
ಬೆಂಗಳೂರು (ಮೇ.25): ಅಪರಾಧ ಪ್ರಕರಣದ ವಿಚಾರಣೆ ಸಲುವಾಗಿ ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದ್ದಾಗ ಮನೆಯೊಂದರ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಪೊಲೀಸರ ಕಿರುಕುಳವೇ ಘಟನೆ ಕಾರಣ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಬೊಮ್ಮನಹಳ್ಳಿ ನಿವಾಸಿ ಮೊಹಮ್ಮದ್ ಹುಸೇನ್ (31) ಮೃತ ದುರ್ದೈವಿ. ಯುವತಿಗೆ ಲಾಂಗ್ ತೋರಿಸಿ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಹುಸೇನ್ನನ್ನು ವಶಕ್ಕೆ ಪಡೆಯಲು ಸಂಜೆ 5 ಗಂಟೆಗೆ ಆತನ ಮನೆಗೆ ಬೊಮ್ಮನಹಳ್ಳಿ ಠಾಣೆಯ ಐವರು ಪೊಲೀಸರು ತೆರಳಿದ್ದರು. ಆ ವೇಳೆ ಆತ ತಪ್ಪಿಸಿಕೊಳ್ಳುವ ಭರದಲ್ಲಿ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ ಎಂದು ಮೂಲಗಳು ಹೇಳಿವೆ. ಆದರೆ ತಮ್ಮ ಪುತ್ರನ ಸಾವಿಗೆ ಪೊಲೀಸರೇ ಕಾರಣವಾಗಿದ್ದಾರೆ ಎಂದು ಆರೋಪಿಸಿ ಆತನ ಕುಟುಂಬ ಸದಸ್ಯರು ದೂರು ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಕೇಸರಿ ಕದನ: ಬಿಜೆಪಿ ಸರ್ಕಾರದ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸಮರ
ಲಾಂಗ್ ತೋರಿಸಿ ಜೀವ ಬೆದರಿಕೆ: ತನ್ನ ಕುಟುಂಬದ ಜತೆ ನೆಲೆಸಿದ್ದ ಹುಸೇನ್, ಸ್ಥಳೀಯವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಸಹ ಪಾತ್ರವಹಿಸುತ್ತಿದ್ದ ಎಂಬ ಆರೋಪ ಬಂದಿದೆ. ಈ ಹಿಂದೆ ಆತನ ಮೇಲೆ ಬೊಮ್ಮನಹಳ್ಳಿ ಠಾಣೆಯಲ್ಲಿ ಸುಲಿಗೆ (ಐಪಿಸಿ 384) ಪ್ರಕರಣ ಕೂಡಾ ದಾಖಲಾಗಿತ್ತು. ಎರಡು ದಿನಗಳಿಂದ ಯುವತಿಯೊಬ್ಬಳಿಗೆ ರಸ್ತೆಯಲ್ಲಿ ಅಡ್ಡಗಟ್ಟಿಹುಸೇನ್ ಕಿರುಕುಳ ಕೊಡುತ್ತಿದ್ದ. ಮಂಗಳವಾರ ಕೂಡಾ ಆಕೆಗೆ ಲಾಂಗ್ ತೋರಿಸಿ ಹುಸೇನ್ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ತನ್ನ ತಂದೆ ಬಳಿ ಸಂತ್ರಸ್ತೆ ಹೇಳಿಕೊಂಡು ಕಣ್ಣೀರಿಟ್ಟಿದ್ದಳು.
ಕೊನೆಗೆ ಸಂತ್ರಸ್ತೆ ತಂದೆ ನೀಡಿದ ದೂರಿನ ಮೇರೆಗೆ ಹುಸೇನ್ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಬುಧವಾರ ಸಂಜೆ ಹುಸೇನ್ನನ್ನು ವಶಕ್ಕೆ ಪಡೆಯಲು ಆತನ ಮನೆಗೆ ತೆರಳಿದ್ದರು. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಹುಸೇನ್ ಕುಟುಂಬ ನೆಲೆಸಿದೆ. ಮನೆಗೆ ಪೊಲೀಸರನ್ನು ಬಂದಿದ್ದನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಮಹಡಿಯಿಂದ ಆತ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹುಸೇನ್ನನ್ನು ಪೊಲೀಸರೇ ತಳ್ಳಿದರು, ಕುಟುಂಬಸ್ಥರು: ಮೂರನೇ ಮಹಡಿಯಿಂದ ಪೊಲೀಸರೇ ಹುಸೇನ್ನನ್ನು ದೂಡಿ ಸಾಯಿಸಿದ್ದಾರೆ ಎಂದು ಮೃತನ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಅಪರಾಧ ಪ್ರಕರಣದಲ್ಲಿ ಹುಸೇನ್ನನ್ನು ವಶಕ್ಕೆ ಪಡೆಯಲು ಮನೆಗೆ ಬಂದ ಪೊಲೀಸರು, ಬಳಿಕ ಆತನನ್ನು ಅರೆಬೆತ್ತಲೆಗೊಳಿಸಿ ಮನೋಸೋಇಚ್ಛೆ ಹೊಡೆದು ಕ್ರೌರ್ಯ ಮೆರೆದಿದ್ದಾರೆ. ಈ ದೌರ್ಜನ್ಯ ಎಸಗಿದ ಬಳಿಕ ಹುಸೇನ್ನನ್ನು ಹಿಡಿದು ಮೂರನೇ ಮಹಡಿಯಿಂದ ಕೆಳಗೆ ದೂಡಿದ್ದಾರೆ ಎಂದು ಕುಟುಂಬ ಸದಸ್ಯರು ಆಪಾದಿಸಿದ್ದಾರೆ.
ನಮ್ಮ ಪೊಲೀಸರು ಯಾವತ್ತೂ ಕೇಸರೀಕರಣ ಮಾಡಿಲ್ಲ: ಡಿಕೆಶಿ ಹೇಳಿಕೆಗೆ ಬೊಮ್ಮಾಯಿ ಕಿಡಿ
ಅಪರಾಧ ಪ್ರಕರಣ ಸಂಬಂಧ ಹುಸೇನ್ನನ್ನು ವಶಕ್ಕೆ ಪಡೆಯಲು ತೆರಳಿದ್ದಾಗ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಪೊಲೀಸರ ಮೇಲೆ ಮೃತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಸತ್ಯಾಸತ್ಯೆ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುತ್ತದೆ.
-ಡಾ.ಸಿ.ಕೆ.ಬಾಬಾ, ಡಿಸಿಪಿ, ಆಗ್ನೇಯ ವಿಭಾಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ