Bank Fraud Cases: ವಂಚಕ ಬ್ಯಾಂಕಿಂದ ಸಾಲ ಮರುಪಾವತಿಗೆ ನೆರವು: ಸಚಿವ STS

By Kannadaprabha NewsFirst Published Feb 10, 2022, 6:24 AM IST
Highlights

* ಗುರು ರಾಘವೇಂದ್ರ, ವಶಿಷ್ಟ ಸೌಹಾರ್ದ ಬ್ಯಾಂಕ್‌ಗಳ ಅವ್ಯವಹಾರ
* ಶೀಘ್ರ ರೀಆಡಿಟ್‌ ಮಾಡಿ: ಸೋಮಶೇಖರ್‌
* ಫೆ. 25ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಸಭೆ
 

ಬೆಂಗಳೂರು(ಫೆ.10): ಠೇವಣಿದಾರರ ಹಿತ ಕಾಪಾಡಲು ಸರ್ಕಾರ(Government of Karnataka) ಬದ್ಧವಾಗಿದ್ದು, ಸಾಲ ಮರುಪಾವತಿ ಕುರಿತು ಅಗತ್ಯ ನೆರವು ನೀಡಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌(ST Somashekhar) ಆಶ್ವಾಸನೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌(Shri Guraghavendra Co-operative Bank) ಮತ್ತು ಶ್ರೀ ವಶಿಷ್ಟ ಸೌಹಾರ್ದ ಸಹಕಾರ ಬ್ಯಾಂಕ್‌ನ(Shri Vashishta Co-Operative bank) ಅವ್ಯವಹಾರಗಳು ಮತ್ತು ಪುನಶ್ಚೇತನ ಕುರಿತು ಪರಾಮರ್ಶಿಸಿದರು.

ಗುರುರಾಘವೇಂದ್ರ ಬ್ಯಾಂಕ್‌ ಗ್ರಾಹಕರ ಹಣ ಶೀಘ್ರ ವಾಪಸ್‌

ಈ ವೇಳೆ ಮಾತನಾಡಿದ ಅವರು, ಎರಡು ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆ(Fraud), ಅವ್ಯವಹಾರ, ಹಣ ದುರುಪಯೋಗ ಮಾಡಿರುವವರ ವಿರುದ್ಧ ಕಾನೂನಾತ್ಮಕ ಕ್ರಮ(Legal Action) ಕೈಗೊಳ್ಳುವುದರ ಜತೆಗೆ ಹಣ ವಸೂಲಾತಿ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅವಶ್ಯ ಇರುವ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆಸ್ತಿಗಳನ್ನು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಶೀಘ್ರ ರೀಆಡಿಟ್‌(Re-Audit) ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ರಮ ಎಸಗಿರುವ ಪ್ರಮುಖ 24 ಆರೋಪಿಗಳ(Accused) ಹೆಸರು ಮತ್ತು ಫೋಟೋವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತಾಗಬೇಕು. ಸಾಲ ವಸೂಲಾತಿ, ಠೇವಣಿದಾರರ(Depositors) ಹಿತ ಕಾಪಾಡುವಲ್ಲಿ ಸರ್ಕಾರ, ಆರ್‌ಬಿಐ(RBI) ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಠೇವಣಿದಾರರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತಿರಬೇಕು. ಆಡಳಿತಾಧಿಕಾರಿಗಳು ವೆಚ್ಚಗಳನ್ನು ನಿಭಾಯಿಸಲು ಆರ್‌ಬಿಐ ಸೂಕ್ತ ರೀತಿಯಲ್ಲಿ ಸಹಕರಿಸಬೇಕು ಎಂದರು.

ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವವರಲ್ಲಿ ಶೇ.95ರಷ್ಟುಜನ ಹಿರಿಯ ನಾಗರಿಕರಾಗಿದ್ದಾರೆ. ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ಅವರು ಜೀವನ ಸಾಗಿಸುತ್ತಿದ್ದಾರೆ. ಸಾಲ ವಸೂಲಾತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಶಾಸಕರಾದ ಸೌಮ್ಯಾ ರೆಡ್ಡಿ, ಯು.ಬಿ.ವೆಂಕಟೇಶ್‌, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಇತರರು ಉಪಸ್ಥಿತರಿದ್ದರು.

900 ಕೋಟಿ ವಸೂಲಿ: ಸಿಐಡಿ

ಇದೇ ವೇಳೆ ಸಿಐಡಿ(CID) ವಿಚಾರಣಾಧಿಕಾರಿಗಳು, ಪ್ರಮುಖ 24 ಆರೋಪಿಗಳಿಂದ 900 ಕೋಟಿ ರು.ಗಿಂತ ಹೆಚ್ಚು ಹಣ ವಸೂಲಿಯಾಗಬೇಕಿದೆ. ಪ್ರಕರಣದ ಕುರಿತು ಫಾರೆನ್ಸಿಕ್‌ ಆಡಿಟ್‌ ನಡೆಯುತ್ತಿದೆ. ಸಾಲ ಮರುಪಾವತಿ ಮಾಡದವರ ವಿರುದ್ಧ ಆರೋಪಪಟ್ಟಿಸಲ್ಲಿಕೆಯಾಗಿದೆ. 42 ಜನರ ಬಂಧನವಾಗಿದ್ದು, 9500 ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಪ್ರಮುಖ 24 ಆರೋಪಿಗಳ ಆಸ್ತಿಗಳನ್ನು ಪರಭಾರೆ ಮಾಡದಂತೆ ನೋಂದಣಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರೈತರಿಗೆ ಸಾಲ ನೀಡಿಕೆಯಲ್ಲಿ 68% ಗುರಿ ಸಾಧನೆ: ಸಚಿವ ಎಸ್‌.ಟಿ.ಸೋಮಶೇಖರ್‌

ಮಾ.15ರೊಳಗೆ 5 ವರ್ಷದ ರೀಆಡಿಟ್‌ ಮುಕ್ತಾಯ ಮಾಡಲಾಗುವುದು. ಶ್ರೀ ವಶಿಷ್ಟ ಕ್ರೆಡಿಟ್‌ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ಹಣಕಾಸು ಅಕ್ರಮಗಳು ಕಂಡು ಬಂದಿವೆ. ಒಬ್ಬರೇ ಲೆಕ್ಕಪರಿಶೋಧಕರು ನಿಯಮಬಾಹಿರವಾಗಿ ಲೆಕ್ಕಪರಿಶೋಧನೆ ಮಾಡಿರುವುದು ಗಮನಕ್ಕೆ ಬಂದ ಬಳಿಕ ಅವರನ್ನು ಸಮಿತಿಯಿಂದ ಹೊರಹಾಕಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

25ರಂದು ನಿರ್ಮಲಾ ಜತೆ ಸಭೆ

ದೆಹಲಿಯಿಂದ ವರ್ಚುಯಲ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಗುರು ರಾಘವೇಂದ್ರ ಬ್ಯಾಂಕ್‌ ಅವ್ಯವಹಾರದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಖುದ್ದು ನಿಗಾವಹಿಸಿದ್ದಾರೆ. ಆರ್‌ಬಿಐನಿಂದ ಅಗತ್ಯ ಇರುವ ನೆರವು ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಫೆ.25ರಂದು ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಈ ಬಗ್ಗೆ ಸಭೆ ನಡೆಯಲಿದೆ ಎಂದು ತಿಳಿಸಿದರು.
 

click me!