
ಅಡಿಲೇಡ್(ನ.02): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿಂದು ಬಾಂಗ್ಲಾದೇಶ ಹಾಗೂ ಭಾರತ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವರ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಅಕ್ಟೋಬರ್ 02ರಂದು ನಡೆಯಲಿರುವ ಪಂದ್ಯವು ಸೆಮೀಸ್ಗೇರುವ ದೃಷ್ಟಿಯಿಂದ ಟೀಂ ಇಂಡಿಯಾ ಪಾಲಿಗೆ ಈ ಪಂದ್ಯದಲ್ಲಿನ ಗೆಲುವು ಅನಿವಾರ್ಯ ಎನಿಸಿಕೊಂಡಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಚಕ ಸೋಲು ಅನುಭವಿಸುವ ಮೂಲಕ ಆಘಾತ ಅನುಭವಿಸಿದ್ದು, ಇದೀಗ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವು ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ದ ರೋಚಕ ಜಯ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಇದೀಗ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಬಾಂಗ್ಲಾದೇಶ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ರೇಸ್ನಲ್ಲಿಲ್ಲ ಎಂದು ಸ್ವತಃ ತಂಡದ ನಾಯಕ ಶಕೀಬ್ ಅಲ್ ಹಸನ್ ಅಚ್ಚರಿಯ ಹೇಳಿಕೆ ನೀಡಿದ್ದು, ಭಾರತ ಟ್ರೋಫಿ ಗೆಲ್ಲಲು ಬಂದಿದೆ ಎಂದಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಇಲ್ಲಿಗೆ ವಿಶ್ವಕಪ್ ಗೆಲ್ಲಲು ಬಂದಿಲ್ಲ. ಆದರೆ ಭಾರತ ಕಪ್ ಗೆಲ್ಲಲೆಂದೇ ಬಂದಿದೆ. ನಾವು ಭಾರತವನ್ನು ಸೋಲಿಸಿದರೆ ಅಚ್ಚರಿ ಫಲಿತಾಂಶ ಎನಿಸಿಕೊಳ್ಳಲಿದೆ. ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್’ ಎಂದಿದ್ದಾರೆ.
T20 World Cup ಬಾಂಗ್ಲಾ ಚಾಲೆಂಜ್ ಗೆಲ್ಲುತ್ತಾ ಟೀಂ ಇಂಡಿಯಾ
ಭಾರತ ತಂಡವು ವಿಶ್ವಕಪ್ ಟಿ20 ಟೂರ್ನಿಯನ್ನಾಡಲು ಆಸ್ಟ್ರೇಲಿಯಾಗೆ ಬಂದಿಳಿಯುವ ಮುನ್ನ ತವರಿನಲ್ಲಿ ನಡೆದ ಎರಡು ಟಿ20 ಸರಣಿಯನ್ನು ಭಾರತ ಗೆದ್ದು ಬೀಗಿತ್ತು. ಮೊದಲಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ದ ಕೂಡಾ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತ್ತು.
ಇನ್ನು ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಸ್ವತಃ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚರಿಯನ್ನುಂಟು ಮಾಡಿದೆ. ಅಯ್ಯೋ ದೇವರೇ, ಶಕೀಬ್ ಅಲ್ ಹಸನ್ ಹೇಳಿಕೆ ಕೇಳಿ ಅಚ್ಚರಿ ಎನಿಸಿತ್ತು. ಒಂದು ದೇಶದ ನಾಯಕನಾಗಿ ಈ ರೀತಿಯ ಹೇಳಿಕೆ ನೀಡುವುದಕ್ಕಿಂತ ಕ್ರಿಕೆಟ್ ಆಡುವುದನ್ನು ಬಿಡುವುದು ಲೇಸು ಎಂದು ಓರ್ವ ನೆಟ್ಟಿಗ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶಕೀಬ್ ಅಲ್ ಹಸನ್ ಅವರ ಈ ಮಾತು ಒಂದು ರೀತಿ ಪಿಕ್ನಿಕ್ ಮಾಡಲು ಬಂದಿದ್ದೇವೆ ಎಂಬಂತಿದೆ ಎಂದು ಓರ್ವ ನೆಟ್ಟಿಗ ಲೇವಡಿ ಮಾಡಿದ್ದರೇ, ಮತ್ತೊಬ್ಬ ನೆಟ್ಟಿಗ, ಆಡುವುದಕ್ಕಿಂತ ಮುಂಚೆಯೇ ಈತ ಸೋಲೊಪ್ಪಿಕೊಂಡಿದ್ದಾನೆ ಎಂದು ಹಾಸ್ಯ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.