
ಉಡುಪಿ (ಫೆ.5): ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡುವಿನಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ 2021ನೇ ಜುಲೈನಲ್ಲಿ ವಿಶಾಲ ಗಾಣಿಗ ಕೊಲೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಆಕೆಯ ಗಂಡ ರಾಮಕೃಷ್ಣ, ಸುಪಾರಿ ಕಿಲ್ಲರ್ಗಳಾದ ಸ್ವಾಮಿನಾಥನ್ ನಿಷಾದ್ ಮತ್ತು ರೋಹಿತ್ ರಾಣಾ ಪ್ರತಾಪ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರಾಮಕೃಷ್ಣನಿಗೆ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ನನ್ನು ಪರಿಚಯಿಸಿದ್ದ ಧರ್ಮೇಂದ್ರ ಕುಮಾರ್ ಸುಹಾನಿ 3 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಆತ ಭಾರತಕ್ಕೆ ಬಂದ ಬಗ್ಗೆ ಮಾಹಿತಿ ಪಡೆದ ಬ್ರಹ್ಮಾವರ ಠಾಣಾ ಪಿಎಸ್ಐ ಮಧು ಬಿ.ಇ. ಹಾಗೂ ಸಿಬ್ಬಂದಿ ಶಾಂತರಾಜ್, ಸುರೇಶ ಬಾಬು ಅವರ ತಂಡ ಶುಕ್ರವಾರ ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು, ಶನಿವಾರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಡಗಿನ ಚೇಲಾವರ ಜಲಪಾತ ನೋಡಲು ಬಂದ ಕೇರಳದ ಯುವಕ ಮುಳುಗಿ ಸಾವು
ಈ ಹಿಂದೆ ಏನಾಗಿತ್ತು?: ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಕೋಟದ ವಿಶಾಲ ಗಾಣಿಗ ಕೊಲೆ ಘಟನೆ ನಡೆದು ವರ್ಷ ತುಂಬುವುದಕ್ಕೆ 3 ದಿನಗಳಿರುವಾಗ ಪ್ರಕರಣ ಪ್ರಮುಖ ಆರೋಪಿ ಉತ್ತರಪ್ರದೇಶದ ಗೋರಕ್ ಪುರ್ ನಿವಾಸಿ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ವನ್ನು ಬ್ರಹ್ಮಾವರ ಪೊಲೀಸರು 2022ರಲ್ಲಿ ಬಂದಿಸಿದ್ದರು.
2021ರ ಜುಲೈ 12 ರಂದು ಬ್ರಹ್ಮಾವರದ ಕುಮ್ರಗೊಡಿನ ಮಿಲನ್ ರೆಸಿಡೆನ್ಸಿಯಲ್ಲಿ ವಿಶಾಲ ಗಾಣಿಗ ಅವರನ್ನು ಸುಪಾರಿ ಹಂತಕರು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು. ಆಸ್ತಿ ಜಗಳಕ್ಕಾಗಿ ಈ ಕೊಲೆಗೆ 4 ಲಕ್ಷ ರು. ಸುಪಾರಿ ನೀಡಿದ್ದ ಆಕೆಯ ಪತಿ ರಾಮಕೃಷ್ಣ ಗಾಣಿಗ ಮತ್ತು ಗೋರಕಪುರದ ಸ್ವಾಮಿನಾಥ ನಿಶಾದ್ ರನ್ನು ಬಂಧಿಸಲಾಗಿತ್ತು.
ಉತ್ತರಪ್ರದೇಶದವನಾದರೂ ರೋಹಿತ್ ರಾಣಾ ಪ್ರತಾಪ್ ನಿಶಾದ್ ಮುಂಬಯಿಯ ಗ್ರ್ಯಾಂಟ್ ರೋಡ್ನಲ್ಲಿ ವಾಸವಿದ್ದನು. ಆದರೆ ವಿಶಾಲ ಗಾಣಿಗ ಕೊಲೆಯ ನಂತರ ಮುಂಬಯಿಗೆ ಹೋಗಿರಲಿಲ್ಲ. ಮಗ ನಾಪತ್ತೆಯಾಗಿದ್ದಾನೆ ಎಂದು ಆತನ ಹೆತ್ತವರು ಮುಂಬಯಿಯ ಗಾಮ್ದೇವಿ ಠಾಣೆಯಲ್ಲಿ ದೂರು ನೀಡಿದ್ದರು.
ಸಾಧುಗಳ ಜೊತೆಗಿದ್ದ
ಸ್ವಾಮಿನಾಥ್ ಜೊತೆ ಸೇರಿ ಕೊಲೆ ಮಾಡಿದ ರಾಣಾ ನೇಪಾಳ ಗಡಿಯ ಮಹಾರಾಜಗಂಜ್ ನಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿರುವ ಸಾಧುಗಳ ಜತೆ ತಾನಿದ್ದರೆ ಪೊಲೀಸರ ಕಣ್ಣಿಗೆ ಬೀಳುವುದಿಲ್ಲ ಎಂದು ಯೋಚಿಸಿದ್ದ. ಕೆಲದಿನಗಳ ನಂತರ ಅಲ್ಲಿಂದ ಗೋವಾಕ್ಕೆ ಹೋಗಿದ್ದ. ಬ್ರಹ್ಮಾವರ ಪೊಲೀಸರು ಗೋವಾಕ್ಕೆ ಹೋದಾಗ ಅಲ್ಲಿಂದ ಪಲಾಯನ ಮಾಡಿ ಗೋರಕಪುರಕ್ಕೆ ಹೋಗಿ ವಾಸಿಸುತ್ತಿದ್ದ.
ಮೊಬೈಲ್ ಬಳಸ್ತಿರಲಿಲ್ಲ
10ನೇ ತರಗತಿಯವರೆಗೆ ಓದಿರುವ ಯುವಕ ರಾಣಾ ಮೊಬೈಲ್ ಫೋನನ್ನೇ ಬಳಸುತ್ತಿರಲಿಲ್ಲ. ಆದ್ದರಿಂದ ಮೊಬೈಲ್ ಲೋಕೇಶನ್ ನಿಂದ ಆತನ ಓಡಾಟದ ಮೇಲೆ ನಿಗಾ ಇಡುವುದಕ್ಕೆ ಪೊಲೀಸರಿಗೆ ಆಗಿರಲಿಲ್ಲ. ಆದರೆ ಊರಿಗೆ ಬಂದೇ ಬರುತ್ತಾನೆ ಎಂಬ ಕಾರಣಕ್ಕೆ ಉಡುಪಿಯಿಂದ 2,232 ಕಿ.ಮೀ. ದೂರವಿರುವ ಗೋರಖಪುರಕ್ಕೆ ಹೋಗಿದ್ದ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತಪದ್ಮನಾಭ ಅಲ್ಲಿನ ಸ್ಥಳೀಯರೊಬ್ಬರ ವಿಶ್ವಾಸ ಸಂಪಾದಿಸಿ ಮಾಹಿತಿ ಪಡೆಯುತ್ತಿದ್ದರು.
ಪತಿಯೇ ಮಾಡಿಸಿದ್ದ ಕೊಲೆ ಇದು
ರಾಮಕೃಷ್ಣ ಗಾಣಿಗ ದುಬೈಯಲ್ಲಿದ್ದುಕೊಂಡೇ ಗೋರಖಪುರದ ಈ ಹಂತಕರಿಗೆ ಸುಪಾರಿ ನೀಡಿದ್ದ. ಕೊಲೆಗಾರರು ಪಾರ್ಸೆಲ್ ನೀಡುವ ನೆಪದಲ್ಲಿ ಆಕೆಯ ಪ್ಲಾಟಿಗೆ ಹೋಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿದ್ದರು. ಅಮಾಯಕನಂತೆ ಆಕೆಯ ಶವಸಂಸ್ಕಾರಕ್ಕೆ ಬಂದು ಮೊಸಳೆ ಕಣ್ಣೀರು ಹಾಕುತ್ತಿದ್ದ ಗಾಣಿಗನನ್ನು ಪೊಲೀಸರು ಬಂಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ