
ಔರಂಗಬಾದ್: ಚಲಿಸುತ್ತಿದ್ದ ಆಟೋದಲ್ಲಿ ಯುವತಿಯೊಬ್ಬಳಿಗೆ ದುರುಳರು ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ತಪ್ಪಿಸಿಕೊಳ್ಳಲು ಯುವತಿ ಚಲಿಸುತ್ತಿದ್ದ ಆಟೋದಿಂದ ಜಿಗಿದ ಭಯಾನಕ ಘಟನೆ ಮಹಾರಾಷ್ಟ್ರದ ಔರಂಗಬಾದ್ನಲ್ಲಿ ನಡೆದಿದೆ. ಈ ಆಘಾತಕಾರಿ ದೃಶ್ಯ, ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಯುವತಿ ಆಟೋದಿಂದ ಜಿಗಿಯಲು ಹೋಗಿ ರಸ್ತೆಗೆ ಬಿದ್ದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಪಾರಾಗಿದ್ದಾಳೆ.
ಆಟೋ ಚಾಲಕ ಕಿರುಕುಳ ನೀಡಿದ್ದು, ಆತನ ಕಿರುಕುಳದಿಂದ ಪಾರಾಗುವ ಸಲುವಾಗಿ ಆಟೋದಿಂದ ಜಿಗಿದಿದ್ದಾಗಿ ಯುವತಿ ಆರೋಪಿಸಿದ್ದಾಳೆ. ಯುವತಿ ಆಟೋ ಬಿಟ್ಟು ಕೆಳಗೆ ಜಿಗಿದ ರಭಸಕ್ಕೆ ಕೆಳಗೆ ಬಿದ್ದಿದ್ದಾಳೆ. ಆಟೋದ ಹಿಂದೆಯೇ ಒಂದು ಕಾರು ಹಾಗೂ ಬೈಕು ಬಂದಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ಯುವತಿ ಕಾರಿನ ಕೆಳಗೆ ಸಿಲುಕಿ ಪ್ರಾಣಕ್ಕೆ ಹಾನಿಯಾಗುವ ಅಪಾಯವಿತ್ತು. ಆದರೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಯುವತಿ ಪಾರಾಗಿದ್ದಾಳೆ. ಯುವತಿ ಆಟೋದಿಂದ ಜಿಗಿದಿದ್ದನ್ನು ನೋಡಿದ ಕಾರು ಚಾಲಕ ಕೂಡಲೇ ಬ್ರೇಕ್ ಹಾಕಿ ಕಾರು ನಿಲ್ಲಿಸಿದ ಪರಿಣಾಮ ಅನಾಹುತ ತಪ್ಪಿದೆ. ಇತ್ತ ಕಾರಿನ ಹಿಂದೆಯೇ ಬಂದ ಬೈಕ್ ಸವಾರ ಕೂಡಲೇ ಬೈಕ್ ನಿಲ್ಲಿಸಿ ಯುವತಿಯ ಸಹಾಯಕ್ಕೆ ಧಾವಿಸಿ ಬಂದಿದ್ದಾನೆ.
ವೃದ್ಧನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮೂಡಬಿದಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ!
ಬಳಿಕ ಸುತ್ತಮುತ್ತಲಿದ್ದವರೆಲ್ಲರೂ ಸ್ಥಳಕ್ಕೆ ಧಾವಿಸಿ ಯುವತಿಯ ಸಹಾಯಕ್ಕೆ ಮುಂದಾಗಿದ್ದಾರೆ. ಹೀಗೆ ಆಟೋದಲ್ಲಿ(Auto) ಯುವತಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಸೈಯದ್ ಅಕ್ಬರ್ ಹಮೀದ್ (Syed Akbar Hameed) ಎಂದು ಗುರುತಿಸಲಾಗಿದೆ. ಯುವತಿಯ ದೂರಿನ ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ. ಇತ್ತ ಆಟೋದಿಂದ ಹಾರಿದ ಪರಿಣಾಮ ಯುವತಿಯ ತಲೆಗೆ ಗಾಯಗಳಾಗಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ (CCTV camera) ಈ ಆಘಾತಕಾರಿ ದೃಶ್ಯ ಸೆರೆ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಔರಂಗಾಬಾದ್ನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ( Kranti Chowk Police Station) ಪೋಕ್ಸೋ (ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ!
ಹೀಗೆ ಆಟೋದಿಂದ ಜಿಗಿದಾಕೆ ಅಪ್ರಾಪ್ತ ವಿದ್ಯಾರ್ಥಿನಿ (minor student) ಆಗಿದ್ದು, ಆಕೆ ಉಸ್ಮಾನ್ಪುರ ಪ್ರದೇಶದಿಂದ (Usmanpura are) ತನ್ನ ಮನೆಗೆ ಆಟೋದಲ್ಲಿ ತೆರಳುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಆಟೋದಲ್ಲಿ ಯುವತಿಯ ಹೊರತಾಗಿ ಯಾರು ಇಲ್ಲದಿರುವುದನ್ನು ಗಮನಿಸಿದ ಆಟೋ ಚಾಲಕ ಆಕೆಯೊಂದಿಗೆ ಅಸಭ್ಯವಾಗಿ ಮಾತನಾಡಲು ಶುರು ಮಾಡಿ ಕಿರುಕುಳ ನೀಡಲು ಶುರು ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಏನೂ ಸರಿ ಇಲ್ಲ ಎಂಬುದನ್ನು ಗಮನಿಸಿದ ಯುವತಿ ಆಟೋ ರಿಕ್ಷಾ ಔರಂಗಬಾದ್ನ (Aurangabad) ಸಿಲ್ಲಿ ಖಾನಾ (Silli Khana) ಕಾಂಪ್ಲೆಕ್ಸ್ ತಲುಪುತ್ತಿದ್ದಂತೆ ಆಟೋದಿಂದ ಜಿಗಿದಿದ್ದಾಳೆ. ಇದರಿಂದ ಯುವತಿಯ ತಲೆಗೆ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಗಣಪತ್ ದರದೆ (Ganpat Darade) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ