Chikkaballapur: ಓಲೆ ಕದ್ದನೆಂದು ಕಂಬಕ್ಕೆ ಕಟ್ಟಿ ದಲಿತ ಬಾಲಕನಿಗೆ ಥಳಿತ

By Govindaraj SFirst Published Oct 1, 2022, 8:16 AM IST
Highlights

ಇತ್ತೀಚೆಗೆ ಅಷ್ಟೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರನಹಳ್ಳಿಯಲ್ಲಿ ದೇವರ ಮೆರವಣಿಗೆ ವೇಳೆ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ 60 ಸಾವಿರ ರು, ದಂಡದ ಜೊತೆಗೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಚಿಂತಾಮಣಿಯಲ್ಲಿ ಕಳ್ಳತನ ಆರೋಪ ಹೊರೆಸಿ ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ (ಅ.01): ಇತ್ತೀಚೆಗೆ ಅಷ್ಟೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರನಹಳ್ಳಿಯಲ್ಲಿ ದೇವರ ಮೆರವಣಿಗೆ ವೇಳೆ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ 60 ಸಾವಿರ ರು, ದಂಡದ ಜೊತೆಗೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಚಿಂತಾಮಣಿಯಲ್ಲಿ ಕಳ್ಳತನ ಆರೋಪ ಹೊರೆಸಿ ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಬಾಜಿ ದುರ್ಗ ಹೋಬಳಿಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕನನ್ನು ಗ್ರಾಮದ ಆನಂದ ಎಂಬುವರ ಪುತ್ರ ಯಶ್ವಂತ(16) ಎಂದು ಗುರುತಿಸಲಾಗಿದೆ.

ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದ ಯುವಕ ಅನುಮಾನಾಸ್ಪದ ಸಾವು!

ಗ್ರಾಮದಲ್ಲಿ ಮಕ್ಕಳೊಂದಿಗೆ ಯಶವಂತ್‌ ಆಟವಾಡುತ್ತಿರುವಾಗ ನಾಗರಾಜ್‌ ಎಂಬುವರ ಪುತ್ರಿಯ ಓಲೆಯನ್ನು ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನನ್ನು ಗ್ರಾಮದ ಹಾಲಿನ ಡೇರಿ ಬಳಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮದ ಸವರ್ಣಿಯರಾದ ನಾರಾಯಣಸ್ವಾಮಿ, ನವೀನ, ನಂಜೆಗೌಡ, ಹರೀಶ್‌, ನಾಗರಾಜ್‌, ಅಂಬಿಕಾ, ದೊಡ್ಡೇಗೌಡ ಸೇರಿದಂತೆ ಹಲವರು ಹಿಗ್ಗಾಮಗ್ಗ ಥಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆತನ ತಾಯಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ: ವಿಷಯ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಬಾಲಕ ಹಾಗು ಆತನ ತಾಯಿಯ ಹೇಳಿಕೆ ಪಡೆದರು. ಈ ವೇಳೆ ಬಾಲಕನ ತಾಯಿ ನೀಡಿದ ಹೇಳಿಕೆಯಲ್ಲಿ, ತನ್ನ ಮಗ ಆಟವಾಡಿಕೊಳ್ಳುವಾಗ ಓಲೆ ಕದ್ದಿದ್ದಾನೆಂದು ಆತನನ್ನು ರಾತ್ರಿ ಕರೆದುಕೊಂಡು ಹೋಗಿ ಡೇರಿ ಮುಂದೆ ಕಂಬಕ್ಕೆ ಕಟ್ಟಾಕಿ ಹಲ್ಲೆ ನಡೆಸಿದ್ದಾರೆ. ನೀವು ಊರಿನಿಂದ ಮನೆ ಖಾಲಿ ಮಾಡಬೇಕೆಂದು ಹೇಳುತ್ತಿದ್ದಾರೆ. ನಿಮ್ಮ ಜಾತಿಯವರು ನಮ್ಮೂರಲ್ಲಿ ಇರುವುದು ಬೇಡ ಎನ್ನುತ್ತಿದ್ದಾರೆಂದು ವಿವರಿಸಿದ್ದಾರೆ.

ಕ್ರಮಕ್ಕೆ ಮಾದಿಗ ದಂಡೋರ ಆಗ್ರಹ: ಆಸ್ಪತ್ರೆಗೆ ತೆರಳಿ ತಾಯಿ, ಮಗನಿಗೆ ಧೈರ್ಯ ತುಂಬಿ ಮಾತನಾಡಿರುವ ಮಾದಿಗ ದಂಡೋರ ಸಂಘಟನೆಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಂಗಮಶಿಗೇನಹಳ್ಳಿ ದೇವರಾಜ್‌, ಕಳ್ಳತನ ಆರೋಪ ಮಾಡಿ ಕಂಬಕ್ಕೆ ಕಟ್ಟಿಥಳಿಸಿ ಕಾನೂನು ತಮ್ಮ ಕೈಗೆ ತೆಗೆದಕೊಂಡಿರುವ ಆರೋಪಿಗಳ ಮೇಲೆ ಕೂಡಲೇ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

10 ಮಂದಿ ವಿರುದ್ದ ಎಫ್‌ಐಆರ್‌: ಪ್ರಕರಣಧ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಮುಖ ಆರೋಪಿ ನಾರಾಯಣಸ್ವಾಮಿ ಬಿನ್‌ ವೆಂಕಟರವಣಪ್ಪ ಸೇರಿ ನವೀನ್‌, ಹರೀಶ್‌, ದೊಡ್ಡೇಗೌಡ, ಮೀನು ದಾಸಪ್ಪ, ಅಂಬಿಕಾ, ಡಿಶ್‌ ಮಂಜು, ನಾರಾಯಣ, ನಾಗರಾಜ್‌, ನಾರಾಯಣಸ್ವಾಮಿ ಬಿನ್‌ ಶ್ಯಾಮಣ್ಣ ಎಂಬುವರ ವಿರುದ್ದ ಎಫ್‌ಐಆರ್‌ ದಾಖಲಾಗಿದ್ದು, ಉಳಿದವರ ಬಂಧಿಸಲು ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ಕುಶಾಲ್‌ ಚೌಕ್ಸೆ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಕೆವೈಸಿ ಅಪ್‌ಡೇಟ್‌ ಹೆಸರಿನಲ್ಲಿ ವೃದ್ಧನ 2.21 ಲಕ್ಷ ಎಗರಿಸಿದ ಸೈಬರ್‌ ಕಳ್ಳರು

3 ಮಂದಿ ಅರೆಸ್ಟ್‌: ದಲಿತ ಬಾಲಕನ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದರೂ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ವಹಿಸುತ್ತೇವೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ಕನ್ನಡಪ್ರಭಗೆ ತಿಳಿಸಿದರು.

click me!