ಹೆಲ್ಮೆಟ್‌ಗೆ ಅಪ್ಪಳಿಸಿದ ಚೆಂಡು, ಗೌತಮ್‌ ಗಂಭೀರ್ ಯೋಗಕ್ಷೇಮ ವಿಚಾರಿಸಿದ ಶಾಹಿದ್ ಅಫ್ರಿದಿ..!

Published : Mar 11, 2023, 09:56 AM IST
ಹೆಲ್ಮೆಟ್‌ಗೆ ಅಪ್ಪಳಿಸಿದ ಚೆಂಡು, ಗೌತಮ್‌ ಗಂಭೀರ್ ಯೋಗಕ್ಷೇಮ ವಿಚಾರಿಸಿದ ಶಾಹಿದ್ ಅಫ್ರಿದಿ..!

ಸಾರಾಂಶ

ಕ್ರಿಕೆಟ್ ಬದ್ದ ಎದುರಾಳಿಗಳ ಸಮಾಗಮಕ್ಕೆ ಸಾಕ್ಷಿಯಾದ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಗೌತಮ್ ಗಂಭೀರ್ ಯೋಗಕ್ಷೇಮ ವಿಚಾರಿಸಿದ ಶಾಹಿದ್ ಅಫ್ರಿದಿ ಇಂಡಿಯಾ ಮಹಾರಾಜಾಸ್‌ ಹಾಗೂ ಏಷ್ಯಾ ಲಯನ್ಸ್ ನಡುವಿನ ಪಂದ್ಯದ ವೇಳೆ ಘಟನೆ

ನವದೆಹಲಿ(ಮಾ.11): ಕ್ರಿಕೆಟ್‌ ಆಡುವಾಗ ಮೈದಾನದಲ್ಲಿ ಸದಾ ಬದ್ದ ವೈರಿಗಳಂತೆ ಸೆಣಸಾಡುವ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ, ಇದೀಗ ಅಚ್ಚರಿಯ ರೀತಿಯಲ್ಲಿ ಒಂದಾಗಿದ್ದಾರೆ. ಈ ಅಪರೂಪದ ಸನ್ನಿವೇಷಕ್ಕೆ ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಟಿ20 ಟೂರ್ನಿಯ ಇಂಡಿಯಾ ಮಹಾರಾಜಾಸ್ ಹಾಗೂ ಏಷ್ಯಾ ಲಯನ್ಸ್‌ ನಡುವಿನ ಪಂದ್ಯ ಸಾಕ್ಷಿಯಾಯಿತು.

ಗೌತಮ್‌ ಗಂಭೀರ್ ಜತೆಗೆ ಶಾಹಿದ್ ಅಫ್ರಿದಿ ಹೆಸರು ಕೇಳಿ ಬಂತೆಂದರೇ, ಅಲ್ಲಿ ಒಳ್ಳೆಯ ಘಟನೆಗಳಿಗಿಂತ ಪೈಪೋಟಿ, ಟೀಕೆಯ ಸುದ್ದಿಗಳೇ ಸಾಮಾನ್ಯವಾಗಿ ಕೇಳಿ ಬಂದಿವೆ. ಭಾರತ ಹಾಗೂ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗರೆನಿಸಿಕೊಂಡಿರುವ ಈ ಇಬ್ಬರು, ಇಂಡೋ-ಪಾಕ್ ಪಂದ್ಯವೇ ಇರಲಿ ಅಥವಾ ಮೈದಾನದಾಚೆಗೆ ಇರಲಿ. ಇಬ್ಬರೂ ಒಬ್ಬರನ್ನೊಬ್ಬರು ಕಾಲೆಳೆಯುವುದು ಸರ್ವೇ ಸಾಮಾನ್ಯ ಎನ್ನುವುದು ಪ್ರತಿ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸರ್ವೇಸಾಮಾನ್ಯವಾದ ವಿಚಾರ. ಹೀಗಿರುವಾಗ. ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಒಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಹೌದು, ಏಷ್ಯಾ ಲಯನ್ಸ್ ಎದುರು ಸವಾಲಿನ ಗುರಿ ಬೆನ್ನತ್ತಿದ ಇಂಡಿಯಾ ಮಹಾರಾಜಾಸ್‌ ಪರ ಗಂಭೀರ್ ಬ್ಯಾಟಿಂಗ್‌ ಮಾಡುತ್ತಿದ್ದರು. 12ನೇ ಓವರ್ ಬೌಲಿಂಗ್‌ ಮಾಡುತ್ತಿದ್ದ ಅಬ್ದುಲ್ ರಜಾಕ್ ಎಸೆದ ಚೆಂಡನ್ನು ಗಂಭೀರ್, ಫೈನ್‌ಲೆಗ್‌ನತ್ತ ಬೌಂಡರಿ ಬಾರಿಸುವ ಪ್ರಯತ್ನ ನಡೆಸಿದರು. ಆದರೆ ಚೆಂಡು ಗಂಭೀರ್ ಬ್ಯಾಟ್ ಅಂಚನ್ನು ಸವುರಿ ನೇರವಾಗಿ ಅವರ ಹೆಲ್ಮೆಟ್‌ಗೆ ಅಪ್ಪಳಿಸಿತು. ಆದರೆ ಗೌತಮ್‌ಗೆ ಅಂತಹ ಗಂಭೀರವಾದ ಪೆಟ್ಟಾಗಲಿಲ್ಲ. ಈ ಸಂದರ್ಭದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಏಷ್ಯಾ ಲಯನ್ಸ್ ತಂಡದ ನಾಯಕ ಶಾಹಿದ್ ಅಫ್ರಿದಿ, ಗಂಭೀರ್ ಬಳಿ ತೆರಳಿ, ಎಲ್ಲವೂ ಓಕೆನಾ? ಏನು ತೊಂದರೆಯಿಲ್ಲ ತಾನೆ ಎಂದು ಯೋಗಕ್ಷೇಮ ವಿಚಾರಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಇಂಡಿಯಾ ಮಹಾರಾಜಾಸ್‌ಗೆ ಸೋಲುಣಿಸಿದ ಏಷ್ಯಾ ಲಯನ್ಸ್‌: 

ಇಂಡಿಯಾ ಮಹಾರಾಜಾಸ್ ಹಾಗೂ ಏಷ್ಯಾ ಲಯನ್ಸ್ ನಡುವಿನ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ನೇತೃತ್ವದ ಏಷ್ಯಾ ಲಯನ್ಸ್‌ ತಂಡವು 9 ರನ್‌ಗಳ ರೋಚಕ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಏಷ್ಯಾ ಲಯನ್ಸ್‌ ತಂಡವು, ಮಿಸ್ಬಾ ಉಲ್‌ ಹಕ್(73) ಸ್ಪೋಟಕ ಅರ್ಧಶತಕ ಹಾಗೂ ಉಪುಲ್ ತರಂಗಾ(40) ಮಿಂಚಿನ ಬ್ಯಾಟಿಂಗ್ ನೆರವಿನಿಂದ 165 ರನ್‌ಗಳನ್ನು ಕಲೆಹಾಕಿತು. ಇಂಡಿಯಾ ಮಹರಾಜಾಸ್‌ ಪರ ಸ್ಟುವರ್ಟ್‌ ಬಿನ್ನಿ ಹಾಗೂ ಪರ್ವೀಂದರ್ ಅವಾನಾ ತಲಾ ಎರಡು ವಿಕೆಟ್ ಪಡೆದರು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಡಿಯಾ ಮಹಾರಾಜಾಸ್‌ ತಂಡವು ಆರಂಭದಲ್ಲಿಯೇ ವಿಕೆಟ್ ಕೀಪರ್ ಬ್ಯಾಟರ್‌ ರಾಬಿನ್ ಉತ್ತಪ್ಪ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಉತ್ತಪ್ಪ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಗೌತಮ್‌ ಗಂಭೀರ್ 39 ಎಸೆತಗಳಲ್ಲಿ 54 ರನ್ ಸಿಡಿಸಿದರಾದರೂ, ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದ ಹಿನ್ನೆಲೆಯಲ್ಲಿ 9 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?
ಕ್ರಿಕೆಟ್ ವರ್ಲ್ಡ್ ಕಪ್ ದಿಕ್ಕನ್ನೇ ಬದಲಿಸಿದ ಮ್ಯಾಜಿಕಲ್ 3 ಕ್ಯಾಚ್‌ಗಳನ್ನು ನೆನಪಿಸಿದ ಅಕ್ಷರ್ ಪಟೇಲ್!