
ಸಿಡ್ನಿ: ತನ್ನ ಎಡವಟ್ಟುಗಳಿಂದ ಆರಂಭಿಕ 2 ಪಂದ್ಯದಲ್ಲಿ ಸೋತು ಸರಣಿ ಕೈಚೆಲ್ಲಿರುವ ಭಾರತ ತಂಡ, ಶನಿವಾರ ಆಸ್ಟ್ರೇಲಿಯಾ ವಿರುದ್ಧ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಆಡಲಿದೆ. ವೈಟ್ವಾಶ್ ಮುಖಭಂಗದಿಂದ ಪಾರಾಗಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಆದರೆ ಸಿಡ್ನಿ ಪಂದ್ಯ ಮಹತ್ವ ಸೃಷ್ಟಿಸಿದ್ದು ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾರಣಕ್ಕೆ. ಈ ಇಬ್ಬರಿಗೆ ಇದು ಆಸ್ಟ್ರೇಲಿಯಾದಲ್ಲಿ ಕೊನೆ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.
ರೋಹಿತ್ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಸರಣಿ ಆಡಿದ್ದು 2007-08ರಲ್ಲಿ, ಕೊಹ್ಲಿ ತಮ್ಮ ಚೊಚ್ಚಲ ಆಸೀಸ್ ಸರಣಿಯನ್ನು 2011-12ರಲ್ಲಿ ಆಡಿದ್ದರು. ಇನ್ನು ಮುಂದಿನ 2 ವರ್ಷ ಭಾರತಕ್ಕೆ ಆಸೀಸ್ ನೆಲದಲ್ಲಿ ಸರಣಿಯಿಲ್ಲ. ಹೀಗಾಗಿ, ನಿವೃತ್ತಿ ಅಂಚಿನಲ್ಲಿರುವ ಕೊಹ್ಲಿ ರೋಹಿತ್ಗೆ ಇದೇ ಕೊನೆ ಆಸೀಸ್ ಸರಣಿ.
ಕೊಹ್ಲಿ ಸರಣಿಯ ಎರಡೂ ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದರೆ, ರೋಹಿತ್ 2ನೇ ಪಂದ್ಯದಲ್ಲಿ ಅಮೋಘ ಆಟವಾಡಿದ್ದರು. ಸಿಡ್ನಿ ಕ್ರೀಡಾಂಗಣದಲ್ಲಿ ತಮ್ಮ ಅಭಿಮಾನಿಗಳ ಮುಂದೆ ಇವರಿಬ್ಬರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ. ಜೊತೆಗೆ, ಮಹತ್ವದ ಸರಣಿಯಲ್ಲಿ ಭಾರತವನ್ನು ವೈಟ್ವಾಶ್ ಮುಖಭಂಗದಿಂದ ಪಾರು ಮಾಡುವ ಹೊಣೆಗಾರಿಕೆ ದಿಗ್ಗಜ ಕ್ರಿಕೆಟಿಗರಿಬ್ಬರ ಮೇಲಿದೆ.
ಈಗಾಗಲೇ ಸರಣಿ ಸೋತಿರುವುದರಿಂದ ಭಾರತ ಕೊನೆ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಸರ್ಜರಿ ನಡೆಯಬಹುದು. ಮೊದಲೆರಡು ಪಂದ್ಯಗಳಲ್ಲಿ ಕುಲ್ದೀಪ್ರನ್ನು ಆಡಿಸದೆ ಇರುವ ಕ್ರಮ ಭಾರೀ ಟೀಕೆಗೆ ಕಾರಣ ವಾಗಿದ್ದು, ಈ ಪಂದ್ಯದಲ್ಲಾದರೂ ಆಡಿಸಲು ನಾಯಕ, ಕೋಚ್ ಮನಸ್ಸು ಮಾಡತ್ತಾರೆಯೇ ಎಂಬ ಕುತೂಹಲವಿದೆ.
ಭಾರತ ವಿರುದ್ಧ ಆಸೀಸ್ 4 ದಶಕಗಳಿಂದ ದ್ವಿಪಕ್ಷೀಯ ಏಕದಿನ ಸರಣಿ ಆಡುತ್ತಿದೆ. ಆದರೆ ಒಮ್ಮೆಯೂ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕ್ಲೀನ್ಸ್ವೀಪ್ ಮಾಡಿಲ್ಲ. 1984-85ರಲ್ಲಿ 5 ಪಂದ್ಯಗಳ ಸರಣಿಯಲ್ಲಿ ಆಸೀಸ್ 3-0 ಅಂತರ ದಲ್ಲಿ ಗೆದ್ದಿತ್ತು. ಉಳಿದಂತೆ ಯಾವ ಸರಣಿಯಲ್ಲೂ ಎಲ್ಲಾ ಪಂದ್ಯ ಗೆದ್ದಿಲ್ಲ.
36 ವರ್ಷದ ವಿರಾಟ್ ಟೆಸ್ಟ್ ಅಂ.ರಾ. ಟಿ20ಗೆ ನಿವೃತ್ತಿ ಘೋಷಿಸಿದ್ದು, ಏಕದಿನ ಮಾತ್ರ ಆಡುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಕೊಹ್ಲಿಯ ಅಂತಾ ರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ಕೊನೆ ಪಂದ್ಯ ವಾಗಿರಬಹುದು ಎನ್ನಲಾಗುತ್ತಿದೆ. 2027ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ಕೊಹ್ಲಿ ಒಲವು ಹೊಂದಿದ್ದರಾದರೂ, ಅಲ್ಲಿವರೆಗೂ ಅವರು ಭಾರತ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆ. ಒಂದು ವೇಳೆ ಆಸೀಸ್ ಸರಣಿ ಬಳಿಕ ತಂಡದಲ್ಲಿದ್ದರೂ, ಮುಂದಿನ ವರ್ಷವೇ ನಿವೃತ್ತಿ ಯಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.