ಇನ್ನು ನಿಧಾನಗತಿ ಬೌಲಿಂಗ್‌ಗೆ ಬೀಳಲಿದೆ 5 ರನ್‌ ಪೆನಾಲ್ಟಿ!

By Kannadaprabha NewsFirst Published Mar 16, 2024, 10:32 AM IST
Highlights

ಪ್ರತಿ ಓವರ್‌ ಆದ ಬಳಿಕ ಕ್ರೀಡಾಂಗಣದಲ್ಲಿರುವ ದೊಡ್ಡ ಪರದೆಯ ಮೇಲೆ 60 ಸೆಕೆಂಡ್‌ಗಳಿಂದ 0 ಸೆಕೆಂಡ್‌ಗಳ ವರೆಗೂ ಹಿಮ್ಮುಖವಾಗಿ ಗಡಿಯಾರ ಓಡಲಿದೆ. 3ನೇ ಅಂಪೈರ್‌ ಈ ಗಡಿಯಾರದ ನಿರ್ವಹಣೆ ಮಾಡಲಿದ್ದಾರೆ.

ದುಬೈ(ಮಾ.16): ಸೀಮಿತ ಓವರ್‌ ಕ್ರಿಕೆಟ್‌ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್‌ ತಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಏಕದಿನ ಹಾಗೂ ಅಂ.ರಾ. ಟಿ20 ಪಂದ್ಯಗಳಲ್ಲಿ ಓವರ್‌ಗಳ ಮಧ್ಯೆ ಕಾಲಮಿತಿಯನ್ನು ಅಳವಡಿಸಲು ನಿರ್ಧರಿಸಿರುವುದಾಗಿ ಐಸಿಸಿ ಶುಕ್ರವಾರ ಘೋಷಿಸಿದೆ. ಇನ್ನಿಂಗ್ಸ್‌ವೊಂದರಲ್ಲಿ ಪ್ರತಿ ಓವರ್‌ ಮುಕ್ತಾಯಗೊಂಡ 60 ಸೆಕೆಂಡ್‌ಗಳಲ್ಲಿ ಮುಂದಿನ ಓವರ್‌ ಆರಂಭಿಸಲು ಬೌಲರ್‌ ವಿಫಲರಾದರೆ ತಂಡಕ್ಕೆ ದಂಡ ಬೀಳಲಿದೆ. 3 ಬಾರಿ 60 ಸೆಕೆಂಡ್‌ ಕಾಲಮಿತಿ ಮೀರಿದರೆ ತಂಡಕ್ಕೆ 5 ರನ್‌ ಪೆನಾಲ್ಟಿ ಹಾಕಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಪ್ರತಿ ಓವರ್‌ ಆದ ಬಳಿಕ ಕ್ರೀಡಾಂಗಣದಲ್ಲಿರುವ ದೊಡ್ಡ ಪರದೆಯ ಮೇಲೆ 60 ಸೆಕೆಂಡ್‌ಗಳಿಂದ 0 ಸೆಕೆಂಡ್‌ಗಳ ವರೆಗೂ ಹಿಮ್ಮುಖವಾಗಿ ಗಡಿಯಾರ ಓಡಲಿದೆ. 3ನೇ ಅಂಪೈರ್‌ ಈ ಗಡಿಯಾರದ ನಿರ್ವಹಣೆ ಮಾಡಲಿದ್ದಾರೆ.

ಕೆಎಸ್‌ಸಿಎ ಇಲೆವೆನ್‌ ಪರ ಆಡಿದ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌

ಜೂ.1ರಿಂದ ಎಲ್ಲಾ ಅಂತಾರಾಷ್ಟ್ರೀಯ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಅಂದರೆ 2024ರ ಟಿ20 ವಿಶ್ವಕಪ್‌ನಲ್ಲಿ ಈ ನಿಯಮ ಜಾರಿಯಲ್ಲಿ ಇರಲಿದೆ.

ಒಂದು ವೇಳೆ ತಂಡ ಮೊದಲು ಬೌಲ್‌ ಮಾಡಿದಾಗ ನಿಯಮ ಉಲ್ಲಂಘನೆಯಾದರೆ, ತಂಡಕ್ಕೆ ಸಿಕ್ಕ ಗುರಿಗೆ 5 ರನ್‌ ಹೆಚ್ಚಿಗೆ ಸೇರ್ಪಡೆಗೊಳಿಸಲಾಗುತ್ತದೆ. ಒಂದು ವೇಳೆ ತಂಡ ಗುರಿ ರಕ್ಷಿಸಿಕೊಳ್ಳುವಾಗ ನಿಯಮ ಉಲ್ಲಂಘನೆಯಾದರೆ, ಎದುರಾಳಿ ತಂಡಕ್ಕೆ ನೀಡಿರುವ ಗುರಿಯಲ್ಲಿ 5 ರನ್‌ ಕಡಿಮೆಗೊಳಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.

ಪ್ರತಿಷ್ಠಿತ ರಣಜಿ ಟ್ರೋಫಿ ಗೆದ್ದ ಮುಂಬೈ ಪಡೆಗೆ ಸಿಕ್ಕ ನಗದು ಬಹುಮಾನ ಎಷ್ಟು?

ಡಿಸೆಂಬರ್‌ 2023ರಿಂದ ಏಪ್ರಿಲ್‌ 2024ರ ವರೆಗೂ ಪ್ರಾಯೋಗಿಕವಾಗಿ ಏಕದಿನ ಹಾಗೂ ಅಂ.ರಾ.ಟಿ20 ಪಂದ್ಯಗಳಲ್ಲಿ ಸ್ಟಾಪ್‌ ಕ್ಲಾಕ್‌ ಬಳಕೆಯಾಗಲಿದೆ ಎಂದು ಡಿಸೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸಭೆ ಬಳಿಕ ಐಸಿಸಿ ಘೋಷಿಸಿತ್ತು. ಈ ಪ್ರಯೋಗ ಈಗಾಗಲೇ ಯಶಸ್ವಿಯಾಗಿದ್ದು, ನಿಯಮದಿಂದಾಗಿ ಬಹುತೇಕ ಇನ್ನಿಂಗ್ಸ್‌ಗಳು ಸಮಯಕ್ಕೆ ಸರಿಯಾಗಿ ಮುಕ್ತಾಯಗೊಂಡಿರುವ ಕಾರಣ ನಿಗದಿತ ಅವಧಿಗೂ ಒಂದು ತಿಂಗಳು ಮೊದಲೇ ಐಸಿಸಿ ಅಧಿಕೃತ ಘೋಷಣೆ ಮಾಡಿದೆ.

ಹೊಸ ನಿಯಮ ಏಕೆ?

ಅಂತಾರಾಷ್ಟ್ರೀಯ ಪಂದ್ಯಗಳು ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳ್ಳುತ್ತಿಲ್ಲ. ಓವರ್‌ಗಳ ನಡುವೆ ತಂಡಗಳು ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದು ಹೆಚ್ಚುತ್ತಿರುವ ಕಾರಣ, ಕಠಿಣ ನಿಯಮವನ್ನು ಜಾರಿ ಮಾಡುವಂತೆ ಅನೇಕರು ಐಸಿಸಿಯನ್ನು ಒತ್ತಾಯಿಸುತ್ತಿದ್ದರು. ಸದ್ಯ ತಂಡಗಳು ನಿಧಾನಗತಿಯಲ್ಲಿ ಬೌಲ್‌ ಮಾಡಿದಾಗ ನಾಯಕ ಅಥವಾ ಇಡೀ ತಂಡಕ್ಕೆ ಪಂದ್ಯದ ಸಂಭಾವನೆಯ ಇಂತಿಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತಿದೆ.

ಆದರೆ ದಂಡವನ್ನು ಆಯಾ ತಂಡಗಳ ಕ್ರಿಕೆಟ್‌ ಬೋರ್ಡ್‌ಗಳು ಪಾವತಿಸುತ್ತವೆ. ಆಟಗಾರರಿಗೆ ಏನೂ ನಷ್ಟವಾಗುವುದಿಲ್ಲ ಎನ್ನುವ ಮಾತಿದೆ. ಇನ್ನು ಇತ್ತೀಚೆಗೆ ಐಸಿಸಿ, ನಿರ್ದಿಷ್ಟ ಸಮಯದೊಳಗೆ ಓವರ್‌ ಮುಗಿಸದಿದ್ದರೆ 30 ಯಾರ್ಡ್‌ ವೃತ್ತದೊಳಗೆ ಒಬ್ಬ ಕ್ಷೇತ್ರರಕ್ಷಕ ಹೆಚ್ಚುವರಿಯಾಗಿ ಇರಬೇಕು ಎನ್ನುವ ನಿಯಮವನ್ನು ಜಾರಿ ಮಾಡಿತ್ತು. ಇಷ್ಟಾದರೂ ತಂಡಗಳು ಓವರ್‌-ರೇಟ್‌ನಲ್ಲಿ ಹಿಂದೆ ಬಿದ್ದಿರುವ ಕಾರಣ ಐಸಿಸಿ ರನ್ ಪೆನಾಲ್ಟಿ ಹಾಕಲು ನಿರ್ಧರಿಸಿದೆ.
 

click me!