Bengaluru: ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಲ್ಲಿ 4 ಲಕ್ಷ ಎಗರಿಸಿದ ವಂಚಕ

By Govindaraj SFirst Published Oct 7, 2022, 10:02 AM IST
Highlights

ಬ್ಯಾಂಕ್‌ ಪ್ರತಿನಿಧಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ಸೈಬರ್‌ ವಂಚಕ, ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಮಾಡುವುದಾಗಿ ಒನ್‌ ಟೈಂ ಪಾಸ್‌ ವರ್ಡ್‌(ಓಟಿಪಿ) ಪಡೆದು ಬ್ಯಾಂಕ್‌ ಖಾತೆ ಹಾಗೂ ಕ್ರೆಡಿಟ್‌ ಕಾರ್ಡ್‌ನಿಂದ ಒಟ್ಟು 3.97 ಲಕ್ಷ ಎಗರಿಸಿರುವ ಘಟನೆ ನಡೆದಿದೆ. 

ಬೆಂಗಳೂರು (ಅ.07): ಬ್ಯಾಂಕ್‌ ಪ್ರತಿನಿಧಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ಸೈಬರ್‌ ವಂಚಕ, ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಮಾಡುವುದಾಗಿ ಒನ್‌ ಟೈಂ ಪಾಸ್‌ ವರ್ಡ್‌(ಓಟಿಪಿ) ಪಡೆದು ಬ್ಯಾಂಕ್‌ ಖಾತೆ ಹಾಗೂ ಕ್ರೆಡಿಟ್‌ ಕಾರ್ಡ್‌ನಿಂದ ಒಟ್ಟು 3.97 ಲಕ್ಷ ಎಗರಿಸಿರುವ ಘಟನೆ ನಡೆದಿದೆ. ಕುಮಾರ ಕೃಪಾ ರಸ್ತೆಯ ಛಾಬ್ರಿಯಾ ಲೇಔಟ್‌ ನಿವಾಸಿ ಕೆ.ದಿನೇಶ್‌ ಶೆಟ್ಟಿ ಹಣ ಕಳೆದುಕೊಂಡವರು. 

ಇವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ಸೈಬರ್‌ ವಂಚಕನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ಅಪರಿಚಿತ ವ್ಯಕ್ತಿ, ದೂರುದಾರ ಕೆ.ದಿನೇಶ್‌ ಶೆಟ್ಟಿಅವರಿಗೆ ಕರೆ ಮಾಡಿ, ‘ನಾನು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಕರೆ ಮಾಡಿ ಮಾತನಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್‌ ಖಾತೆಗೆ ಪ್ಯಾನ್‌ ಕಾರ್ಡ್‌ ಆಪ್‌ಡೇಟ್‌ ಮಾಡಬೇಕು. ಇಲ್ಲವಾದರೆ, ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಲಿದೆ’ ಎಂದಿದ್ದಾನೆ. ಬಳಿಕ ದಿನೇಶ್‌ ಶೆಟ್ಟಿಅವರ ಮೊಬೈಲ್‌ಗೆ ಎನಿ ಡೆಸ್ಕ್‌ ಆಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಹೇಳಿದ್ದಾನೆ.

Belagavi: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಈತನ ಮಾತು ನಂಬಿದ ದಿನೇಶ್‌, ಎನಿ ಡೆಸ್ಕ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಬಳಿಕ ದಿನೇಶ್‌ ಅವರಿಂದ ಓಟಿಪಿ ಸಂಖ್ಯೆ ಪಡೆದು ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ 2 ಲಕ್ಷ, ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ನಿಂದ 1 ಲಕ್ಷ ಸೇರಿದಂತೆ ವಿವಿಧ ಹಂತಗಳಲ್ಲಿ ಒಟ್ಟು 3.97 ಲಕ್ಷ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ದಿನೇಶ್‌ ಅವರ ಮೊಬೈಲ್‌ಗೆ ಹಣ ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ. ಕೂಡಲೇ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದ್ದು, ಆತ ಕರೆ ಸ್ವೀಕರಿಸಿಲ್ಲ. ಬಳಿಕ ಸೈಬರ್‌ ವಂಚಕನ ಜಾಲಕ್ಕೆ ಸಿಲುಕಿರುವುದು ದಿನೇಶ್‌ ಅವರಿಗೆ ಅರಿವಾಗಿ ಸೈಬರ್‌ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ.

ಮಹಿಳೆಯ ಸರ ಎಗರಿಸಿದ ಚೋರರು: ಮಹಿಳೆಯೊಬ್ಬರು ರಸ್ತೆ ಬದಿ ಹಸುಗಳಿಗೆ ಬಾಳೆ ಹಣ್ಣು ತಿನ್ನಿಸುವಾಗ ಹಿಂಬದಿಯಿಂದ ಬಂದಿರುವ ದುಷ್ಕರ್ಮಿಗಳು, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಗರಾಜ ನಗರದ 1ನೇ ಬ್ಲಾಕ್‌ ಎರಡನೇ ಮುಖ್ಯರಸ್ತೆ ನಿವಾಸಿ ಎಸ್‌.ಜಿ.ಚಂದ್ರಿಕಾ (60) ಸುಮಾರು .1.60 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳೆದುಕೊಂಡವರು. ಅ.4ರಂದು ಮುಂಜಾನೆ 5.20ರ ಸುಮಾರಿಗೆ ಮನೆಯ ಪಕ್ಕದ ರಸ್ತೆಯಲ್ಲಿರುವ ಕೆಇಬಿ ಕ್ವಾಟ್ರಸ್‌ ಬಳಿಯ ಪೋಸ್ಟ್‌ ಆಫೀಸ್‌ ಎದುರು ಹಸುಗಳಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದರು. 

ಕೋಲಾರ: ದಯವಿಟ್ಟು ಯಾರು ಲವ್ ಮಾಡಬೇಡಿ ಅಂತ ಸ್ಟೇಟಸ್ ಹಾಕಿ ಆತ್ಮಹತ್ಯೆ

ಈ ವೇಳೆ ಇಬ್ಬರು ದುಷ್ಕರ್ಮಿಗಳು ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಹಿಂಬದಿ ಕುಳಿತಿದ್ದ ದುಷ್ಕರ್ಮಿ ಏಕಾಏಕಿ ಚಂದ್ರಿಕಾ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಂದ್ರಿಕಾ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ದುಷ್ಕರ್ಮಿ ಜೋರಾಗಿ ಚಂದ್ರಿಕಾ ಅವರನ್ನು ತಳ್ಳಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ತಳ್ಳಿದ ರಭಸಕ್ಕೆ ರಸ್ತೆಗೆ ಬಿದ್ದ ಚಂದ್ರಿಕಾ ಅವರ ತುಟಿಗೆ ಪೆಟ್ಟು ಬಿದ್ದಿದೆ. ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಪರಿಣಾಮ ತುಂಡಾದ ಸರ ಹಾಗೂ ಮಾಂಗಲ್ಯ ಮಾತ್ರ ಚಂದ್ರಿಕಾ ಅವರ ಬಳಿ ಉಳಿದಿದೆ.

click me!