Bengaluru News: ಸ್ನಾನ ಮಾಡದೇ’ ದೇಗುಲಕ್ಕೆ ಬಂದ ಮಹಿಳೆ; ನೀನು ನೀಚ ಕುಲದವಳೆಂದು ಹಿಗ್ಗಾಮುಗ್ಗ ಥಳಿತ

By Kannadaprabha NewsFirst Published Jan 7, 2023, 7:59 AM IST
Highlights
  • ‘ಸ್ನಾನ ಮಾಡದೇ’ ದೇಗುಲಕ್ಕೆ ಬಂದವಳಿಗೆ ಥಳಿತ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
  • ಧರ್ಮದರ್ಶಿ ವಿರುದ್ಧ ಎಫ್‌ಐಆರ್‌
  • ಅಮೃತಹಳ್ಳಿಯ ಲಕ್ಷ್ಮೇ ನರಸಿಂಹ ದೇಗುಲದಲ್ಲಿ ಘಟನೆ

ಬೆಂಗಳೂರು (ಜ.7) : ನಗರದ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆ ಮಹಿಳೆ ಮೇಲಿನ ಹಲ್ಲೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಅಮೃತಹಳ್ಳಿ(Amritahalli) ಯ ಲಕ್ಷ್ಮೇ ನರಸಿಂಹಸ್ವಾಮಿ ದೇವಸ್ಥಾನ(Lakshmi narasimha swamy temple)ದಲ್ಲಿ ಡಿ.21ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾ(CCTV camera)ದಲ್ಲಿ ಹಲ್ಲೆಯ ದೃಶ್ಯಾವಳಿ ಸೆರೆಯಾಗಿದೆ. ಅಮೃತಹಳ್ಳಿಯ ಮುನಿಗುರಪ್ಪ ಲೇಔಟ್‌(Munigurappa layout)ನ ಹೇಮಾವತಿ(32) ಹಲ್ಲೆಗೆ ಒಳಗಾದವರು. ಈ ಸಂಬಂಧ ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣಪ್ಪ ವಿರುದ್ಧ ಅಮೃತಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲವಂತದ ಮತಾಂತರ ಆರೋಪ, ಕ್ರಿಸ್ಮಸ್ ಸಂಭ್ರಮಾಚರಣೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿತ!

ಅವಾಚ್ಯಶಬ್ದದಿಂದ ನಿಂದನೆ: ಹೇಮಾವತಿ

‘ನಾನು ಡಿ.21ರಂದು ಬೆಳಗ್ಗೆ 9.30ಕ್ಕೆ ಲಕ್ಷ್ಮೇ ನರಸಿಂಹ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನಕ್ಕೆ ಮುಂದಾದಾಗ ಮುನಿಕೃಷ್ಣಪ್ಪ ಅವರು ನನ್ನ ಜತೆ ಅಸಭ್ಯವಾಗಿ ವರ್ತಿಸಿದರು. ನೀನು ನೀಚ ಕುಲದವಳು. ಸ್ನಾನ ಮಾಡದೇ ಶುದ್ಧಿ ಇಲ್ಲದೆ ದೇವಸ್ಥಾನಕ್ಕೆ ಬರುತ್ತೀಯಾ? ನಿನಗೆ ಇಲ್ಲಿ ದೇವರ ದರ್ಶನ ಮಾಡಲು ನಾನು ಅವಕಾಶ ನೀಡುವುದಿಲ್ಲ. ನೀನು ಕಪ್ಪಗೆ ವಿಚಿತ್ರವಾಗಿ ಇದ್ದೀಯಾ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿದರು. ನನ್ನ ಮೇಲೆ ಮನಬಂದಂತೆ ಹಲ್ಲೆ ಮಾಡಿ, ತಲೆ ಕೂದಲು ಹಿಡಿದು ಧರ ಧರನೇ ಎಳೆದಾಡಿ ದೇವಸ್ಥಾನದ ಹೊರಗೆ ದೂಡಿದರು’ ಎಂದು ಹೇಮಾವತಿ ಆರೋಪಿಸಿದ್ದಾರೆ.

‘ಈ ವೇಳೆ ಅರ್ಚಕರು ಬಿಡಿಸಲು ಬಂದಾಗ, ಮುನಿಕೃಷ್ಣಪ್ಪ ಅವರು ಸಮೀಪದಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ನನ್ನನ್ನು ಥಳಿಸಿ ದೇವಸ್ಥಾನದ ಹೊರಗೆ ನೂಕಿದರು. ಈ ವಿಚಾರವನ್ನು ನಿನ್ನ ಗಂಡ ಅಥವಾ ಯಾರಿಗಾದರೂ ಹೇಳಿದರೆ, ನಿನ್ನ ಮತ್ತು ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಮುನಿಕೃಷ್ಣಪ್ಪ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪತಿ ನಿಧನದ ಬಳಿಕ ಮತ್ತೊಂದು ಮದುವೆಯಾದ ಮಹಿಳೆಗೆ ಥಳಿತ, ಸ್ಥಿತಿ ಚಿಂತಾಜನಕ!

ನಾನು ವೆಂಕಟೇಶ್ವರನ ಪತ್ನಿ!

ಹಲ್ಲೆಗೊಳಗಾದ ಮಹಿಳೆ ಅಂದು ದೇವಸ್ಥಾನಕ್ಕೆ ಬಂದು ದೇವರ ಗರ್ಭಗುಡಿ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಅರ್ಚಕರು ತಡೆಯಲು ಮುಂದಾದಾಗ, ನಾನು ವೆಂಕಟೇಶ್ವರಸ್ವಾಮಿಯ ಪತ್ನಿ ಲಕ್ಷ್ಮೇದೇವಿ. ನಾನು ವೆಂಕಟೇಶ್ವರನ ಪಕ್ಕ ಕೂರಬೇಕು ಎಂದಿದ್ದಾರೆ. ಇದಕ್ಕೆ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಮಹಿಳೆ ಅರ್ಚಕರ ಮುಖಕ್ಕೆ ಉಗಿದು ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣಪ್ಪ ಅಲ್ಲಿಗೆ ಬಂದು ಪ್ರಶ್ನೆ ಮಾಡಿದಾಗ, ಅವರ ಮುಖಕ್ಕೂ ಆ ಮಹಿಳೆ ಕ್ಯಾಕರಿಸಿ ಉಗಿದಿದ್ದರು. ಇದರಿಂದ ಕೋಪಗೊಂಡ ಮುನಿಕೃಷ್ಣಪ್ಪ ಆ ಮಹಿಳೆಯ ಮೇಲೆ ಹಲ್ಲೆ ಮಾಡಿ ದೇವಸ್ಥಾನದಿಂದ ಹೊರಗೆ ಹಾಕಿದರು ಎನ್ನಲಾಗಿದೆ.

click me!