಿದ್ದರು. ಈ ಆಶ್ರಮವು ಸಂಚೋರ್ನ ಅರ್ವಾ ಜನೈಪುರ ಗ್ರಾಮದಲ್ಲಿದೆ. ಇಲ್ಲಿ ಅವರು ಸಾಧ್ವಿ ಹೇಮಲತಾ ಮತ್ತು ಅವರ ಸಹೋದ್ಯೋಗಿ ತಾಗರಾಮ್ ಅವರನ್ನು ಭೇಟಿಯಾಗಿದ್ದರು.
ಹರಿದ್ವಾರದಲ್ಲಿ ಮೊದಲ ಬಾರಿಗೆ ರೇಪ್: ಆಶ್ರಮದ ಮೇಲಿನ ನಂಬಿಕೆ ಹೆಚ್ಚಾದಾಗ, ನವೆಂಬರ್ 2021 ರಲ್ಲಿ, ಸಂಸ್ಥೆಯ ಗುಂಪಿನೊಂದಿಗೆ ಮಹಿಳೆ ಹರಿದ್ವಾರಕ್ಕೆ ಹೋಗಿದ್ದರು. 2021ರ ನವೆಂಬರ್ 18 ರಂದು ಹರಿದ್ವಾರದಲ್ಲಿ, ತಾಗರಾಮ್ ರಾತ್ರಿಯ ವೇಳೆ ಮಹಿಳೆಯನ್ನು ಕೋಣೆಗೆ ಕರೆಸಿದ್ದರು. ಒಳಗೆ ಬಂದ ನಂತರ ಬಾಗಿಲನ್ನು ಹಾಕಿ ಅಶ್ಲೀಲ ಕೃತ್ಯ ಎಸಗಿದ್ದಾನೆ. ಇದಾದ ನಂತರ ಹರಿದ್ವಾರದಲ್ಲಿ ನಡೆದ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಹೆದರಿಸಿದ್ದರು.
ಕಾಳಸರ್ಪ ದೋಷವಿದೆ. ಆದರಿಂದ ಬಾಬಾ ಟಾಗಾರಾಮ್ನಿಂದ ಪರಿಹಾರ ಪಡೆಯಬೇಕು ಎಂದು ನನಗೆ ಹೇಳಿದ್ದರು. ಈ ದೋಷವನ್ನು ಪರಿಹಾರ ಮಾಡಲು 108 ದಿನಗಳ ಅಂತರದಲ್ಲಿ 21 ಬಾರಿ ಬಾಬಾ ತಾಗಾರಾಮ್ ಜೊತೆ ದೈಹಿಕ ಸಂಬಂಧ ಬೆಳೆಸಬೇಕು. ಹೀಗೆ ಮಾಡುವುದರಿಂದ ನನ್ನ ಕಾಳ ಸರ್ಪ ದೋಷ ಅವರ ಮೇಲೆ ಬೀಳುತ್ತದೆ ಎಂದು ಸಾಧ್ವಿ ನನಗೆ ಹೇಳಿದ್ದರು ಎಂದು ಸಂತ್ರಸ್ತೆ ಬರೆದಿದ್ದಾರೆ. ಆದರೆ, ಈ "ಚಿಕಿತ್ಸೆ"ಗೆ ಮಹಿಳೆ ಸಿದ್ಧವಾಗಿರಲಿಲ್ಲ ಎಂದು ಮಹಿಳೆ ಹೇಳಿದ್ದಳು. ಮತ್ತೊಂದೆಡೆ, ಸಂಚೋರ್ ಡಿವೈಎಸ್ಪಿ ರೂಪ್ ಸಿಂಗ್ ಇಂದಾ ಅವರು ಸಂತ್ರಸ್ತೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮೆಡಿಕಲ್ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.
ರೈಲ್ವೆ ಸ್ಟೇಷನ್ನಲ್ಲೇ ಅತ್ಯಾಚಾರ: ಕೃತ್ಯವೆಸಗಿದ 4 ಉದ್ಯೋಗಿಗಳ ಬಂಧನ
ಬೆದರಿಕೆ ಹಾಕಿದ್ದ ಬಾಬಾ: 2022ರ ಫೆಬ್ರವರಿ 19 ರಂದು, ತಾಗರಾಮ್ ಮತ್ತು ಹೇಮಲತಾ ಮಹಿಳೆಯನ್ನು ಆಶ್ರಮಕ್ಕೆ ಕರೆದಿದ್ದರು. ರಾತ್ರಿ 8 ಗಂಟೆಗೆ ಸಾಧ್ವಿ ಅವಳನ್ನು ಭೂಗತ ಕೋಣೆಗೆ ಕರೆದೊಯ್ದಿದ್ದಳು. ಆಗಲೇ ಅಲ್ಲಿದ್ದ ಟಗರಾಮ್ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ಕೂಗಿಕೊಂಡಾಗ ಸಾಧ್ವಿ ಹೇಮಲತಾ ಬಾಯಿಗೆ ಬಟ್ಟೆ ಹಾಕಿದ್ದಾಳೆ. ಸಾಧ್ವಿ ಅತ್ಯಾಚಾರದ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ, ಯಾರಿಗಾದರೂ ಏನನ್ನಾದರೂ ಹೇಳಿದರೆ, ವೀಡಿಯೊ ವೈರಲ್ ಆಗಲಿದ್ದು, ಈ ಆಶ್ರಮದಲ್ಲಿಯೇ ಜೀವಂತವಾಗಿ ಸಮಾಧಿ ಮಾಡುವುದಾಗಿ ಬೆದರಿಕೆ ಹಾಕಕಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Delhi Crime News: ಚಲಿಸುತ್ತಿದ್ದ ಕಾರಿನಲ್ಲಿ 16 ವರ್ಷದ ಯುವತಿ ಗ್ಯಾಂಗ್ ರೇಪ್: ಆರೋಪಿಗಳು ಅರೆಸ್ಟ್
ಆಕೆಯ ಆರೋಪ ಸುಳ್ಳು: ಆಶ್ರಮದ ಮೇಲಿನ ಆರೋಪದ ಬಗ್ಗೆ ಸಾಧ್ವಿ ಹೇಮಲತಾ ಮಾತನಾಡಿದ್ದು, ಆಕೆಯ ಆರೋಪಗಳೆಲ್ಲವೂ ಸುಳ್ಳು. ಫೆಬ್ರವರಿ 19 ರಂದು ಆಶ್ರಮದಲ್ಲಿ ಸಾಕಷ್ಟು ಮಂದಿ ಜನರಿದ್ದರು. ಆ ದಿನದಂದು ಆಕೆ ಆಶ್ರಮಕ್ಕೆ ಬಂದಿರಲೇ ಇಲ್ಲ. ನನ್ನ ಹಾಗೂ ಆಶ್ರಮದ ಮೇಲಿನ ಪಿತೂರಿ ಇದಾಗಿದೆ. ಒಟ್ಟಾರೆ ಸಂಪೂರ್ಣ ಆರೋಪವೇ ಸುಳ್ಳು ಎಂದಿದ್ದಾರೆ.