
ಗುಂಡ್ಲುಪೇಟೆ(ಸೆ.29): ತಿಂಗಳ ಹಿಂದೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಹಾಡ ಹಗಲೇ ಲಕ್ಷಾಂತರ ಹಣ ದೋಚಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದರೋಡೆ ಪ್ರಕರಣ ತಾಲೂಕಿನ ಅಗತಗೌಡನಹಳ್ಳಿ-ಬೆಂಡಗಳ್ಳಿ ಗೇಟ್ ಮದ್ಯೆ ನಡೆದಿದೆ. ಮತ್ತೊಬ್ಬ ಕೇರಳದ ಚಿನ್ನದ ವ್ಯಾಪಾರಿಯ 44 ಲಕ್ಷ ರು.ದರೋಡೆಯಾಗಿರುವುದಾಗಿ ವರದಿಯಾಗಿದೆ.
ಬುಧವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಮೈಸೂರು ಕಡೆಯಿಂದ ಕೇರಳ ಚಿನ್ನದ ವ್ಯಾಪಾರಿ ರಹೀಂ ತಮ್ಮ ಸ್ನೇಹಿತ ನೌಶಾದ್ ಜೊತೆ ಗುಂಡ್ಲುಪೇಟೆ ಕಡೆಗೆ ಕರ್ನಾಟಕ ನೋಂದಣಿಯ ಈಟಿಯಾಸ್ ಕಾರಲ್ಲಿ ಬರುತ್ತಿದ್ದಾಗ ಕೇರಳ ಮೂಲದ 10 ಮಂದಿ ಇನ್ನೋವಾ, ವ್ಯಾಗನರ್ ಹಾಗೂ ಅಶೋಕ್ ಲೈಲಾಂಡ್ ಲಾರಿಯಲ್ಲಿ ಬಂದು ಅಡ್ಡಗಟ್ಟಿದ್ದಾರೆ.
ಮನೆಮಂದಿಯನ್ನ ಕಟ್ಟಿ ಹಾಕಿ ಸಿನಿಮಾ ಸ್ಟೈಲ್ನಲ್ಲಿ ಕೋಟ್ಯಂತರ ರೂ.ದರೋಡೆ!
ಈಟಿಯಾಸ್ ಕಾರಲ್ಲಿದ್ದ ಚಿನ್ನದ ವ್ಯಾಪಾರಿ ರಹೀಂ ಎಳೆದುಕೊಳ್ಳುವಾಗ ಮತ್ತೊಬ್ಬ ನೌಶಾದ್ ಜಮೀನಿನತ್ತ ಓಡಿ ಹೋಗಿದ್ದಾರೆ. ಆಗ ಈಟಿಯಾಸ್ ಕಾರನ್ನು ದರೋಡೆಕೋರರು ಅಗತಗೌಡನಹಳ್ಳಿ ಬಳಿ ಕರಿ ಕಲ್ಲು ಕ್ವಾರಿ ಬಳಿ ನಿಲ್ಲಿಸಿ, ಕಾರಲ್ಲಿದ್ದ ಹಣ ತೆಗೆದುಕೊಂಡು ರಹೀಂನನ್ನು ಇನ್ನೋವಾ ಕಾರಲ್ಲಿ ಕೂರಿಸಿಕೊಂಡು ಮೈಸೂರು ಬಳಿಯ ಕಡಕೊಳ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ರಹೀಂ ನೀಡಿದ ದೂರಿನ ಪ್ರಕಾರ, ರಹೀಂ ಮೈಸೂರಲ್ಲಿ ಚಿನ್ನ ಮಾರಾಟ ಮಾಡಿದ ಹಣವನ್ನು ತೆಗೆದುಕೊಂಡು ಕೇರಳಕ್ಕೆ ಹೋಗುವಾಗ ಚಿನ್ನ ಮಾರಿದ ಹಣ 44 ಲಕ್ಷ ರು. ದರೋಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇಗೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಸ್ಪಿ, ಎಎಸ್ಪಿ ಭೇಟಿ
ದರೋಡೆ ಪ್ರಕರಣ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಹೆಚ್ಚುವರಿ ಜಿಲ್ಳಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬೇಗೂರು ಪೊಲೀಸ್ ಠಾಣೆಯಲ್ಲಿ ಭೇಟಿ ನೀಡಿ ಸ್ಥಳೀಯ ಪೊಲೀಸರೊಂದಿಗೆ ಕೆಲ ತಾಸು ಮಾತುಕತೆ ನಡೆಸಿದರು. ಈ ಸಮಯದಲ್ಲಿ ಡಿಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ವಿ.ಸಿ.ವನರಾಜು, ಸಬ್ ಇನ್ಸ್ಪೆಕ್ಟರ್ ಚರಣ್ ಗೌಡ ಇದ್ದರು.
ಬೇಗೂರು ಬಳಿ ಮತ್ತೆ ದರೋಡೆ: ನಾಗರಿಕರಲ್ಲಿ ಆತಂಕ
ಕಳೆದ ತಿಂಗಳು ಹಾಡ ಹಗಲೇ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ ಸುಲಿಗೆ ಮಾಡಿದ ಘಟನೆ ಮಾಸುವ ಮುನ್ನವೇ ಬೇಗೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಮತ್ತೊಂದು ದರೋಡೆ ನಡೆದಿರುವುದು ನಾಗರಿಕರಲ್ಲಿ ಆತಂಕ ತಂದಿದೆ.
ಕಳೆದ ಆ.11 ರಂದು ಬೇಗೂರು ಗ್ರಾಮ (ಹೋಬಳಿ ಕೇಂದ್ರ)ದ ಅಂಚೆ ಕಚೇರಿ ಮುಂದೆ ಎರಡು ಕಾರಲ್ಲಿ ಬಂದ ದರೋಡೆಕೋರರು ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ 40 ಲಕ್ಷ ರು. ದರೋಡೆ ಮಾಡಿದ್ದರು.
ಕಳೆದ ತಿಂಗಳ ದರೋಡೆ ಪ್ರಕರಣದಲ್ಲಿ 9 ಮಂದಿ ಬಂಧಿಸಿ ವಿಚಾರಣೆ ನಡೆಸಿದರೂ ಹಣ ಎತ್ತಿಕೊಂಡು ಪರಾರಿಯಾದ ದರೋಡೆ ಪ್ರಕರಣದ ಪ್ರಮುಖ ಆರೋಪಿ ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ. ಈಗ ಮತ್ತೊಂದು ದರೋಡೆ ಪ್ರಕರಣ ಬುಧವಾರ ರಾತ್ರಿ ನಡೆದಿದ್ದು ಕೇರಳದ ಚಿನ್ನದ ವ್ಯಾಪಾರಿ ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಬೆಂಡಗಳ್ಳಿ ಗೇಟ್ ಬಳಿ ದರೋಡೆ ನಡೆದಿದೆ. ಬೇಗೂರು ಗ್ರಾಮದಲ್ಲಿ ನಡೆದ ಮಾದರಿಯಲ್ಲಿಯೇ ಅಗತಗೌಡನಹಳ್ಳಿ-ಬೆಂಡಗಳ್ಳಿ ಗೇಟ್ ಮದ್ಯೆ ದರೋಡೆ ನಡೆಸಿ ಕಾರನ್ನು ಗರಗನಹಳ್ಳಿ ಗೇಟ್ ಬಳಿ ಕ್ರಷರ್ ತೆರಳುವ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾರೆ. ಬೇಗೂರು ಗ್ರಾಮದಲ್ಲಿ ಆ.11 ರಂದು ನಡೆದ ದರೋಡೆ ಪ್ರಕರಣ ಬೆಳಗಿನ ವೇಳೆಯಲ್ಲಿ ನಡೆದರೆ ಬೆಂಡಗಳ್ಳಿ ಗೇಟ್ ಬಳಿ ದರೋಡೆ ಪ್ರಕರಣ ರಾತ್ರಿ ನಡೆದಿದೆ.
ಕಳೆದ ತಿಂಗಳ ದರೋಡೆಗೂ ಬುಧವಾರ ರಾತ್ರಿ ನಡೆದ ದರೋಡೆ ಪ್ರಕರಣ ನಡೆದಿವೆ. ಇದು ಬೇಗೂರು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ಶಿವಮೊಗ್ಗ: ಒಂಟಿ ಮನೆ ದರೋಡೆಗೆ ಯತ್ನ, ಪಶ್ಚಿಮ ಬಂಗಾಳ ವ್ಯಕ್ತಿ ಬಂಧನ
ಮೈಸೂರು-ಊಟಿ ಹೆದ್ದಾರಿಯಲ್ಲಿ ದರೋಡೆ ಪ್ರಕರಣ ಒಂದೂವರೆ ತಿಂಗಳಲ್ಲಿ ಎರಡು ಪ್ರಕರಣ ನಡೆದಿವೆ ಎಂದರೆ ಸ್ಥಳೀಯ ಪೊಲೀಸರು ಹೆದ್ದಾರಿ ಗಸ್ತು ಮಾಡುತ್ತಿಲ್ಲವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಅಲ್ಲದೆ ಎರಡು ದರೋಡೆ ಪ್ರಕರಣಗಳು ನಡೆದಿವೆ ಮೊದಲ ದರೋಡೆ ಪ್ರಕರಣದ ರೂವಾರಿಯಾದ ದರೋಡೆ ಪ್ರಕರಣದ ಆರೋಪಿ ಇಂದಿನ ತನಕ ಬಂಧನವಾಗದಿರುವುದು ಸಹ ಮತ್ತೊಂದು ದರೋಡೆಗೆ ಕಾರಣವಾಯ್ತೆ? ಎಂಬ ಪ್ರಶ್ನೆ ಮೂಡಿಸಿದೆ.
ಬೇಗೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ತಾಲೂಕಿನ ಸೋಮಹಳ್ಳಿ ಗ್ರಾಮಸ್ಥರೇ ಐದು ಮಂದಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ಬಳಿಕ ನಾಲ್ಕು ಮಂದಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. 44 ಲಕ್ಷ ರು.ನೊಂದಿಗೆ ಪರಾರಿಯಾಗಿರುವ ಪ್ರಮಖ ಆರೋಪಿ ಬಂಧಿಸಲು ಬೇಗೂರು ಪೊಲೀಸರಿಂದ ಸಾದ್ಯವಾಗಿಲ್ಲ. ಜೊತೆಗೆ ಹಣವು ಸಿಕ್ಕಿಲ್ಲ. ಇದೀಗ ಮತ್ತೆ ದರೋಡೆ ಆಗಿದೆ ಹಳೆಯ ಮತ್ತು ಬುಧವಾರ ರಾತ್ರಿಯ ದರೋಡೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ