
ವಿಜಯಪುರ(ಜ.29): ಇಷ್ಟಪಟ್ಟಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟು ಸರಿಯಾಗಿ ಒಂದು ವರ್ಷಕ್ಕೆ ಈತನು ಗುಂಡಿನ ದಾಳಿಗೊಳಗಾಗಿ ಕೊಲೆಯಾಗಿರುವ ಮನಕಲಕುವ ಘಟನೆ ತಿಕೋಟಾ ತಾಲೂಕಿನ ಮನಾವರದೊಡ್ಡಿ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಅರಕೇರಿ ತಾಂಡಾ 1ರ ನಿವಾಸಿ ಸತೀಶ ರಾಠೋಡ(28) ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಯುವಕ.
ಅರಕೇರಿಯಿಂದ ಮನಾವರದೊಡ್ಡಿಗೆ ಕಾರಿನಲ್ಲಿ ಹೊರಟಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಸತೀಶ ರಾಠೋಡ ಮೃತಪಟ್ಟಿದ್ದಾನೆ. ಕೊಲೆಯಾದ ಸ್ಥಳದಲ್ಲಿ ಮೃತನ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮಾನಾವರದೊಡ್ಡಿ ನಿವಾಸಿ ರಮೇಶ ಚೌವ್ಹಾಣ ಹಾಗೂ ಇತರರಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಕೊಲೆಯಾದ ಸ್ಥಳದಲ್ಲಿ ಒಂದು ಪಿಸ್ತೂಲ್, ಒಂದು ಚಾಕು ಹಾಗೂ ವ್ಯಕ್ತಿಯೊಬ್ಬನ ಕತ್ತರಿಸಿದ ಕಿವಿ ಪತ್ತೆಯಾಗಿವೆ. ಘಟನಾ ಸ್ಥಳವನ್ನು ಪರಿಶೀಲಿಸಿದರೆ ಏಕಾಏಕಿ ಗುಂಡಿನ ದಾಳಿಯಾಗಿಲ್ಲ, ಮೊದಲಿಗೆ ವಾಗ್ವಾದ ಹಾಗೂ ಗಲಾಟೆ ನಡೆದಿದ್ದು, ನಂತರ ಗುಂಡಿನ ದಾಳಿ ನಡೆದಿರುವ ಸಾಧ್ಯತೆ ಇದೆ. ಸುದ್ದಿ ತಿಳಿದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಹುಬ್ಬಳ್ಳಿ: ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆನು, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಮೃತ ಯುವತಿ ತಂದೆಯಿಂದ ದಾಳಿ ಶಂಕೆ
ಕೊಲೆಯಾಗಿರುವ ಸತೀಶ ರಾಠೋಡ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಅರಕೇರಿ ತಾಂಡಾ 1ರ ನಿವಾಸಿ ರಮೇಶ ಚೌವ್ಹಾಣ ಎಂಬುವರ ಪುತ್ರಿಯನ್ನು ಇಷ್ಟಪಟ್ಟಿದ್ದ. ನಿಮ್ಮ ಮಗಳನ್ನು ನಾನು ಮದುವೆಯಾಗುತ್ತೇನೆ ಎಂದು ಅವರ ಮನೆಗೆ ತನ್ನ ಪಾಲಕರ ಜೊತೆ ಹೋಗಿ ಹೆಣ್ಣು ಕೇಳಿದ್ದ. ಆದರೆ ಸತೀಶನಿಗೆ ಹೆಣ್ಣು ಕೊಡಲು ಯುವತಿಯ ತಂದೆ ರಮೇಶ ಚೌವ್ಹಾಣ ಒಪ್ಪಿರಲಿಲ್ಲ. ಬಳಿಕ ಎರಡು ಕುಟುಂಬಗಳ ನಡುವೆ ಗಲಾಟೆ ಕೂಡ ನಡೆದಿತ್ತು. ಇಷ್ಟೆಲ್ಲ ಆದ ನಂತರ ಕಳೆದ 2024 ಜನೇವರಿ 28ರಂದು ರಮೇಶ ಚೌವ್ಹಾಣ ಪುತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಆತ್ಮಹತ್ಯೆಗೆ ಸತೀಶ ರಾಠೋಡನೇ ಕಾರಣ ಎಂದುಕೊಂಡು ಮಗಳು ಸತ್ತು ಒಂದು ವರ್ಷದವಾದ ಅದೇ ದಿನವೇ ಅಂದರೆ 2025 ಜನೇವರಿ 28 ಸತೀಶ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಮಂಗಳೂರು: ದರೋಡೆ ಆಗಿದ್ದ ಕೋಟೆಕಾರ್ ಬ್ಯಾಂಕ್ನ 18 ಕೇಜಿ ಚಿನ್ನ ಪೂರ್ತಿ ವಶ
ರಮೇಶನ ಮಗಳನ್ನು ನಮ್ಮ ಮಗ ಇಷ್ಟಪಟ್ಟಿದ್ದ ಎಂಬ ಕಾರಣಕ್ಕೆ ನಾವು ಹೋಗಿ ಹೆಣ್ಣು ಕೇಳಿದಾಗ ಅವರು ಹೆಣ್ಣು ಕೊಡುವುದಿಲ್ಲ ಎಂದಿದ್ದರು. ಅದಾದ ಬಳಿಕ ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನಮ್ಮ ಮೇಲೆ ಹೊರೆಸಿ ಹಲ್ಲೆ ಮಾಡಿದ್ದರು. ಇಷ್ಟಾದರೂ ನಾವು ಸುಮ್ಮನಾಗಿದ್ದೆವು. ಅದೆ ಹಳೆಯ ವೈಷಮ್ಯ ಇಟ್ಟುಕೊಂಡು ರಮೇಶ ಹಾಗೂ ಆತನ ಜೊತೆಗಾರರು ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಸತೀಶನ ತಂದೆ ಪ್ರೇಮಸಿಂಗ್ ರಾಠೋಡ ತಿಳಿಸಿದ್ದಾರೆ.
ಮಧ್ಯಾಹ್ನ ಕಾರಿನಲ್ಲಿ ಹೊರಟಿದ್ದ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ. ನಾವು ಹಾಗೂ ನಮ್ಮ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಯಾರು ಕೊಲೆ ಮಾಡಿದ್ದಾರೆ, ಕೊಲೆಗೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ