
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೀಗ ಪ್ಲೇ ಆಫ್ ಹಂತ ತಲುಪಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ ಆಫ್ಗೆ ಲಗ್ಗೆಯಿಟ್ಟಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಮೂವರು ಸ್ಟಾರ್ ಕ್ರಿಕೆಟಿಗರಿಗೆ ಚಪ್ಪಲಿಯಿಂದ ಬಾರಿಸುತ್ತಿದ್ದೆ ಎಂದು ಕಿಡಿಕಾರಿದ್ದಾರೆ.
19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಾನಾಡಿದ ಮೊದಲ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ಗೇರುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಲೀಗ್ ಹಂತ ಮುಕ್ತಾಯದ ವೇಳೆಗೆ ಪಂಜಾಬ್ ಐದನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್ ರೇಸ್ನಿಂದ ಹೊರಬಿದ್ದು ಮುಖಭಂಗ ಅನುಭವಿಸಿತು. ಈ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡವು ಹಲವು ಕಾರಣಗಳಿಗೆ ವಿವಾದಗಳಿಂದ ಸುದ್ದಿಯಾಗಿತ್ತು. ಕೆಲವು ಸ್ಟಾರ್ ಆಟಗಾರರ ವಿವಾದವು ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರಿತು. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಪಂಜಾಬ್ ಕಿಂಗ್ಸ್ನ ಮೂವರು ಆಟಗಾರರಿಗೆ ಚಪ್ಪಲಿಯಲ್ಲಿ ಬಾರಿಸುವ ಟೈಮ್ ಬಂದಿದೆ ಎನ್ನುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2026ರ ಐಪಿಎಲ್ ಟೂರ್ನಿಯ ಪಂಜಾಬ್ ಕಿಂಗ್ಸ್ ಪಾಲಿನ ಕೊನೆಯ ಲೀಗ್ ಹಂತದ ಮ್ಯಾಚ್ ಮುಕ್ತಾಯದ ಬಳಿಕ ಹರ್ಪ್ರೀತ್ ಬ್ರಾರ್ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಮಧ್ಯದಲ್ಲಿ ಹರ್ಪ್ರೀತ್ ಬ್ರಾರ್, ಅಕ್ಕಪಕ್ಕದಲ್ಲಿ ಅರ್ಶದೀಪ್ ಸಿಂಗ್ ಹಾಗೂ ಪ್ರಿಯಾನ್ಶ್ ಆರ್ಯಾ ಕೂಡಾ ಫೋಟೋಗೆ ಫೋಸ್ ಕೊಟ್ಟಿದ್ದರು. ಈ ಫೋಟೋಗೆ ಬ್ರಾರ್, ಅರ್ಶದೀಪ್ ಸಿಂಗ್ಗೆ ವ್ಲಾಗರ್ ಹಾಗೂ ಪ್ರಿಯಾನ್ಶ್ ಆರ್ಯಾ ಫೋಟೋ ಮೇಲೆ ಸ್ಲೋಗರ್ ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಕಮೆಂಟ್ ಮಾಡಿರುವ ಯುವಿ, 'ನಿಮ್ಮೆಲ್ಲರಿಗೂ ಚಪ್ಪಲಿಯಲ್ಲಿ ಬಾರಿಸುವ ಟೈಮ್ ಬಂದಿದೆ' ಎಂದು ಕಮೆಂಟ್ ಮಾಡಿದ್ದಾರೆ.
ಪಂಜಾಬ್ ಮೂಲದ ಈ ಮೂವರು ಕ್ರಿಕೆಟಿಗರು ಐಪಿಎಲ್ಗೂ ಮೊದಲೇ ಯುವರಾಜ್ ಸಿಂಗ್ ಗರಡಿಯಲ್ಲಿ ಪ್ರಾಕ್ಟೀಸ್ ಮಾಡಿದ್ದರು. ಯುವರಾಜ್ ಸಿಂಗ್, ಪಂಜಾಬ್ ಮೂಲದ ಹಲವು ಯುವ ಕ್ರಿಕೆಟಿಗರಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಾ ಬಂದಿದ್ದಾರೆ. ಇದೇ ಕಾರಣಕ್ಕಾಗಿ ಹಲವು ಯುವ ಕ್ರಿಕೆಟಿಗರು ಯುವರಾಜ್ ಸಿಂಗ್ ಅವರನ್ನು ಅಪಾರವಾಗಿ ಗೌರವಿಸುತ್ತಾ ಬಂದಿದ್ದಾರೆ. ಟೂರ್ನಿಯಲ್ಲಿ ನಿರಾಸೆ ಮೂಡಿಸಿದ ಈ ಮೂವರು ಕ್ರಿಕೆಟಿಗರ ಮೇಲೆ ಯುವಿ ಕಿಡಿ ಕಾರಿದ್ದಾರೆ.
19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಅರ್ಶದೀಪ್ ಸಿಂಗ್ ಮೇಲೆ ಪಂಜಾಬ್ ಕಿಂಗ್ಸ್ ತಂಡವು ಸಾಕಷ್ಟು ನಿರೀಕ್ಷೆಯಿಟ್ಟಿತ್ತು. ಆದರೆ ಅರ್ಶದೀಪ್ 14 ಪಂದ್ಯಗಳಲ್ಲಿ 10.20 ಎಕನಮಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ 14 ವಿಕೆಟ್ ಮಾತ್ರ ಪಡೆದಿದ್ದರು. ಇನ್ನು ಹರ್ಪ್ರೀತ್ ಬ್ರಾರ್ಗೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ಹೆಚ್ಚು ಝಲಕ್ ತೋರಿಸಲು ಬ್ರಾರ್ಗೆ ಸಾಧ್ಯವಾಗಲಿಲ್ಲ. ಇನ್ನು ಆರಂಭಿಕ ಬ್ಯಾಟರ್ ಪ್ರಿಯಾನ್ಶ್ ಆರ್ಯಾ ಪಂಜಾಬ್ ಪರ 13 ಪಂದ್ಯಗಳನ್ನಾಡಿ 364 ರನ್ ಸಿಡಿಸಿದರಾದರೂ, ಟೂರ್ನಿಯ ಕೊನೆಯಲ್ಲಿ ಫಾರ್ಮ್ ಕಳೆದುಕೊಂಡಿದ್ದು, ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.