Bio Bubble: ಫೋಟೋ ಮೂಲಕ ಬಯೋ ಬಬಲ್‌ ಕಷ್ಟ ವಿವರಿಸಿದ ವಿರಾಟ್‌ ಕೊಹ್ಲಿ

Suvarna News   | Asianet News
Published : Oct 16, 2021, 01:09 PM ISTUpdated : Oct 16, 2021, 03:47 PM IST
Bio Bubble: ಫೋಟೋ ಮೂಲಕ ಬಯೋ ಬಬಲ್‌ ಕಷ್ಟ ವಿವರಿಸಿದ ವಿರಾಟ್‌ ಕೊಹ್ಲಿ

ಸಾರಾಂಶ

* ಕೋವಿಡ್ ಭೀತಿಯಿಂದ ಬಯೋ ಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು * ಬಯೋ ಬಬಲ್‌ನೊಳಗಿನ ಬದುಕನ್ನು ಹಾಸ್ಯಮಯವಾಗಿ ಪರಿಚಯಿಸಿದ ವಿರಾಟ್ ಕೊಹ್ಲಿ * ಕುರ್ಚಿ ಮೇಲೆ ಕುಳಿತು ಹಗ್ಗದಿಂದ ಕಟ್ಟಿಹಾಕಿರುವ ಫೋಟೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ದುಬೈ(ಅ.16): ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆಟಗಾರರು, ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಸದ್ಯ ಕ್ರೀಡೆಗಳು ಬಯೋಬಬಲ್‌ (Bio Bubble) ನಲ್ಲಿ ನಡೆಯುತ್ತಿದೆ. ಆದರೆ ಬಯೋಬಬಲ್‌ನಲ್ಲಿನ ಜೀವನ ಎಷ್ಟು ಕಷ್ಟ ಎನ್ನುವುದನ್ನು ಟೀಂ ಇಂಡಿಯಾ (Team India) ನಾಯಕ ವಿರಾಟ್‌ ಕೊಹ್ಲಿ (Virat Kohli) ಫೋಟೋವೊಂದರ ಮೂಲಕ ವಿವರಿಸಿದ್ದಾರೆ. 

ಶುಕ್ರವಾರ (ಅ.16) ತಮ್ಮನ್ನು ಕುರ್ಚಿಯೊಂದಕ್ಕೆ ಹಗ್ಗದಿಂದ ಕಟ್ಟಿಹಾಕಿರುವ ಫೋಟೋ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಅವರು, ಬಯೋಬಬಲ್‌ ಒಳಗಿನ ಆಟ ಈ ರೀತಿ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಿಂಗಳುಗಳ ಕಾಲ ಆಟಗಾರರು ಬಯೋಬಬಲ್‌ನಿಂದ ಹೊರಬರಲಾಗದೇ ಅನುಭವಿಸುವ ಕಷ್ಟವನ್ನು ವಿವರಿಸಿಸಿದ್ದಾರೆ. ಈ ಫೋಟೋ ಭಾರೀ ವೈರಲ್‌ ಆಗಿದೆ.

ವಿರಾಟ್ ಕೊಹ್ಲಿ ಸದ್ಯ ಯುಎಇನಲ್ಲಿದ್ದು, ಮುಂಬರುವ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೋವಿಡ್ 19 (Covid 19) ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿತ್ತು. ಯುಎಇನಲ್ಲಿ ಐಪಿಎಲ್‌ ಆರಂಭವಾಗುವುದಕ್ಕಿಂತ ಮುನ್ನ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್‌ನಲ್ಲಿ ದೀರ್ಘಕಾಲಿಕ ಟೆಸ್ಟ್ ಸರಣಿಯನ್ನಾಡಿ ಆ ಬಯೋ ಬಬಲ್‌ನಿಂದ ಯುಎಇಗೆ ತೆರಳಿ ಕ್ವಾರಂಟೈನ್ ಅವಧಿ ಮುಗಿಸಿ ಬಯೋ ಬಬಲ್‌ ಮುಗಿಸಿದ್ದು. ಇದಾದ ಬಳಿಕ ಐಪಿಎಲ್‌ಗಾಗಿ ಒಂದು ತಿಂಗಳು ಕಾಲ ಮತ್ತೆ ಬಯೋ ಬಬಲ್‌ನಲ್ಲಿದ್ದರು. ಇದಾದ ಬಳಿಕ ಟಿ20 ವಿಶ್ವಕಪ್ ಆಡಲು ಬಯೋ ಬಬಲ್ ಕೂಡಿಕೊಂಡಿದ್ದಾರೆ.

2012ರ ಐಪಿಎಲ್‌ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸ್ಸನ್ನು ಮತ್ತೊಮ್ಮೆ ಕೈಚೆಲ್ಲಿತು. ವಿರಾಟ್ ಕೊಹ್ಲಿ ಆರ್‌ಸಿಬಿ (RCB) ತಂಡದ ನಾಯಕತ್ವದ ಕೆಳಗಿಳಿದಿರುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ಮುಂಬರುವ ಟ20 ವಿಶ್ವಕಪ್ ಬಳಿಕ ಕೊಹ್ಲಿ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ.

IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದ್ದು, ಇದಾದ ಬಳಿಕ ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

2007ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಲು ಯಶಸ್ವಿಯಾಗಿಲ್ಲ. ಇದೀಗ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿದೆ. ಮಹೇಂದ್ರ ಸಿಂಗ್ ಧೋನಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಮೆಂಟರ್ ಆಗಿರುವುದು ಭಾರತ ಕ್ರಿಕೆಟ್ ತಂಡದ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಮಣಿಸಿ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿರಾಟ್ ಕೊಹ್ಲಿ ಪಡೆಯ ಶಕ್ತಿ ಹಾಗೂ ಎಂ ಎಸ್ ಧೋನಿಯ ಯುಕ್ತಿಯಿಂದ ಕಪ್ ಈ ಸಲಾ ನಮ್ಮದಾಗಲಿದೆ ಎನ್ನುವುದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಕನಸಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು
ಬ್ರೇಕ್ ಅಪ್ ಆಗೋರಿಗೆ ಮೂವ್ ಆನ್ ಆಗೋ ಬೆಸ್ಟ್ ಪಾಠ ಹೇಳಿದ ಸ್ಮೃತಿ ಮಂಧನಾ! ಕೊನೆಗೂ ಮೌನ ಮುರಿದ ಕ್ರಿಕೆಟರ್!