
ಕಾಸರಗೋಡು: ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕನೋರ್ವ ಪಕ್ಕದ ಅಂಗಡಿಯವರ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕಾಸರಗೋಡಿನ ಬೆದಡುಕದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 32 ವರ್ಷದ ರಮಿತಾ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ರಾಮಾಮೃತಮ್ ಪರಾರಿಯಾಗಲು ಯತ್ನಿಸಿದ್ದು, ಆದರೆ ಸ್ಥಳೀಯ ನಿವಾಸಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಅಂಗಡಿಯವರಾಗಿದ್ದಾರೆ. ಮಹಿಳೆ ರಮಿತಾ ದಿನಸಿ ಅಂಗಡಿ ಇಟ್ಟುಕೊಂಡಿದ್ದರೆ, ಆರೋಪಿ ಸಮೀಪದಲ್ಲೇ ಫರ್ನಿಚರ್ ಅಂಗಡಿ ಹಾಕಿಕೊಂಡಿದ್ದ.
ಕುಡಿತದ ಚಟಕ್ಕೆ ದಾಸನಾಗಿದ್ದ ರಾಮಾಮೃತಮ್ ಹಗಲಿನಲ್ಲಿಯೇ ಕುಡಿದು ಬಂದು ಪಕ್ಕದ ಅಂಗಡಿಯವರಾದ ರಮಿತಾ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ರಮಿತಾ ಈ ವಿಚಾರವನ್ನು ಕಟ್ಟಡದ ಮಾಲೀಕರಿಗೆ ತಿಳಿಸಿದ್ದರು. ಹೀಗಾಗಿ ಕಟ್ಟಡ ಮಾಲೀಕರು ರಾಮಾಮೃತಮ್ಗೆ ತಮ್ಮ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸಿ ತಮ್ಮ ಕಟ್ಟಡ ಖಾಲಿ ಮಾಡುವಂತೆ ಸೂಚಿಸಿದ್ದರು. ಇದರಿಂದ ಕುಪಿತಗೊಂಡ ರಾಮಾಮೃತಮ್ ಕುಡಿದು ಬಂದು ರಮಿತಾ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಏಪ್ರಿಲ್ 8 ರಂದು ಮಧ್ಯಾಹ್ನ 3.30ರ ವೇಳೆಗೆ ರಮಿತಾ ಅಂಗಡಿಯಲ್ಲಿ ಇದ್ದ ವೇಳೆ ಅಲ್ಲಿಗೆ ಥಿನ್ನರ್ ಹಾಗೂ ಬೆಂಕಿ ಕಡ್ಡಿ ಪೆಟ್ಟಿಗೆಯೊಂದಿಗೆ ಬಂದ ಆರೋಪಿ ಆಕೆ ಏನಾಗುತ್ತಿದೆ ಎಂದು ಊಹಿಸುವ ಮೊದಲೇ ಆಕೆಯ ಮೇಲೆ ಥಿನ್ನರ್ ಸುರಿದು ಬೆಂಕಿ ಕಡ್ಡಿ ಗಿರಿ ಎಸೆದು ಅಲ್ಲಿಂದ ಓಡಿದ್ದಾನೆ.
ಅಲ್ಲೇ ಇದ್ದ ರಮಿತಾ ಅವರ ನೆರೆಮನೆಯವರಾದ ಸಜಿತಾ ಪುರುಷೋತಮ್ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳು ಕೂಡಲೇ ರಮಿತಾ ಸಹಾಯಕ್ಕೆ ಧಾವಿಸಿ ಬಂದಿದ್ದು, ಬೆಂಕಿ ನಂದಿಸಿ ಸಮೀಪದ ಕಾಂಞಂಗಾಡ್ನ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಲ್ಲಿಂದ ಸೀದಾ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದೊದ್ದಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಮಿತಾ ಇಂದು ಸಾವನ್ನಪ್ಪಿದ್ದಾರೆ.
ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದರಿಂದಾಗಿ ರಮಿತಾ ಅವರಿಗೆ ಶೇಕಡಾ 50ರಷ್ಟು ಸುಟ್ಟಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊಲೆ ಆರೋಪಿ ರಾಮಾಮೃತಮ್ ಮೂಲತಃ ತಮಿಳುನಾಡಿನವನಾಗಿದ್ದು, ಘಟನೆಯ ನಂತರ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋಪದ ಕೈಗೆ ಬುದ್ಧಿಕೊಟ್ಟ ಗಂಡ: 8 ತಿಂಗಳ ಗರ್ಭಿಣಿ ಹೆಂಡ್ತಿನ ಕೊಂದೇ ಬಿಟ್ಟ
ವಿಶಾಖಪಟ್ಟಣ: ಕೆಲವೊಮ್ಮ ಕೋಪ ಎಂತಹ ದೊಡ್ಡ ಅನಾಹುತವನ್ನು ತಂದಿಡುತ್ತದೆ ಎಂದು ಊಹಿಸಲೂ ಕೂಡ ಆಗದು. ಅದೇ ರೀತಿ ಇಲ್ಲೊಂದು ಕಡೆ ಗಂಡ ಹೆಂಡ್ತಿ ನಡುವಿನ ಕದನ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ನೇನು ಒಂದು ತಿಂಗಳು ಕಳೆದರೆ ಅವರ ಪ್ರೀತಿಯ ಸಂಕೇತವಾಗಿ ಮುದ್ದು ಮಗುವೊಂದು ಮಡಿಲಲ್ಲಿರುತ್ತಿತ್ತು. ಆದರೆ ಗಂಡ ಹೆಂಡತಿ ನಡುವಿನ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನ ಕೈಗೆ ಬುದ್ದಿಕೊಟ್ಟ ಗಂಡ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ. ಇದರಿಂದ ಜಗತ್ತು ನೋಡದ ಕಂದನೂ ತಾಯಿ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ದುರಂತ ನಡೆದಿದೆ. 8 ತಿಂಗಳ ಗರ್ಭಿಣಿ ಅನುಷಾ ಹಾಗೂ ಪತಿ ಜ್ಞಾನೇಶ್ವರ್ ಮಧ್ಯೆ ನಿನ್ನೆ ಮುಂಜಾನೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಗಂಡ ಹೆಂಡ್ತಿ ಗರ್ಭಿಣಿ ಎಂಬುದನ್ನೂ ಮರೆತು ಕತ್ತು ಹಿಸುಕಿದ್ದಾನೆ. ಇದರಿಂದ ಕೂಡಲೇ ಆಕೆ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ. ಕೂಡಲೇ ಭಯಬೀತನಾದ ಆತ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಆರೋಪಿ ಗಂಡ ಸೀದಾ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಒಂದು ಕ್ಷಣದ ಸಿಟ್ಟಿಗೆ ಆತ ದೊಡ್ಡ ಬೆಲೆಯನ್ನೇ ತೆರಬೇಕಾಗಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ