* ಮೋಜಿನ ಜೀವನಕ್ಕಾಗಿ ಅಡ್ಡದಾರಿ
* ಆಂಧ್ರದಿಂದ ಬಂದು ನಗರದಲ್ಲಿ ಬುಲೆಟ್ ಕಳ್ಳತನ
* 68 ಲಕ್ಷ ಮೌಲ್ಯದ ಬೈಕ್ಗಳ ವಶ
ಬೆಂಗಳೂರು(ಏ.06): ಮೋಜಿನ ಜೀವನಕ್ಕಾಗಿ ಯೂಟ್ಯೂಬ್(Youtube) ನೋಡಿ ಬೈಕ್ ಕಳ್ಳತನಕ್ಕಿಳಿದಿದ್ದ(Bike Theft) ಏಳು ಮಂದಿ ಪದವೀಧರರ ತಂಡವೊಂದು ಬನಶಂಕರಿ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದೆ.
ಆಂಧ್ರಪ್ರದೇಶದಲ್ಲಿ(Andhra Pradesh) ಚಿತ್ತೂರು ಜಿಲ್ಲೆಯ ವಿಜಯಬಂಡಿ, ಹೇಮಂತ, ಗುಣಶೇಖರ ರೆಡ್ಡಿ, ಭಾನುಮೂರ್ತಿ, ಜಿ.ಕಾರ್ತಿಕ ಕುಮಾರ್, ಕಿರಣ್ ಕುಮಾರ್ ಹಾಗೂ ಪುರುಷೋತ್ತಮ ನಾಯ್ಡು ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 68 ಲಕ್ಷ ಮೌಲ್ಯದ 30 ಬೈಕ್ ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ತ್ಯಾಗರಾಜ ನಗರದ ನಿವಾಸಿ ರಾಜೇಶ್ ಅವರ ರಾಯಲ್ ಎನ್ಫೀಲ್ಡ್ ಫೆ.26ರಂದು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳು ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru Crime: ಬೈಕ್ ಟಚ್ ಆಗಿದ್ದಕ್ಕೆ ಯುವಕನ ಕೊಂದವರು ಗಂಟೆಯಲ್ಲೇ ಬಂಧನ
ಮೋಜು ಮಸ್ತಿಗೆ ಬೈಕ್ ಕಳ್ಳತನ:
ಹಲವು ವರ್ಷಗಳಿಂದ ಏಳು ಮಂದಿ ಆತ್ಮೀಯ ಸ್ನೇಹಿತರಾಗಿದ್ದು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಎಂಬಿಎ ವ್ಯಾಸಂಗ ಮಾಡಿದ್ದರು. ಓದು ಮುಗಿಸಿದ ಬಳಿಕ ಮೋಜಿನ ಜೀವನದತ್ತ ಆಕರ್ಷಿತರಾದ ಗೆಳೆಯರು, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ಮಾರ್ಗ ತುಳಿದಿದ್ದಾರೆ. ಈ ಆರೋಪಿಗಳ ಪೈಕಿ ಹೇಮಂತ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಆತನಿಗೆ ಬೈಕ್ಗಳ ಕಾರ್ಯನಿರ್ವಹಣೆ ಬಗ್ಗೆ ಜ್ಞಾನವಿತ್ತು. ಈ ಬುದ್ಧಿವಂತಿಕೆಯನ್ನು ಆತ ಕಳ್ಳತನಕ್ಕೆ(Theft) ವಿನಿಯೋಗಿಸಿದ್ದಾನೆ. ಯೂಟ್ಯೂಬ್ ವಿಡಿಯೋಗಳಿಂದ ಬೈಕ್ಗಳ ಲಾಕ್ ಮುರಿಯುವುದನ್ನು ಕಲಿತರು. ಮೊದಲೇ ನಿರ್ಧರಿಸಿ ಬೆಂಗಳೂರಿಗೆ ತಿಂಗಳಿಗೆ ಎರಡ್ಮೂರು ಬಾರಿ ಬರುತ್ತಿದ್ದ ಇವರು, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸುತ್ತಿದ್ದ ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು. ನಂತರ ಲಾಂಗ್ ಡ್ರೈವ್ ತೆರಳುವ ಪ್ರಯಾಣಿಕರ ಸೋಗಿನಲ್ಲಿ ಕದ್ದ ಬೈಕ್ಗಳನ್ನು ಓಡಿಸಿಕೊಂಡು ಆಂಧ್ರಪ್ರದೇಶ ಸೇರುತ್ತಿದ್ದರು.
ಮೂರು ವರ್ಷಗಳಿಂದ ಕಳ್ಳತನದಲ್ಲಿ ನಿರತರಾಗಿದ್ದ ಖದೀಮರು, ಇದೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಇವರ ಬಂಧನದಿಂದ ಕೆ.ಆರ್.ಪುರ, ಬನಶಂಕರಿ, ಸುಬ್ರಹ್ಮಣ್ಯಪುರ, ಸಿ.ಕೆ.ಅಚ್ಚುಕಟ್ಟು, ಜಯನಗರ, ಕೆ.ಎಸ್. ಲೇಔಟ್, ಜೆ.ಪಿ.ನಗರ, ಬೇಗೂರು, ಬಾಣಸವಾಡಿ, ಮಾರತ್ತಹಳ್ಳಿ, ಹೊಸಕೋಟೆ, ಜೆ.ಜೆ.ನಗರ ಹಾಗೂ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 27 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ 27 ರಾಯಲ್ ಎನ್ಫೀಲ್ಡ್ಗಳು, 1 ಬಜಾಜ್ ಪಲ್ಸರ್ ಸೇರಿ .68 ಲಕ್ಷ ಮೌಲ್ಯದ 30 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Hubballi Crime: ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ಪಡೆದು ವಂಚನೆ: ಇಬ್ಬರ ಬಂಧನ
ಸಿಸಿಟಿವಿ ಕ್ಯಾಮೆರಾ ನೀಡಿದ ಸುಳಿವು
ತ್ಯಾಗರಾಜ ನಗರದ ರಾಜೇಶ್ ಅವರು ರಾಯಲ್ ಎನ್ಫೀಲ್ಡ್ ಕಳ್ಳತನ ಕೃತ್ಯವು ಸಿಸಿಟಿವಿ(CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಮೂರು ಮೊಬೈಲ್ ಕರೆಗಳು ಕೃತ್ಯ ನಡೆದ ಬಳಿಕ ಆಂಧ್ರಪ್ರದೇಶದಲ್ಲಿ ಸಂಪರ್ಕದಲ್ಲಿರುವ ಸಂಗತಿ ಗೊತ್ತಾಯಿತು. ಈ ಮಾಹಿತಿ ಆಧರಿಸಿ ಚೋರರ ಬೆನ್ನುಹತ್ತಿದ್ದಾಗ ಕೊನೆಗೆ ಸಿಕ್ಕಿಬಿದ್ದರು. ಈ ಆರೋಪಿಗಳು ಪ್ರತಿ ಬಾರಿ ಮೂರು ಮಂದಿ ತಂಡಗಳಾಗಿ ನಗರಕ್ಕೆ ಬಂದು ವಾಹನ ಕದ್ದು ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ವಿಶ್ರಾಂತಿ ಬಾಡಿಗೆ ಮನೆ ಮಾಡಿದ್ದರು
ಬೈಕ್ ಕಳ್ಳತನಕ್ಕೆ ಆಂಧ್ರಪ್ರದೇಶದಿಂದ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಕೃತ್ಯ ಎಸಗುವ ಮುನ್ನ ವಿಶ್ರಾಂತಿ ಪಡೆಯುವ ಸಲುವಾಗಿ ಬಿಟಿಎಂ ಲೇಔಟ್ನಲ್ಲಿ ಮನೆ ಬಾಡಿಗೆ ಪಡೆದಿದ್ದರು. ಸಂಜೆ ಆಂಧ್ರದಿಂದ ಬಂದು ತಡ ರಾತ್ರಿವರೆಗೆ ಆ ಮನೆಯಲ್ಲಿ ವಿಶ್ರಾಂತಿ ಪಡೆದು ನಂತರ ಬೈಕ್ ಕಳ್ಳತನ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.