Crime News: ದೇವಸ್ಥಾನದ ಕೆರೆಗೆ ಹಾರಿದ ಯುವಕ, ವಿದ್ಯಾರ್ಥಿಯನ್ನ ಕರೆಯಲು ಹೋಗಿ ಹಲ್ಲೆಗೊಳಗಾದ ಶಿಕ್ಷಕ

By Suvarna NewsFirst Published Dec 7, 2021, 11:44 PM IST
Highlights

* ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ
* ಉಡುಪಿ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ
* ಕೆಲಸವಿಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ 

ಉಡುಪಿ/ಬೆಂಗಳೂರು/ತುಮಕುರು, (ಡಿ.07): ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ. ಬೆಂಜ್ ಐಶರಾಮಿ ಕಾರು ಮತ್ತು ಎರಡು ಆಟೋ ಮತ್ತು ಮಿನಿ ಲಾರಿ ನಡುವೆ ನಡೆದ ಸರಣಿ ಅಪಘಾತದಲ್ಲಿ ಓರ್ವ ಸಾವು. ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಡ್ರಗ್ ಪೆಡ್ಲರ್ ಗಳು ಅರೆಸ್ಟ್. ಪ್ರತ್ಯೇಕವಾಗಿ ನಡೆದ ಅಪರಾಧ ಪ್ರಕರಣಗಳು (Crime Cases)..

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಯುವಕನೊಬ್ಬ ದೇವಸ್ಥಾನವೊಂದರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯ ಪಾಂಡೇಶ್ವರದ ಯಡಬೆಟ್ಟು ನಿವಾಸಿ ಸುನೀಲ್ ಮೊಗವೀರ ಆತ್ಮಹತ್ಯೆ (Suicide) ಮಾಡಿಕೊಂಡ ಯುವಕ.

Illicit Affair: ಅಕ್ರಮ ಸಂಬಂಧ : ಆಕೆಯನ್ನು ಕೊಲೆ ಮಾಡಿ ಶವದ ಜೊತೆಗೆ ಮಲಗಿದ ಭೂಪ

ಈತ ಉಡುಪಿ (Udupi) ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ (Temple) ಕೆರೆಗೆ (Lake) ಹಾರಿ (ಡಿ07)ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಮಾನಸಿಕವಾಗಿ ನೊಂದುಕೊಂಡು ಕುಗ್ಗಿ ಹೋಗಿದ್ದ ಎನ್ನಲಾಗಿದೆ.

ಇಂದು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಲ್ಲಿ ದರ್ಶನ‌ ಪಡೆದ ಬಳಿಕ ಈತ, ಅಲ್ಲಿನ ದೇವಸ್ಥಾನದ ಕೆರೆಗೆ ಹಾಕಲಾಗಿದ್ದ ಕಬ್ಬಿಣದ ಬೇಲಿಯನ್ನು ದಾಟಿ ಹಾರಿದ್ದಾನೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದರೂ ಆತನನ್ನು ಉಳಿಸಿಕೊಳ್ಳಲು ಆಗಿಲ್ಲ.

ಕೂಲಿ ಕೆಲಸ ಮಾಡಿಕೊಂಡಿದ್ದ ಸುನೀಲ್​, ಇತ್ತೀಚೆಗೆ ಕೆಲವು‌ ದಿನಗಳಿಂದ‌ ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದೆ. ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ಮಾಡಿದ್ದಾರೆ.

ವಿದ್ಯಾರ್ಥಿಯನ್ನು ಕರೆಯಲು ಹೋದ ಶಿಕ್ಷಕನ ಮೇಲೆ ಹಲ್ಲೆ
ಕುಣಿಗಲ್ : ಶಾಲೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಯನ್ನು ಶಾಲೆಗೆ ಕಳಿಸುವಂತೆ ಪೋಷಕರ ಬಳಿ ಮುಖ್ಯ ಶಿಕ್ಷಕನ್ನು ಕೇಳುತ್ತಿದ್ದ ವೇಳೆ ಪಾನಮತ್ತ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಲಾಳಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಹಲ್ಲೆಗೆ ಒಳಗಾದ ವ್ಯಕ್ತಿ.

ಲಾಳಾಪುರ ಕಾಲೋನಿಯ ವಿದ್ಯಾರ್ಥಿ ಸೋಮಶೇಖರ್ ಹಲವು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದರಿಂದ ಪೋಷಕರನ್ನು ಕೇಳಲು ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಮಂಗಳವಾರ ಸಂಜೆ ಪೋಷಕರ ಮನೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾಗ ಪಕ್ಕದ ಪೆಟ್ಟಿಗೆ ಅಂಗಡಿ ಬಳಿ ಕುಳಿತ್ತಿದ್ದ ಪ್ರಸಾದ್ ಎಂಬುವವನು, ಅವರ ಮಕ್ಕಳನ್ನು ವಿಚಾರಿಸುತ್ತೀಯ ನಮ್ಮ ಮಕ್ಕಳನ್ನು ಏಕೆ ವಿಚಾರಿಸುವುದಿಲ್ಲ ಎಂದು ಕೇಳಿದ್ದ.

ಇದಕ್ಕೆ ಶಿಕ್ಷಕ ನೀವು ಯಾರು ನನಗೆ ಗೊತ್ತಿಲ್ಲ, ನಿಮ್ಮ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದಾಗ, ನೀನು ಕತ್ತೆ ಕಾಯುತ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ಮುಖ್ಯ ಶಿಕ್ಷಕರನ್ನು ನಿಂದಿಸಿ ಅವರ ಶರ್ಟ್ ಕಾಲರ್ ಹಿಡಿದು ತಲೆ ಹಾಗೂ ಕಪ್ಪಾಳದ ಮೇಲೆ ಹೊಡೆದು ಬಳಿಕ ಮತ್ತೊಬ್ಬ ವ್ಯಕ್ತಿ ಅವನ ಜೊತೆಯಲ್ಲಿ ಬಂದು ಇಬ್ಬರು ಸೇರಿ ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ಕ್ರಮಕೈಗೊಂಡು ರಕ್ಷಣೆ ನೀಡುವಂತೆ ಮುಖ್ಯ ಶಿಕ್ಷಕ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸರಣಿ ವಾಹನ ಅಪಘಾತ 
ಬೆಂಜ್ ಐಶರಾಮಿ ಕಾರು ಮತ್ತು ಎರಡು ಆಟೋ ಮತ್ತು ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇಂದಿರಾನಗರದ 80 ಅಡಿ ರಸ್ತೆಯಲ್ಲಿ ವೇಗವಾಗಿ ಬಂದ ಬೆಂಜ್ ಕಾರು ಎರಡು ಆಟೋಗಳಿಗೆ ಅಪ್ಪಳಿಸಿದೆ. ಈ ವೇಳೆ ಮಿನಿ ಲಾರಿ ಸೇರಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಈ ವೇಳೆ ಆಟೋ ಚಾಲಕ ಸಾವನ್ನಪ್ಪಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲಸೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿಸಿಬಿ ಪೊಲೀಸರಿಂದ ಡ್ರಗ್ ಪೆಡ್ಲರ್ಸ್ ಸೆರೆ: 
ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹತ್ತು ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

click me!