ಕ್ರಿಕೆಟ್ ತಂಡದಿಂದ ಕೈ ಬಿಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ, ಸೆಲ್ಫಿ ವಿಡಿಯೋ ಲಭ್ಯ

By Suvarna NewsFirst Published Jul 20, 2022, 10:32 PM IST
Highlights

ನೀವು ಅನ್ಯಾಯ ಮಾಡಿದ್ದೀರಿ.. ನೀವು ಮಾಡಿದ ದ್ರೋಹ ಮರೆಯಲ್ಲ, ಸೆಲ್ಫಿ ವಿಡಿಯೋ ಮಾಡಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕ್ರಿಕೆಟ್ ತಂಡದಿಂದ ಕೈ ಬಿಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ವರದಿ : ಗಿರೀಶ್ ಕಮ್ಮಾರ, ಏಷ್ಯ ನೆಟ್ ಸುವರ್ಣ ನ್ಯೂಸ್ ಗದಗ
 

ಗದಗ, (ಜುಲೈ.20) : ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಸೇತುವೆ ಮೇಲಿಂದ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ ಇಂದು(ಬುಧವಾರ) ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ನಡೆದಿದೆ.

ಮುಂಡರಗಿ ಪಟ್ಟಣದ ಗೊಂದಳಿ ಓಣಿಯ ವಿಶ್ವನಾಥ್ ಗಣಾಚಾರಿ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೂ ಮುಂಚೆ ಸೆಲ್ಫಿ ವಿಡಿಯೋ ಮಾಡಿರೋ ವಿಶ್ವ ಆತ್ಮಹತ್ಯೆಗೆ ಕಾರಣವನ್ನ ಸ್ಪಷ್ಟವಾಗಿ ತಿಳಿಸಿಲ್ಲ.

 1 ನಿಮಿಷ 55 ಸೆಕೆಂಡ್ ನ ಸೆಲ್ಫಿ ವಿಡಿಯೋದಲ್ಲಿ ನಾಗರಾಜ್ ಬೀಸೆ ಅನ್ನೋರ ಹೆಸರು ಪ್ರಸ್ತಾಪ ಮಾಡಿ, ನೀವು ಅನ್ಯಾಯ ಮಾಡಿದ್ದೀರಿ.. ನೀವು ಮಾಡಿದ ದ್ರೋಹ ಮರೆಯಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ನನಗೆ ಈಜು ಬರುತ್ತೆ.. ಈಜುತ್ತೇನೆ.. ಇಲ್ಲ ನಕ್ಷತ್ರ ಮುಟ್ಟುತ್ತೇನೆ ಅಂತಾ ರೆಕಾರ್ಡ್ ಮಾಡಿಟ್ಟು ನದಿಗೆ ಹಾರಿದ್ದಾನೆ.

Bengaluru Crime News: ಕಾಲೇಜು ಹಾಸ್ಟೆಲಲ್ಲಿ ಇಂಜಿನಿಯರಿಂಗ್ ಸ್ಟುಡೆಂಟ್ ಆತ್ಮಹತ್ಯೆ

ನದಿಗೆ ಜಿಗಿದಿದ್ದ ವಿಶ್ವನನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರು.. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಶವದ ಶೋಧ ನಡೆಸಿದ್ರು.. ಕತ್ತಲಾದ ಹಿನ್ನೆಲೆ ಶೋಧಕಾರ್ಯ ಸ್ಥಗಿತವಾಗಿದ್ದು ಬೆಳಗ್ಗೆ ಮತ್ತೆ ಶೋಧ ನಡೆಯಲಿದೆ.. 

ಕ್ರಿಕೆಟ್ ಟೀಮ್ ನಿಂದ ಹೊರ ಹಾಕಿದ್ದಕ್ಕೆ ಆತ್ಮಹತ್ಯೆ ..!
ಗೊಂಧಳಿ ಸಮಾಜದಿಂದ ರಾಜ್ಯಾದ್ಯಂತ ಕ್ರಿಕೆಟ್ ಟೂರ್ನಿಗಳನ್ನ ಆಯೋಜನೆ ಮಾಡಲಾಗುತ್ತೆ.. ವಿಶ್ವನಾಥ್ ಕ್ರಿಕೆಟ್ ಆಟಗಾರ ಜೊತೆಗೆ ಗೊಂಧಳಿ ಸಮಾಜದ ಯುವಕ.. ಎರಡು ತಿಂಗಳ ಹಿಂದೆ ಹಾವೇರಿಯಲ್ಲಿ ಗೊಂಧಳಿ ಸಮಾಜದ ವತಿಯಿಂದ ಕ್ರಿಕೆಟ್ ಆಯೋಜನೆ ಮಾಡಲಾಗಿತ್ತು.. ಕ್ರಿಕೆಟ್ ಟೂರ್ನಿಯನ್ನ ಶಿವಮೊಗ್ಗ ಟೀಮ್ ಗೆದ್ದಿತ್ತು, ಗೆದ್ದ ಟೀಮ್ ನಲ್ಲಿ ಬೇರೆ ಸಮಾಜದ ವ್ಯಕ್ತಿ ಆಟವಾಡಿದ್ದ ಅನ್ನೋ ಗುಮಾನಿ ವಿಶ್ವನಿಗೆ ಇತ್ತು.. ಈ ವಿಷಯವನ್ನ ವಿಶ್ವನಾಥ್ ಸೋತ ಟೀಮ್ ನ ಜೊತೆಗೆ ಚರ್ಚಿಸಿದ್ದ.. ಈ ವಿಷಯ ಸಮಾಜದ ವಾಟ್ಸಪ್ ಗ್ರೂಪ್ ನಲ್ಲಿ ಭಾರೀ ಚರ್ಚೆಯಾಗಿತ್ತಂತೆ.. ಎಲ್ಲೆಡೆ ಚರ್ಚೆಯಾಗ್ತಿದ್ದ ವಿಷಯ ವಿಶ್ವನಾಥನಿಗೆ ತೀವ್ರ ಕಿರಿಕಿರಿಯಾಗಿತ್ತು ಇದರಿಂದ ಮನನೊಂದಿದ್ದ ಎನ್ನಲಾಗಿದೆ.

ಕ್ರಿಕೆಟ್ ಟೀಮ್ ನಿಂದ ಹೊರಹಾಕಿದ್ದ ಕ್ಯಾಪ್ಟನ್
ಸಮಾಜದ ಟೀಮ್ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಕ್ಕೆ ವಿಶ್ವನಾಥ್ ನನ್ನು ಕ್ರಿಕೆಟ್ ಟೀಮ್ ನಿಂದ ಹೊರಗಿಡುವ ನಿರ್ಧಾರವನ್ನ ತಂಡದ ನಾಯಕ ನಾಗರಾಜ್ ಬೀಸೆ ಮಾಡಿದ್ರು. ಐದು ಮ್ಯಾಚ್ ಹೊರಗಿರುವಂತೆ ಹೇಳಲಾಗಿತ್ತಂತೆ.. ಇದ್ರಿಂದ ವಿಶ್ವ ತುಂಬಾ ನೊಂದು ಹೋಗಿದ್ದ.. ಮುಂದಿನ ತಿಂಗಳು ವಿಜಯಪುರದಲ್ಲಿ ಟೂರ್ನಿ ನಡೆಯಬೇಕಿತ್ತು.. ಅದೇ ಚಿಂತೆಯಲ್ಲಿದ್ದ ವಿಶ್ವ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌.

ಆತ್ಮಹತ್ಯೆಗೆ ಮುನ್ನ ವಿಡಿಯೋನಲ್ಲಿ ನಾಯಕ ನಾಗರಾಜ್ ಬೀಸೆ ಹೆಸರು ಹೇಳಿದ್ದಾನೆ. ನಾಗರಾಜ್ ಬೀಸೆ ಕ್ರಿಕೆಟ್ ತಂಡದ ನಾಯಕನಾಗಿದ್ದು, ತಂಡದಿಂದ  ವಿಶ್ವನಾಥ್‌ನನ್ನು ಹೊರಹಾಕಿದ್ದಾರೆ. ಇದರಿಂದ ವಿಡಿಯೋನಲ್ಲಿ ನಾಯಕ ನಾಗರಾಜ್ ಬೀಸೆ ನನಗೆ ಅನ್ಯಾಯ ಮಾಡಿದ್ದೀಯಾ ಎಂದಿದ್ದಾನೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಟೀಮ್ ನಿಂದ ಹೊರಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. 
 

click me!