
ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಸುಂದರ್ ಮುಂಬರುವ ಟಿ20 ವಿಶ್ವಕಪ್ ಆಡೋ ಬಗ್ಗೆ ಅನುಮಾನ ಶುರುವಾಗಿದೆ.
ಹೌದು, ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇದೀಗ ಗಾಯದ ಸಮಸ್ಯೆಯಿಂದ, ನ್ಯೂಜಿಲೆಂಡ್ ಎದುರಿನ ಉಳಿದ ಎರಡು ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಪಕ್ಕೆಲುಬಿನ ಸ್ನಾಯುಸೆಳೆತಕ್ಕೆ ಒಳಗಾದ ಸುಂದರ್, ಕೇವಲ ಐದು ಓವರ್ ಬೌಲಿಂಗ್ ಮಾಡಿ ಆ ಬಳಿಕ ಮೈದಾನ ತೊರೆದರು. ಹೀಗಾಗಿ ಧ್ರುವ್ ಜುರೆಲ್ ಸಬ್ಸ್ಟಿಟ್ಯೂಟ್ ಫೀಲ್ಡರ್ ಆಗಿ ಮೈದಾನದಲ್ಲಿ ಕಾಣಿಸಿಕೊಂಡರು. ವಾಷಿಂಗ್ಟನ್ ಸುಂದರ್ 5 ಓವರ್ ಬೌಲಿಂಗ್ ಮಾಡಿ ಕೇವಲ 27 ರನ್ ನೀಡಿದ್ದರು. ಆದರೆ ವಿಕೆಟ್ ಕಬಳಿಸಲು ಯಶಸ್ವಿಯಾಗಿರಲಿಲ್ಲ.
ಸ್ನಾಯು ಸೆಳೆತಕ್ಕೆ ಒಳಗಾಗಿ ತೀವ್ರ ನೋವಿನಿಂದ ಬಳಲುತ್ತಿದ್ದ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡಲಿಳಿಯುವುದು ಅನುಮಾನ ಎನಿಸಿತ್ತು. ಆದರೆ ನಿರ್ಣಾಯಕ ಘಟ್ಟದಲ್ಲಿ ಹರ್ಷಿತ್ ರಾಣಾ ವಿಕೆಟ್ ಪತನವಾಗಿದ್ದರಿಂದ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡಲಿಳಿಯುವುದು ಅನಿವಾರ್ಯ ಎನಿಸಿತು. ಕೊಂಚ ಸ್ನಾಯು ಸೆಳೆತವನ್ನು ಅನುಭವಿಸುತ್ತಲೇ ಬ್ಯಾಟಿಂಗ್ ಮಾಡಲಿಳಿದ ವಾಷಿಂಗ್ಟನ್ ಸುಂದರ್ ಏಳು ಎಸೆತಗಳಲ್ಲಿ ಅಜೇಯ 7 ರನ್ ಬಾರಿಸುವ ಮೂಲಕ ಕೆ ಎಲ್ ರಾಹುಲ್ಗೆ ಉತ್ತಮ ಸಾಥ್ ನೀಡಿದರು. 301 ರನ್ ಗುರಿ ಬೆನ್ನತ್ತಿದ ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
ಟಿ20 ವಿಶ್ವಕಪ್ ಆಡ್ತಾರಾ ವಾಷಿಂಗ್ಟನ್ ಸುಂದರ್?
ಕಳೆದೆರೆಡು ವರ್ಷಗಳಲ್ಲಿ ಭಾರತ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ಅತ್ಯಂತ ನಂಬಿಗಸ್ಥ ಸ್ಪಿನ್ ಆಲ್ರೌಂಡರ್ ಆಗಿ ಬೆಳೆಯುತ್ತಿರುವ ವಾಷಿಂಗ್ಟನ್ ಸುಂದರ್, ಜನವರಿ 21ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಸ್ಥಾನ ಪಡೆದಿದ್ದಾರೆ. ಇದಷ್ಟೇ ಅಲ್ಲದೇ ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇದೇ ಫೆಬ್ರವರಿ 07ರಿಂದ ಆರಂಭವಾಗಲಿದೆ. ಈ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯವನ್ನು ವಹಿಸಿವೆ.
ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಕ್ಯಾನ್ಗೆ ಒಳಗಾಗಿದ್ದು, ಸದ್ಯದಲ್ಲೇ ಅವರ ಗಾಯದ ತೀವ್ರತೆಯ ಮಾಹಿತಿ ಹೊರಬೀಳಲಿದೆ. ಗಾಯದ ತೀವ್ರತೆ ಹೆಚ್ಚಾಗಿದ್ದರೇ ಕಿವೀಸ್ ಎದುರಿನ ಟಿ20 ಸರಣಿ ಹಾಗೂ ಟಿ20 ವಿಶ್ವಕಪ್ ವಿಶ್ವಕಪ್ ಟೂರ್ನಿಯಿಂದಲೂ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಕಿವೀಸ್ ಎದುರಿನ ಏಕದಿನ ಸರಣಿಗೆ ವಾಷಿಂಗ್ಟನ್ ಸುಂದರ್ಗೆ ಬದಲಿ ಆಟಗಾರನನ್ನು ಇನ್ನೂ ಬಿಸಿಸಿಐ ಘೋಷಿಸಿಲ್ಲ.
ಕಿವೀಸ್ ಎದುರಿನ ಸರಣಿಯಿಂದ ಹೊರಬಿದ್ದ ಎರಡನೇ ಕ್ರಿಕೆಟಿಗ ಸುಂದರ್:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಒಂದು ದಿನ ಮೊದಲು ನೆಟ್ ಪ್ರಾಕ್ಟೀಸ್ ಮಾಡುವ ವೇಳೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಿಬ್ಬೊಟ್ಟೆ ನೋವಿಗೆ ಒಳಗಾಗಿ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಅವರ ಬದಲಿಗೆ ಧ್ರುವ್ ಜುರೆಲ್ ಭಾರತ ತಂಡ ಕೂಡಿಕೊಂಡಿದ್ದರು. ಇದೀಗ ವಾಷಿಂಗ್ಟನ್ ಸುಂದರ್ ಎರಡನೇ ಆಟಗಾರನಾಗಿ ಕಿವೀಸ್ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.