Ind vs Ban: ಭಾರತ ಎದುರಿನ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ, ಸ್ಟಾರ್ ಆಲ್ರೌಂಡರ್‌ಗೆ ಸ್ಥಾನ..!

By Naveen KodaseFirst Published Nov 25, 2022, 11:55 AM IST
Highlights

ಭಾರತ ಎದುರಿನ ಏಕದಿನ ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ
ಬಾಂಗ್ಲಾದೇಶ ತಂಡ ಕೂಡಿಕೊಂಡ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್
ಡಿಸೆಂಬರ್ 04ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭ

ಢಾಕಾ(ನ.25): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಡಿಸೆಂಬರ್ 04ರಿಂದ ಆರಂಭವಾಗಲಿದ್ದು, ಈ ಸರಣಿಗೆ ಆತಿಥೇಯ ಬಾಂಗ್ಲಾದೇಶದ 16 ಆಟಗಾರರನ್ನೊಳಗೊಂಡ ತಂಡ ಪ್ರಕಟವಾಗಿದೆ. ಅನುಭವಿ ಬ್ಯಾಟರ್ ತಮೀಮ್ ಇಕ್ಬಾಲ್, ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದು, ತಾರಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ತಂಡ ಕೂಡಿಕೊಂಡಿದ್ದಾರೆ.

ಹೌದು, ಈ ವರ್ಷದ ಜುಲೈ-ಆಗಸ್ಟ್‌ ತಿಂಗಳಿನಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಸರಣಿಯಿಂದ ಶಕೀಬ್ ಅಲ್ ಹಸನ್ ಹೊರಗುಳಿದಿದ್ದರು. ಇದೀಗ 2023ರ ಏಕದಿನ ವಿಶ್ವಕಪ್ ಸಿದ್ದತೆಯಲ್ಲಿರುವ ಬಾಂಗ್ಲಾದೇಶ ತಂಡಕ್ಕೆ ಶಕೀಬ್ ಅಲ್ ಹಸನ್ ಸೇರ್ಪಡೆ ಬಾಂಗ್ಲಾ ಪಡೆಯ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನು ಬಾಂಗ್ಲಾದೇಶದ ಪ್ರಮುಖ ಆಟಗಾರರಾದ ಮೊಸದ್ದೇಕ್ ಹೊಸೈನ್, ಶೌರಿಫುಲ್ಲಾ ಇಸ್ಲಾಂ ಹಾಗೂ ತೈಜುಲ್ ಇಸ್ಲಾಂ, ಭಾರತ ಎದುರಿನ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಮೊಸದ್ದೇಕ್ ಹೊಸೈನ್ ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಿಂದ ಬಳಲಿದ್ದರು. 26 ವರ್ಷದ ಮೊಸದ್ದೇಕ್, ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ 5 ಪಂದ್ಯಗಳನ್ನಾಡಿ ಕೇವಲ 9.50 ಬ್ಯಾಟಿಂಗ್ ಸರಾಸರಿಯಲ್ಲಿ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

India Tour of Bangladesh: ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯಿಂದ ಜಡ್ಡು, ಯಶ್ ದಯಾಳ್ ಔಟ್..!

ಇನ್ನು ಜಿಂಬಾಬ್ವೆ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಎಬೊದತ್ ಹೊಸೈನ್, ಭಾರತ ಎದುರಿನ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಾಂಗ್ಲಾದೇಶ ಕ್ರಿಕೆಟ್‌ ಲೀಗ್ ಏಕದಿನ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಯಾಸಿರ್ ಅಲಿ, ಬಾಂಗ್ಲಾದೇಶ 16 ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ಎದುರಿನ ಸರಣಿಗೆ ಬಾಂಗ್ಲಾದೇಶ ತಂಡ ಹೀಗಿದೆ ನೋಡಿ:

ತಮಿಮ್ ಇಕ್ಬಾಲ್(ನಾಯಕ), ಲಿಟನ್ ದಾಸ್, ಅನ್ಮುಲ್ ಹಕ್, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ, ಅಫಿಫ್ ಹೊಸೈನ್, ಯಾಸಿರ್ ಅಲಿ, ಮೆಹದಿ ಹಸನ್, ಮುಷ್ತಾಫಿಜುರ್ ರೆಹಮಾನ್, ಟಸ್ಕಿನ್ ಅಹಮದ್, ಹಸನ್ ಮೊಹಮೂದ್, ಎಬಾದತ್ ಹೊಸೈನ್, ನಸುಮ್ ಅಹಮದ್, ಮೆಹಮೂದ್ ಉಲ್ಲಾಹ್, ನಜ್ಮುಲ್ ಹೊಸೈನ್ ಶಾಂಟೊ, ನೂರುಲ್ ಹಸನ್ ಸೋಹನ್.

ಇನ್ನು ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ಹಾಗೂ ಯಶ್ ದಯಾಳ್ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಜಡೇಜಾಗೆ ಮತ್ತಷ್ಟು ವಿಶ್ರಾಂತಿ ನೀಡಲಾಗಿದೆ. ಇನ್ನು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಯಶ್ ದಯಾಳ್ ಕೂಡಾ, ಬಾಂಗ್ಲಾದೇಶ ಎದುರಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ರವೀಂದ್ರ ಜಡೇಜಾ ಬದಲಿಗೆ ಶಹಬಾಜ್ ಅಹಮದ್ ಹಾಗೂ ಯಶ್ ದಯಾಳ್ ಬದಲಿಗೆ ವೇಗಿ ಕುಲ್ದಿಪ್ ಸೆನ್‌ಗೆ  ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ ಹೀಗಿದೆ ನೋಡಿ

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್, ಶಹಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ದೀಪ್ ಸೆನ್.

click me!