
ಮುಂಬೈ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕರಾಗಿ ಶುಭ್ಮನ್ ಗಿಲ್ ಅಧಿಕೃತವಾಗಿ ನೇಮಕವಾಗಿದ್ದಾರೆ. ಜೂನ್ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಶುಭ್ಮನ್ ಗಿಲ್ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ವಿಷಯವನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಇಲ್ಲಿನ ಬಿಸಿಸಿಐ ಕೇಂದ್ರ ಕಚೇರಿಯಲ್ಲಿಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾಗೆ ಹೋಲಿಸಿದ್ರೆ ಶುಭ್ಮನ್ ಗಿಲ್ಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ ಅನುಭವವಿಲ್ಲ. ಹೀಗಾಗಿ ರಾಹುಲ್ ಹಾಗೂ ಬುಮ್ರಾ ಅವರನ್ನು ಕೈಬಿಟ್ಟು ಶುಭ್ಮನ್ ಗಿಲ್ ಅವೆರನ್ನು ಭಾರತ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡಿದ್ದೇಕೆ ಎನ್ನುವುದಕ್ಕೆ ಅಗರ್ಕರ್ ಸ್ಪಷ್ಟ ಉತ್ತರ ನೀಡಿದ್ದಾರೆ.
'ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾದಲ್ಲಿ ನಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಬುಮ್ರಾ ಎಲ್ಲಾ ಟೆಸ್ಟ್ ಪಂದ್ಯಗಳಿಗೂ ಲಭ್ಯವಿರುವುದಿಲ್ಲ. ನಮ್ಮ ಪ್ರಕಾರ ಅವರು ಓರ್ವ ಆಟಗಾರನಾಗಿ ನಮಗೆ ಅವರ ಉಪಸ್ಥಿತಿ ಹೆಚ್ಚು ಅಗತ್ಯವಿದೆ. ನಾಯಕನಾದರೆ ಅವರಿಗೆ 15-16 ಮಂದಿಯನ್ನು ನಿಭಾಯಿಸಲು ಹೆಚ್ಚುವರಿ ಹೊರೆ ಅವರು ಹೊರಬೇಕಾಗುತ್ತದೆ. ಇದು ಅವರಿಗೆ ಹೊರೆಯಾಗಬಾರದು. ಅವರಿಗೆ ಇದು ದೊಡ್ಡ ಸರಣಿ ಆಗುವ ವಿಶ್ವಾಸವಿದೆ. ಅವರು ನಮ್ಮ ತಂಡದ ಪ್ರಮುಖ ಆಟಗಾರ. ಅವರು ಓರ್ವ ಬೌಲರ್ ಆಗಿ ಸಂಪೂರ್ಣ ಫಿಟ್ ಆಗಿರುವುದನ್ನು ಬಯಸುತ್ತೇವೆ ಎಂದು ಅಗರ್ಕರ್ ಹೇಳಿದ್ದಾರೆ.
"ಇನ್ನು ಕೆ ಎಲ್ ರಾಹುಲ್ ವಿಚಾರಕ್ಕೆ ಬಂದರೆ, ಅವರು ಈ ಹಿಂದೆಯೇ ಭಾರತ ಟೆಸ್ಟ್ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾನು ಆ ಸಂದರ್ಭದಲ್ಲಿ ಈ ಹುದ್ದೆಯಲ್ಲಿರಲಿಲ್ಲ. ಅವರಿಗೂ ಈ ಸರಣಿ ಸಾಕಷ್ಟು ಮಹತ್ವದ್ದಾಗುವ ವಿಶ್ವಾಸವಿದೆ. ಆದ್ರೆ ಬುಮ್ರಾ ವಿಚಾರದಲ್ಲಿ ಮಾತ್ರ ಅವರು ಓರ್ವ ಬೌಲರ್ ಆಗಿ ಫಿಟ್ ಆಗಿ ಇರಬೇಕೆಂದು ನಾಯಕತ್ವ ನೀಡಿಲ್ಲ' ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಅಜಿತ್ ಅಗರ್ಕರ್, ಈ ನಾಯಕನ ಆಯ್ಕೆ ಕೇವಲ ಒಂದೆರಡು ಸರಣಿಗೆ ಸೀಮಿತವಾಗಿಲ್ಲ, ದೀರ್ಘಕಾಲದ ಟೆಸ್ಟ್ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
'ಒಂದೆರಡು ಸರಣಿಗಳಿಗೆ ನಾವು ನಾಯಕರನ್ನು ನೇಮಿಸಿಲ್ಲ. ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾಯಕರ ಆಯ್ಕೆ ಮಾಡಲಾಗಿದೆ.ಶುಭ್ಮನ್ ಗಿಲ್ ಸಮಯಕ್ಕೆ ಸರಿಯಾಗಿ ಎಲ್ಲವನ್ನು ಕಲಿತುಕೊಳ್ಳುವ ವಿಶ್ವಾಸವಿದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಇತ್ತೀಚೆಗಿನ ವರ್ಷಗಳನ್ನು ಗಮನಿಸಿದ್ರೆ 25 ವರ್ಷದ ಶುಭ್ಮನ್ ಗಿಲ್, ಭಾರತ ಟೆಸ್ಟ್ ತಂಡದ ನಾಯಕರಾದ ಅತ್ಯಂತ ಕಿರಿಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 2024ರಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಿದ್ದರು. ಇನ್ನು ಇದಷ್ಟೇ ಅಲ್ಲದೇ ಐಪಿಎಲ್ನಲ್ಲಿ ಕಳೆದ ವರ್ಷದಿಂದ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.