
ನವದೆಹಲಿ(ಜು.08): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಮುಂಬರುವ ಅಕ್ಟೋಬರ್ 05ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡುವಂತಹ ಆಟಗಾರರಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಡಿಡಿ ಇಂಡಿಯಾ (DD India) ವಾಹಿನಿಯ 'ವರ್ಚುವಲ್ ಎನ್ಕೌಂಟರ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೊಹಮ್ಮದ್ ಕೈಫ್ (Mohammad Kaif), ಭಾರತ ಕ್ರಿಕೆಟ್ ತಂಡವು ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಭಾರತ ತವರಿನ ಮೈದಾನದಲ್ಲಿ ಆಡುತ್ತಿದೆ ಹಾಗೂ ತಂಡದಲ್ಲಿ ಟೂರ್ನಿಯನ್ನು ಗೆಲ್ಲಿಸಿಕೊಡುವಂತಹ ಆಟಗಾರರಿದ್ದಾರೆ ಎಂದು ಹೇಳಿದ್ದಾರೆ. ಅಕ್ಟೋಬರ್ 05ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಕಾದಾಡುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.
"ಭಾರತ ತಂಡವು ತವರಿನಲ್ಲಿ ವಿಶ್ವಕಪ್ ಆಡುತ್ತಿರುವುದರಿಂದ ಟೂರ್ನಿ ಗೆಲ್ಲುವ ಅವಕಾಶ ಹೆಚ್ಚಿದೆ. ಯಾಕೆಂದರೆ ಉಳಿದ ತಂಡಗಳಿಗೆ ಹೋಲಿಸಿದರೆ, ಇಲ್ಲಿನ ವಾತಾವರಣದ ಅರಿವು ನಮ್ಮ ತಂಡದ ಅಟಗಾರರಿಗೆ ಹೆಚ್ಚಿದೆ. ನಮ್ಮ ತಂಡದ ಸ್ಪಿನ್ನರ್ಗಳು ಟೂರ್ನಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ. ನಮ್ಮಲ್ಲಿ ಟೂರ್ನಿಯನ್ನು ಗೆಲ್ಲಿಸಿಕೊಡುವಂತಹ ಆಟಗಾರರಿದ್ದಾರೆ" ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮಾ(Rohit Sharma) ಅವರಂತಹ ಹಿರಿಯ ಆಟಗಾರರು ಜವಾಬ್ದಾರಿಯುತ ಪ್ರದರ್ಶನ ತೋರುವ ಮೂಲಕ ಭಾರತ ತಂಡಕ್ಕೆ ವಿಶ್ವಕಪ್ ಗೆದ್ದುಕೊಡಬೇಕು ಎಂದು ಕೈಫ್ ಸಲಹೆ ನೀಡಿದ್ದಾರೆ. 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು.
"ಭಾರತ ಕ್ರಿಕೆಟ್ ತಂಡದ ಮುಂದಿರುವ ಪ್ರಮುಖ ಸವಾಲೆಂದರೆ, ಎಲ್ಲಾ ಹಿರಿಯ ಆಟಗಾರರು ಮೈಚಳಿ ಬಿಟ್ಟು ಆಟ ಪ್ರದರ್ಶಿಸಬೇಕು. ಹಿರಿಯ ಆಟಗಾರರು ಫಿಟ್ನೆಸ್ ಹಾಗೂ ಫಾರ್ಮ್ನಲ್ಲಿ ಸಿದ್ದರಿರಬೇಕಾಗುತ್ತದೆ. ನನ್ನ ಪ್ರಕಾರ ಬೌಲಿಂಗ್ ವಿಭಾಗ ಸದೃಢವಾಗಿದೆ. ಒಂದು ವೇಳೆ ನಾವು ಬ್ಯಾಟಿಂಗ್ ಚೆನ್ನಾಗಿ ಆಡಿದರೆ, ಎದುರಾಳಿ ತಂಡಕ್ಕೆ ನಮ್ಮನ್ನು ಸೋಲಿಸುವುದು ಸುಲಭವಾಗುವುದಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಆಟಗಾರರು ಜವಾಬ್ದಾರಿಯುತ ಆಟವಾಡುವ ಮೂಲಕ ಪಂದ್ಯಗಳನ್ನು ಗೆಲ್ಲಿಸಿಕೊಡಬೇಕು ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ನಮ್ಮ ತಂಡಕ್ಕೆ ಬುಮ್ರಾ ಕೂಡಾ ಸೇರ್ಪಡೆಯಾದರೆ, ಭಾರತ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಸದೃಢವಾಗಲಿದೆ. ಬುಮ್ರಾ ಕಳೆದ ಕೆಲ ತಿಂಗಳಿನಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಕ್ರಿಕೆಟ್ನಿಂದ ದೂರವೇ ಉಳಿದಿದ್ದಾರೆ. ಏಷ್ಯಾಕಪ್ ಟೂರ್ನಿಯ ವೇಳೆಗೆ ಬುಮ್ರಾ, ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಇದು ಭಾರತ ತಂಡದ ಪಾಲಿಗೆ ಶುಭಸುದ್ದಿ. ನಮ್ಮ ತಂಡಕ್ಕೆ ಬುಮ್ರಾ ಬೇಕು. ಒಂದು ವೇಳೆ ಬುಮ್ರಾ ಕೂಡಾ ಭಾರತ ಬೌಲಿಂಗ್ ಪಡೆಯನ್ನು ಕೂಡಿಕೊಂಡರೆ, ಭಾರತವನ್ನು ಸೋಲಿಸುವುದು ಸುಲಭವಲ್ಲ. ಇತ್ತೀಚೆಗಿನ ದಿನಗಳಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇವರ ಜತೆಗೆ ಬುಮ್ರಾ ಕೂಡಾ ಸೇರ್ಪಡೆಗೊಂಡರೆ, ಭಾರತ ತಂಡವು ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದಂತಾಗಲಿದೆ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.