Child Labor : ಟಿಕೆಟ್ ಇಲ್ಲದ ಬಾಲಕನ ಬಳಿ 500  ರೂ. ಸುಲಿಗೆ.. ಎಂಥಾ ಕಾಲ!

By Suvarna NewsFirst Published Dec 31, 2021, 12:06 AM IST
Highlights

* ಟಿಕೆಟ್ ಇಲ್ಲದೆ ಪ್ರಯಾಣಕ್ಕೆ ಮುಂದಾದ ಬಾಲಕ
* ನಾವು ಅಧಿಕಾರಿಗಳು ಎಂದೇಳಿ ಬಾಲಕನಿಂದಲೇ ಹಣ ವಸೂಲಿ ಮಾಡಿದ ಕಿರಾತಕರು
* ಬಾಲಕಾರ್ಮಿಕ ಪದ್ಧತಿಯ ಇನ್ನೊಂದು ಮುಖ

ಥಾಣೆ( ಡಿ. 30)  ಟಿಕೆಟ್ ಇಲ್ಲದೇ ರೈಲಿನಲ್ಲಿ (Indian Railways)ಪ್ರಯಾಣಿಸಲು ಯತ್ನಿಸಿದ ಅಪ್ರಾಪ್ತನಿಂದ (Boy) 500 ರೂಪಾಯಿ ಸುಲಿಗೆ ಮಾಡಿದ ಕಿರಾತಕರನ್ನು (Arrest) ಬಂಧಿಸಲಾಗಿದೆ. ರೈಲ್ವೆ (Indian Railways) ಪೊಲೀಸರು ಎನ್‌ಜಿಒ ಒಂದಕ್ಕೆ ಸೇರಿದ  ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ನಜಮ್ ಸಿದ್ದಿಕಿ (40), ನರೇಶ್ ಉಂಬಾರೆ (27) ಮತ್ತು ಹರೀಶ್ ಸಿಂಗ್ (48) ಎಂದು ಗುರುತಿಸಲಾಗಿದೆ. ಸಿದ್ದಿಕಿ ಟೈಲರಿಂಗ್ ವ್ಯವಹಾರವನ್ನು ಹೊಂದಿದ್ದರೆ, ಉಂಬಾರೆ ಮತ್ತು ಸಿಂಗ್ ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಟಿಕೆಟ್ ಇಲ್ಲದೆ ಪ್ರಯಾಣ ಮಾಡಲು ಯತ್ನಿಸಿದ ಬಾಲಕ ಬಿಹಾರದ ಚಂಪಾರಣ್ ಜಿಲ್ಲೆಯವನು. ಡಿಸೆಂಬರ್ 13 ರಂದು ಬಿಹಾರದಿಂದ ಉಲ್ಲಾಸ್‌ನಗರಕ್ಕೆ ಬರುವನಿದ್ದ.   ಅಲ್ಲಿನ ಕಾರ್ಖಾನೆಯೊಂದರಲ್ಲಿ  ಕೆಲಸಕ್ಕೆ ಸೇರಿಕೊಂಡಿದ್ದ.

ಹೊಟ್ಟೆ ತುಂಬಿಕೊಳ್ಳಲು ಬಡವರ ಬಡಿದಾಟ: ಇವರ ಅಸಹಾಯಕತೆಯೇ ಇವನ ಬಂಡವಾಳ

ಊರಿಗೆ ವಾಪಸ್ ಬರಬೇಕು ಎಂದು ತೀರ್ಮಾನಿಸಿದ ಬಾಲಕ ತಾನು ಕೆಲಸ ಮಾಡುತ್ತಿದ್ದ ಜಾಗದ ಈಗ ಬಂಧನಕ್ಕೆ ಒಳಗಾಗಿರುವ ಸಿದ್ದಿಕಿ ಬಳಿ ಇಷ್ಟು ದಿನ ಕೆಲಸ ಮಾಡಿಕೊಂಡಿದ್ದ ಹಣ ಕೇಳಿದ್ದಾನೆ.   ತಾನು ಕೆಲಸ ಮಾಡಿದ್ದ 7500  ರೂ. ನೀಡುವಂತೆ ಕೇಳಿದ್ದಾನೆ. ಹಣ ನೀಡದ ಸಿದ್ದಕಿ 100  ರೂ. ಕೊಟ್ಟು ಊರಿಗೆ ಹೊರಡು ಎಂದಿದ್ದಾನೆ.  ಅಲ್ಲಿಂದ ಹೊರಟ ಬಾಲಕಮ ಕಲ್ಯಾಣ್ ರೈಲ್ವೆ ಸ್ಟೇಶನ್ ಗೆ ಬಂದಿದ್ದಾನೆ. ಈ ವೇಳೆ ಇಬ್ಬರು ಆತನ ಬಳಿ ಟಿಕೆಟ್ ಕೇಳಿದ್ದಾರೆ.

ನನ್ನ ಬಳಿ ಟಿಕೆಟ್ ಇಲ್ಲ ಎಂಬ ಬಾಲಕನನ್ನು ಬೆದರಿಸಿದ್ದಾರೆ. ನಿನ್ನನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ ಎಂದಿದ್ದಾರೆ. ಬಾಲಕನಿಂದ 500  ರೂ ಸುಲಿಗೆ ಮಾಡಿದ್ದು ಅಲ್ಲದೆ ರೈಲ್ವೆ ಪೊಲೀಸರ ಬಳಿ  ಬಾಲಕನ ಕರೆದುಕೊಂಡು ಹೋಗಿದ್ದಾರೆ.  ಈತ ನಮಗೆ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಎಂದಿದ್ದಾರೆ.

ಆದರೆ ಬಾಲಕ ನಡೆದ ಎಲ್ಲ ವಿವರ ತಿಳಿಸಿದ್ದು ಪೊಲೀಸರು ನಿಜವಾದ ಕಿರಾತಕರನ್ನು ಬಂಧಿಸಿದ್ದಾರೆ.  ಬಾಲಕನನ್ನು ಕೆಲಸಕ್ಕೆ ಸೇರಿಸಿದ ವ್ಯಕ್ತಿಯ ಹುಟುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.  ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಠಿಣ ಕಾನೂನು  ಜಾರಿ ಮಾಡಿದ್ದರೂ ಬಡತನದ ಪರಿಣಾಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗು ಪ್ರಕರಣಗಳು ದಾಖಲಾಗುತ್ತಲೇ ಇವೆ. 

ಬಹುಮಾನ:  ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಉದ್ದೇಶದಿಂದ ಕೇರಳ ಸರ್ಕಾರ (Kerala Govt) ವಿನೂತನ ಯೋಜನೆಯೊಂದನ್ನು ಜಾರಿ ಮಾಡಿದೆ. ಮಕ್ಕಳನ್ನು ಕೂಲಿ/ಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡುವವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  25,000 ರೂ.ಗಳ ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಈ ಕುರಿತು ಮಾಹಿತಿ ನೀಡಿದ ಕೇರಳ ರಾಜ್ಯ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್‌(Veena George) ದೇಶದಲ್ಲಿ ಈಗಾಗಲೇ ಬಾಲ ಕಾರ್ಮಿಕ ಪದ್ಧತಿ ನಿಷೇಧವಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಕ್ರಿಮಿನಲ್‌ ಅಪರಾಧ. ಆದಾಗ್ಯೂ ಅಲ್ಲಿಲ್ಲಿ ಇದು ಜಾರಿಯಲ್ಲಿದೆ. ಇಂಥ ಪದ್ಧತಿಯನ್ನು ತಡೆಗಟ್ಟುವ ಉದ್ದೇಶದಿಂದ ಬಾಲ ಕಾರ್ಮಿಕರ ಮಾಹಿತಿ ನೀಡಿದವರಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿ ಮಾಡಲಾಗಿದೆ. ಜನರ ನೆರವಿನಿಂದ ಮಾತ್ರ ಬಾಲಕಾರ್ಮಿಕ (Child labor) ಪದ್ಧತಿಯನ್ನು ತೊಡೆದು ಹಾಕಬಹುದು ಎಂದು ಹೇಳಿದ್ದಾರೆ.

ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಕೂಲಿ ಕೆಲಸಕ್ಕೆ ಮಕ್ಕಳನ್ನು ಬಳಸುವ ಬಗ್ಗೆ ಮಾಹಿತಿ ನೀಡಿದರೆ ಯಾವುದೇ ವ್ಯಕ್ತಿಗೆ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಲಾಗುತ್ತಿದೆ. ಇದು ಮುಖ್ಯವಾಗಿ ಮಕ್ಕಳ ರಕ್ಷಣೆಯಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ರವಾನಿಸಿದ ಮಾಹಿತಿ ದೃಢಪಟ್ಟರೆ ಮತ್ತು ನಿಜವೆಂದು ಕಂಡುಬಂದಲ್ಲಿ ಮೊತ್ತವನ್ನು ವಿತರಿಸಲಾಗುತ್ತದೆ. 

 

click me!