Rohit Sharma: ಸಾವಿರ ಸಾರಿ ಹೇಳಿದ್ದೀನಿ, ಜನ ಏನ್ ಹೇಳ್ತಾರೆ ಅನ್ನೋದು ನನಗೆ ಲೆಕ್ಕಕ್ಕಿಲ್ಲ!

Suvarna News   | Asianet News
Published : Dec 12, 2021, 11:49 PM IST
Rohit Sharma: ಸಾವಿರ ಸಾರಿ ಹೇಳಿದ್ದೀನಿ, ಜನ ಏನ್ ಹೇಳ್ತಾರೆ ಅನ್ನೋದು ನನಗೆ ಲೆಕ್ಕಕ್ಕಿಲ್ಲ!

ಸಾರಾಂಶ

ಸೀಮಿತ ಓವರ್ ಗಳ ಕ್ರಿಕೆಟ್ ಗೆ ನಾಯಕನಾದ ಬಳಿಕ ಮೊದಲ ಸಂದರ್ಶನ ಬಿಸಿಸಿಐ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ರೋಹಿತ್ ಮಾತು ಟೀಂ ಇಂಡಿಯಾ ಪರವಾಗಿ ಆಡುವಾಗ ಒತ್ತಡ ಹೊಸದಲ್ಲ

ಬೆಂಗಳೂರು (ಡಿ. 12): ಟೀಂ ಇಂಡಿಯಾ (Team India) ಸೀಮಿತ ಓವರ್ ಗಳ ತಂಡಕ್ಕೆ ನೂತನ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮ (Rohit Sharma), ಇತ್ತೀಚೆಗೆ ಬಿಸಿಸಿಐ (BCCI) ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಜವಾಬ್ದಾರಿ ಹಾಗೂ ಒತ್ತಡಗಳ ಬಗ್ಗೆ ಮಾತನಾಡಿದ್ದಾರೆ. ನ್ಯೂಜಿಲೆಂಡ್  (New Zealand)ವಿರುದ್ಧ ಟಿ20 ಸರಣಿಯಲ್ಲಿ ತಂಡವನ್ನು ಪೂರ್ಣ ಪ್ರಮಾಣದ ನಾಯಕನಾಗಿ ಮುನ್ನಡೆಸಿರುವ ರೋಹಿತ್ ಶರ್ಮ, ಮುಂಬರುವ ದಕ್ಷಿಣ ಆಫ್ರಿಕಾ (South Africa) ಸರಣಿಯಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಿಚಾರವಾಗಿಯೇ ಬಹಳವಾಗಿ ಚರ್ಚೆ ನಡೆಯುತ್ತಿದೆ. ಮಾಜಿ ಆಟಗಾರರು ಪರ-ವಿರೋಧದ ಚರ್ಚೆ ನಡೆಸುತ್ತಿರುವಾಗಲೇ ರೋಹಿತ್ ಶರ್ಮ ಅವರ ಸಂದರ್ಶನವನ್ನು ಬಿಸಿಸಿಐ ಪ್ರಕಟಿಸಿದೆ.
ಭಾರತದ ಪರವಾಗಿ ನೀವು ಕ್ರಿಕೆಟ್ ಆಡುತ್ತೀರಿ ಎನ್ನುವಾಗ ಒತ್ತಡಗಳು ಇದ್ದೇ ಇರುತ್ತದೆ. ಟೀಂ ಇಂಡಿಯಾ ಪರವಾಗಿ ಆಡುವಾಗ ಯಾವ ಪ್ಲೇಯರ್ ಗಳಿಗೂ ಒತ್ತಡ ಹೊಸದಲ್ಲ.  ಧನಾತ್ಮಕವಾಗಿಯೇ ಇರಲಿ, ಋಣಾತ್ಮಕವಾಗಿಯೇ ಇರಲಿ ನಾಯಕತ್ವದ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಆದರೆ, ನಾನು ಈ ಬಗ್ಗೆ ವೈಯಕ್ತಿಕವಾಗಿ ಹೇಳುವುದೇನೆಂದರೆ, ಕ್ರಿಕೆಟರ್ ಆಗಿ ನಾನು ನನ್ನ ಮುಂದಿರುವ ಕೆಲಸದ ಮೇಲೆ ಕೇಂದ್ರೀಕರಿಸುತ್ತೇನೆ. ಅದರ ಹೊರತಾಗಿ ಜನರು ಏನು ಹೇಳುತ್ತಾರೆ ಎನ್ನುವ ಬಗ್ಗೆ ಗಮನ ನೀಡುವುದಿಲ್ಲ, ಯಾಕೆಂದರೆ ಅದನ್ನು ನಿಯಂತ್ರಿಸುವುದು ನನಗೆ ಸಾಧ್ಯವಿಲ್ಲ. ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ ಹಾಗೂ ಪ್ರತಿ ಬಾರಿಯೂ ಹೇಳುತ್ತಿರುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.
ತಂಡದ ಒಳಗೂ ಇದೇ ಸಂದೇಶವಿದೆ. ಹೈಪ್ರೊಫೈಲ್ ಟೂರ್ನಮೆಂಟ್ ಆಡುತ್ತಿದ್ದಾಗ, ಖಂಡಿತವಾಗಿಯೂ ಅಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಆ ಸಮಯದಲ್ಲಿ ನಮ್ಮ ಮುಂದೆ ಇರುವ ಕೆಲಸವನ್ನು ಆದಷ್ಟು ಉತ್ತಮವಾಗಿ ಮುಗಿಸುವುದು ನಮ್ಮ ಮುಖ್ಯ ಗುರಿಯಾಗಿರುತ್ತದೆ. ಆಡುವ ಪ್ರತಿ ಪಂದ್ಯವನ್ನು ಗೆಲ್ಲುವ ಉದ್ದೇಶದಲ್ಲಿ, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿರುತ್ತದೆ. ಇಂಥ ಸಮಯದಲ್ಲಿ ಜನರು ಏನು ಹೇಳ್ತಾರೆ ಅನ್ನೋದು ನನಗೆ ಲೆಕ್ಕಕ್ಕೆ ಬರೋದಿಲ್ಲ. ತಂಡದಲ್ಲಿ ಒಬ್ಬರ ಕುರಿತಾಗಿ ಒಬ್ಬರು ಏನು ಯೋಚನೆ ಮಾಡುತ್ತಾರೆ ಎನ್ನುವುದೇ ಮುಖ್ಯ. ಆಟಗಾರರ ನಡುವೆ ಉತ್ತಮ ಬಾಂಧವ್ಯ ಇರಬೇಕೆಂದು ನಾನು ಬಯಸುತ್ತೇನೆ, ಇದು ನಮ್ಮ ಗುರಿ ಸಾಧನೆ ಮಾಡಲು ಸಹಾಯ ಮಾಡುತ್ತದೆ ಎಂದು ರೋಹಿತ್ ಹೇಳಿದ್ದಾರೆ.
 


ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಯಾವ ಸೂಚನೆಯನ್ನೂ ನೀಡದೇ ನಾಯಕ ಸ್ಥಾನದಿಂದ ವಜಾ ಮಾಡಲಾಗಿತ್ತು. ಈ ಕುರಿತಾಗಿ ಕೆಲ ವರದಿಗಳು ಬಂದ ಬೆನ್ನಲ್ಲಿಯೇ ಬಿಸಿಸಿಐ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಮಾಜಿ ಕ್ರಿಕೆಟಿಗರಾದ ಮದನ್ ಲಾಲ್ (Madan Lal)ಹಾಗೂ ದಿಲೀಪ್ ವೆಂಗ್ಸರ್ಕಾರ್ (Dilip Vengsarkar) ಬಿಸಿಸಿಐ ನಡೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಇದು ಕೊಹ್ಲಿಯ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು ಎಂದಿದ್ದರು. 


Virat Kohli Captaincy : ಕೊಹ್ಲಿ ಇಲ್ಲದೇ ತಂಡ ಏಷ್ಯಾ ಕಪ್ ಗೆದ್ದಿತ್ತು!
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬ್ 26 ರಿಂದ ಆರಂಭವಾಗಲಿದ್ದು, ಸೆಂಚುರಿಯನ್, ಜೊಹಾನ್ಸ್ ಬರ್ಗ್ ಹಾಗೂ ಕೇಪ್ ಟೌನ್ ನಲ್ಲಿ ಪಂದ್ಯಗಳು ನಡೆಯಲಿವೆ. ಜನವರಿ 19, 21 ಹಾಗೂ 23 ರಂದು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ರೋಹಿತ್ ಶರ್ಮ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಸರಣಿಯ ನಿಟ್ಟಿನಲ್ಲಿ ಟೀಂ ಇಂಡಿಯಾ ಈಗಾಗಲೇ ಅಭ್ಯಾಸ ಆರಂಭ ಮಾಡಿದ್ದು, ಡಿಸೆಂಬರ್ 16ಕ್ಕೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 Mini Auction: ಖರೀದಿಸಿದ ಎಂಟು ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!