
ಬೆಂಗಳೂರು: ಕೆಎಸ್ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಯೋಧಾಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ 5ನೇ ಆವೃತ್ತಿ ಟೂರ್ನಿಯ ಫೈನಲ್ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಎರಡು ಎಸೆತಗಳು ಬಾಕಿ ಇರುವಂತೆಯೇ ಶಿವಮೊಗ್ಗ 4 ವಿಕೆಟ್ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು 8 ವಿಕೆಟ್ಗೆ 185 ರನ್ ಕಲೆಹಾಕಿತು. ಭುವನ್ ರಾಜು 23, ರೋಹನ್ ಪಾಟೀಲ್ 11, ಸಮಿತ್ ದ್ರಾವಿಡ್ 37, ನಾಯಕ ಶುಭಾಂಗ್ ಹೆಗ್ಡೆ 31 ರನ್ ಗಳಿಸಿದರು. ತಂಡ 16 ಓವರ್ ಅಂತ್ಯಕ್ಕೆ 5 ವಿಕೆಟ್ಗೆ 115 ರನ್ ಗಳಿಸಿತ್ತು. ಆದರೆ ಕೊನೆಯಲ್ಲಿ ಅಬ್ಬರಿಸಿದ ವಾಹಿದ್ ಫೈಝಾನ್ ಖಾನ್(8 ಎಸೆತಗಳಲ್ಲಿ 29) ಹಾಗೂ ರೋಹನ್ ನವೀನ್(8 ಎಸೆತಕ್ಕೆ ಔಟಾಗದೆ 25) ದೊಡ್ಡ ಮೊತ್ತ ಕಲೆಹಾಕಲು ನೆರವಾದರು.
ಶಿವಮೊಗ್ಗ ಯೋಧಾಸ್ ಪರ ಧನುಶ್ ಗೌಡ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರನ್ತಾಪ್, ನವೀನ್ ಎಂ.ಜಿ., ಶ್ರೀಶಾ ಆಚಾರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಗುರಿ ಬೆನ್ನತ್ತಿದ ಶಿವಮೊಗ್ಗ ಆರಂಭದಲ್ಲೇ ತುಷಾರ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಸಮಿತ್ ದ್ರಾವಿಡ್ ಎಸೆತದಲ್ಲಿ ಖಾತೆ ತೆರೆಯುವ ಮುನ್ನವೇ ತುಷಾರ್ ಪೆವಿಲಿಯನ್ ಹಾದಿ ಹಿಡಿದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಹಾಗೂ ನಾಯಕ ಲವ್ನಿತ್ ಸಿಸೋಡಿಯಾ ಆಸರೆಯಾದರು. ಅವರು 45 ಎಸೆತಗಳಲ್ಲಿ 87 ರನ್ ಸಿಡಿಸಿ, ತಂಡವನ್ನು 19.4 ಓವರ್ಗಳಲ್ಲಿ ಗೆಲ್ಲುವಂತೆ ಮಾಡಿದರು. ಕೆ.ವಿ.ಅನೀಶ್ 19 ಎಸೆತಕ್ಕೆ 38 ರನ್ ಕೊಡುಗೆ ನೀಡಿದರು. ಇನ್ನುಳಿದಂತೆ ನವೀನ್ ಎಂ.ಜಿ. 28 ಹಾಗೂ ಹರ್ಷಿಲ್ ಧರ್ಮಾನಿ 17 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
What a finish! 🔥 Shivamogga Yodhas held their nerve in a thrilling chase, sealing a 4-wicket victory with two balls to spare. 👏🏆#MaharajaTrophyKSCA2026 #ಆಡಕ್ಕೂರೆಡಿಆಳಕ್ಕೂರೆಡಿ #NammaRajaNammaCricket #GrandFinal #MatchResult pic.twitter.com/wqkpBWjmiO
— Maharaja Trophy T20 (@maharaja_t20) July 12, 2026
ಇನ್ನು ಬೆಂಗಳೂರು ಬ್ಲಾಸ್ಟರ್ಸ್ ಪರವಾಗಿ ಮಧ್ಯಮ ವೇಗದ ಬೌಲರ್ ಸಮಿತ್ ದ್ರಾವಿಡ್ ಮಿಂಚಿನ ದಾಳಿ ನಡೆಸುವ ಮೂಲಕ ಫೈನಲ್ನಲ್ಲಿ ಗಮನ ಸೆಳೆದರು. ಸಮಿತ್ ದ್ರಾವಿಡ್ 3.4 ಓವರ್ನಲ್ಲಿ 36 ರನ್ ನೀಡಿ ಶಿವಮೊಗ್ಗ ತಂಡದ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆದರೆ ಉಳಿದ ಬೌಲರ್ಗಳಿಂದ ಸಮಿತ್ಗೆ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಸಮಿತ್ ಹೋರಾಟ ವ್ಯರ್ಥವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.