Udupi: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಭೀಕರ ಅಪಘಾತ: 3 ಮಂದಿ ಸಾವು

By Govindaraj SFirst Published Dec 10, 2022, 11:13 AM IST
Highlights

ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಭೀಕರ ಅಪಘಾತವಾಗಿ ಸ್ಥಳದಲ್ಲೇ 3 ಮಂದಿ ಸಾವನಪ್ಪಿದ್ದ ಘಟನೆ ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ನಡೆದಿದೆ. ನಾಗರಾಜ್ (40), ಪ್ರತ್ಯುಷಾ (32), 2 ವರ್ಷದ ಮಗು ಸಾವನಪ್ಪಿದ್ದಾರೆ. 

ಉಡುಪಿ (ಡಿ.10): ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಭೀಕರ ಅಪಘಾತವಾಗಿ ಸ್ಥಳದಲ್ಲೇ 3 ಮಂದಿ ಸಾವನಪ್ಪಿದ್ದ ಘಟನೆ ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ನಡೆದಿದೆ. ನಾಗರಾಜ್ (40), ಪ್ರತ್ಯುಷಾ (32), 2 ವರ್ಷದ ಮಗು ಸಾವನಪ್ಪಿದ್ದಾರೆ. ಮೃತರು ಆಂಧ್ರಪ್ರದೇಶದ ಮೂಲದವರಾಗಿದ್ದು, ಧರ್ಮಸ್ಥಳದಿಂದ ಶೃಂಗೇರಿ ಹೋಗುತ್ತಿದ್ದರು. ಸದ್ಯ ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಸ್ನೇಹಿತರ ದುರ್ಮರಣ: ಜನ್ಮದಿನ ಆಚರಿಸಿಕೊಂಡು ಮರಳಿ ಬರುವ ಸಂದರ್ಭದಲ್ಲಿ ಬೈಕ್‌ ಮೇಲಿದ್ದ ಇಬ್ಬರು ಸ್ನೇಹಿತರು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ. ನಗರದ ಹೊರವಲಯದ ಗದ್ದನಕೇರಿ ತಾಂಡಾದ ಬಳಿ ಸ್ನೇಹಿತರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ ವಿದ್ಯುತ್‌ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಾಗ ನಡೆದ ಭೀಕರ ಅಪಘಾತದಲ್ಲಿ ಇಬ್ಬರ ದೇಹಗಳು ಎರಡು ಭಾಗವಾಗಿ ತುಂಡರಿಸಿ, ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ: ಛಿದ್ರ ಛಿದ್ರವಾದ ಯುವಕನ ದೇಹ

ಮೃತರನ್ನು ಬಾಗಲಕೋಟೆ ನವನಗರದ ಸಂಗಮೇಶ (21) ಹಾಗೂ ಬಾಗಲಕೋಟೆ ತಾಲೂಕಿನ ಸಿರಗುಪ್ಪಿ ತಾಂಡಾದ ಕಿರಣ (21) ಎಂದು ಗುರುತಿಸಲಾಗಿದ್ದು, ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾದ ನಂತರ ನಡೆದ ಭೀಕರ ದುರಂತ ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

ಗುಡದೂರು ಬಳಿ ರಸ್ತೆ ಅಪಘಾತ: ಸಮೀಪದ ಗುಡದೂರು ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಬೈಕ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ಆಂಧ್ರದ ಕರ್ನೂಲ ಜಿಲ್ಲೆಯ ನಂದ್ಯಾಳ ಗ್ರಾಮದ ನಾಗರಾಜ (25), ಸೀನು (28), ಜಯಪಾಲ (30) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಶ್ರೀಕಾಂತ (30) ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ನಾಲ್ವರು ಯುವಕರು ಬೈಕ್‌ ಮೇಲೆ ಗುಡದೂರು ಬಳಿ ಭತ್ತ ಕಟಾವು ಮಾಡಿಸುತ್ತಿದ್ದ ಹೊಲಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಗುಡದೂರು ಕಾಲುವೆ ಬಳಿ ಸಿಂಧನೂರು ಕಡೆಯಿಂದ ಮಸ್ಕಿ ಕಡೆ ಬರುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ ಡಿಪೋ ಬಸ್‌ ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಪಿಎಸ್‌ಐ ಸಿದ್ಧರಾಮ ಬಿದರಾಣಿ ಮತ್ತು ಪೊಲೀಸರು ಲಿಂಗಸುಗೂರು ವರೆಗೆ ಬಸ್‌ ಹಿಂದೆ ಹೋಗಿ ಬಸ್‌ ಹಿಡಿದು ಚಾಲಕನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ನೇಹಿತನ ಪೋಸ್ಟ್‌ಮಾರ್ಟಮ್‌ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ

ಘಟನೆ ಸ್ಥಳಕ್ಕೆ ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ ಎಸ್‌. ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ. ಮಸ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಯಿತು.

click me!