Vijay Hazare Trophy: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ!

By Naveen KodaseFirst Published Nov 16, 2022, 10:12 AM IST
Highlights

ವಿಜಯ್ ಹಜಾರೆ ಟೂರ್ನಿಯಲ್ಲಿ ಮುಂದುವರೆದ ಕರ್ನಾಟಕದ ಜಯದ ನಾಗಾಲೋಟ
ಜಾರ್ಖಂಡ್ ಎದುರು ಭರ್ಜರಿ ಜಯ ಸಾಧಿಸಿದ ಕರ್ನಾಟಕ ಕ್ರಿಕೆಟ್ ತಂಡ
ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್‌ ಅಗರ್‌ವಾಲ್

ಕೋಲ್ಕತಾ(ನ.16): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಎಲೈಟ್‌ ‘ಬಿ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಮಂಗಳವಾರ ಜಾರ್ಖಂಡ್‌ ವಿರುದ್ಧ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಜಾರ್ಖಂಡ್‌, ಕರ್ನಾಟಕದ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿತು. ವೇಗಿಗಳಾದ ವಾಸುಕಿ ಕೌಶಿಕ್‌ ಹಾಗೂ ವಿದ್ವತ್‌ ಕಾವೇರಪ್ಪ, ಜಾರ್ಖಂಡ್‌ 28 ರನ್‌ಗೆ 6 ವಿಕೆಟ್‌ ಕಳೆದುಕೊಳ್ಳುವಂತೆ ಮಾಡಿದರು. ಯುವ ವಿಕೆಟ್‌ ಕೀಪರ್‌ ಕುಮಾರ್‌ ಕುಶಾಗ್ರ ಅವರ ಹೋರಾಟದ 56 ರನ್‌ಗಳ ನೆರವಿನಿಂದ ಜಾರ್ಖಂಡ್‌ 100ರ ಗಡಿ ದಾಟಿತು. 40.4 ಓವರಲ್ಲಿ 107 ರನ್‌ಗೆ ಆಲೌಟ್‌ ಆಯಿತು. ಕುಶಾಗ್ರ ಹಾಗೂ ಸೌರಭ್‌ ತಿವಾರಿ(11) ಮಾತ್ರ ಎರಡಂಕಿ ಮೊತ್ತ ದಾಟಿದರು. ರಾಜ್ಯದ ಪರ ಕೌಶಿಕ್‌ 10 ಓವರಲ್ಲಿ 3 ಮೇಡನ್‌ ಸಹಿತ 18 ರನ್‌ಗೆ 3 ವಿಕೆಟ್‌ ಕಿತ್ತರೆ, ವಿದ್ವತ್‌ 8 ಓವರಲ್ಲಿ 2 ಮೇಡನ್‌ನೊಂದಿಗೆ 17 ರನ್‌ಗೆ 2 ವಿಕೆಟ್‌ ಪಡೆದರು. ಮನೋಜ್‌ ಭಾಂಡ್ಗೆ 2, ರೋನಿತ್‌ ಮೋರೆ 1 ವಿಕೆಟ್‌ ಪಡೆದರು. ರಾಜ್ಯದ ಬೌಲರ್‌ಗಳು ಒಟ್ಟು 8 ಮೇಡನ್‌ ಓವರ್‌ಗಳನ್ನು ಎಸೆದಿದ್ದು ವಿಶೇಷ.

ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ನಾಯಕ ಮಯಾಂಕ್‌ ಅಗರ್‌ವಾಲ್‌ ಆಸರೆಯಾದರು. ಲಯಕ್ಕೆ ಮರಳಿದ ಮಯಾಂಕ್‌ 63 ಎಸೆತದಲ್ಲಿ 53 ರನ್‌ ಗಳಿಸಿದರು. ನಿಕಿನ್‌ ಜೋಸ್‌ 24, ಮನೀಶ್‌ ಪಾಂಡೆ 15 ರನ್‌ ಗಳಿಸಿದರು. 4 ವಿಕೆಟ್‌ ಕಳೆದುಕೊಂಡು 26.3 ಓವರಲ್ಲಿ ಕರ್ನಾಟಕ ಗುರಿ ತಲುಪಿತು.

ಸ್ಕೋರ್‌: ಜಾರ್ಖಂಡ್‌ 40.4 ಓವರಲ್ಲಿ 107/10(ಕುಮಾರ್‌ 56, ಕೌಶಿಕ್‌ 3-18, ವಿದ್ವತ್‌ 2-17), ಕರ್ನಾಟಕ 26.3 ಓವರಲ್ಲಿ 108/4(ಮಯಾಂಕ್‌ 53, ನಿಕಿನ್‌ 24, ಶಾಬಾಜ್‌ 2-38)

ಭಾರತ ಟಿ20 ತಂಡಕ್ಕೆ ಎಂ ಎಸ್ ಧೋನಿ ನಿರ್ದೇಶಕ?

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ವೈಫಲ್ಯ ಅನುಭವಿಸಿದ ಭಾರತ ತಂಡದಲ್ಲಿ ಸುಧಾರಣೆ ತರಲು ಯೋಜನೆ ರೂಪಿಸುತ್ತಿರುವ ಬಿಸಿಸಿಐ, ತಂಡಕ್ಕೆ ಮಾಜಿ ನಾಯಕ ಎಂ.ಎಸ್‌.ಧೋನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.  2024ರ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಧೋನಿ ಅವರ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 

ಟಿ20 ವಿಶ್ವಕಪ್ ಟೂರ್ನಿ ವೇಳೆ ಅಲ್ಪಾವಧಿಗೆ ಧೋನಿ ಅವರನ್ನು ತಂಡದ ಸಲಹೆಗಾರರನ್ನಾಗಿ ನೇಮಿಸುವ ಬದಲು ಪೂರ್ಣಾವಧಿ ಹುದ್ದೆ ನೀಡುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಬಹುದು ಎನ್ನಲಾಗಿದೆ.

IPL Retention: ಪ್ಯಾಟ್‌ ಕಮ್ಮಿನ್ಸ್‌, ಫಿಂಚ್‌, ರಹಾನೆ ಸೇರಿದಂತೆ 16 ಆಟಗಾರರ ರಿಲೀಸ್‌ ಮಾಡಿದ ಕೆಕೆಆರ್‌!

ಭಾರತ ತಂಡವು ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2007ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಯಂಗಿಸ್ತಾನ್‌, ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2014ರಲ್ಲಿ ಧೋನಿ ನೇತೃತ್ವದಲ್ಲೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತಾದರೂ, ಶ್ರೀಲಂಕಾ ಎದುರು ಮುಗ್ಗರಿಸುವ ಮೂಲಕ ಎರಡನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇದಾದ ಬಳಿಕ ಟೀಂ ಇಂಡಿಯಾ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಪ್‌ ಗೆಲ್ಲುವುದಿರಲಿ, ಫೈನಲ್ ಪ್ರವೇಶಿಸಲು ಕೂಡಾ ಸಾಧ್ಯವಾಗುತ್ತಿಲ್ಲ. ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೆಮೀಸ್‌ನಲ್ಲೇ ಮುಗ್ಗರಿಸುವ ಮೂಲಕ ತನ್ನ ಅಭಿಯಾನ ಮುಗಿಸಿತ್ತು.

click me!