ಯುವ ಕ್ರಿಕೆಟಿಗ ತಿಲಕ್‌ ವರ್ಮಾ ಫಿಫ್ಟಿ ತಪ್ಪಿಸಿದ ಸ್ವಾರ್ಥಿ ಪಾಂಡ್ಯ..! ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್

Published : Aug 10, 2023, 12:41 PM ISTUpdated : Aug 10, 2023, 12:55 PM IST
ಯುವ ಕ್ರಿಕೆಟಿಗ ತಿಲಕ್‌ ವರ್ಮಾ ಫಿಫ್ಟಿ ತಪ್ಪಿಸಿದ ಸ್ವಾರ್ಥಿ ಪಾಂಡ್ಯ..! ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್

ಸಾರಾಂಶ

ಸಿಕ್ಸರ್ ಚಚ್ಚಿ ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿದ ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ ಓರ್ವ ಸ್ವಾರ್ಥಿ ಎಂದು ಟೀಕಿಸಿದ ನೆಟ್ಟಿಗರು ನಿಸ್ವಾರ್ಥಿ ಧೋನಿಯನ್ನು ನೋಡಿ ಕಲಿಯಿರಿ ಎಂದು ಕಿವಿಹಿಂಡಿದ ಫ್ಯಾನ್ಸ್

ಪ್ರಾವಿಡೆನ್ಸ್‌(ಆ.10): ವೆಸ್ಟ್ ಇಂಡೀಸ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಹೀಗಿದ್ದೂ ಹಾರ್ದಿಕ್ ಪಾಂಡ್ಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಕೆಲವರು ಕ್ಯಾಪ್ಟನ್ ಕೂಲ್ ಧೋನಿಯನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.

ಗಯಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು ವೆಸ್ಟ್ ಇಂಡೀಸ್ ನೀಡಿದ್ದ 159 ರನ್‌ಗಳ ಗುರಿ ಬೆನ್ನತ್ತಿತ್ತು. ಈ ವೇಳೆ 17.4 ಓವರ್‌ಗಳಲ್ಲಿ 158 ರನ್‌ ಗಳಿಸಿದ್ದ ಭಾರತಕ್ಕೆ ಗೆಲುವಿಗೆ ಕೇವಲ 2 ರನ್‌ ಅಗತ್ಯವಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ ನಾನ್‌ ಸ್ಟ್ರೈಕ್‌ನಲ್ಲಿದ್ದ ತಿಲಕ್‌ ವರ್ಮಾಗೆ ಅರ್ಧಶತಕ ಬಾರಿಸಲು ಹಾರ್ದಿಕ್ ಪಾಂಡ್ಯ ಅವಕಾಶ ನೀಡಿಲ್ಲವೆಂದು ಹಲವರು ಟೀಕಿಸಿದ್ದಾರೆ

ವೆಸ್ಟ್‌ ಇಂಡೀಸ್ ಎದುರಿನ ಮೊದಲೆರಡು ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ತೋರಿದ್ದ ತಿಲಕ್ ವರ್ಮಾ, ವೆಸ್ಟ್ ಇಂಡೀಸ್ ಎದಿರಿನ ಮೂರನೇ ಟಿ20 ಪಂದ್ಯದಲ್ಲಿ ಕೇವಲ 37 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 49 ರನ್‌ ಬಾರಿಸಿದರು. ಆದರೆ ಸರಣಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸುವ ಅವಕಾಶವನ್ನು ಹಾರ್ದಿಕ್ ಪಾಂಡ್ಯ ತಪ್ಪಿಸಿದರು.

Asia Cup 2023: ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು..! ಇತಿಹಾಸದಲ್ಲೇ ಮೊದಲು, ಜೆರ್ಸಿ ಫೋಟೋ ವೈರಲ್

ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯದಲ್ಲಿ ತಿಲಕ್ ವರ್ಮಾ ಅವರಿಗೆ ಅರ್ಧಶತಕ ಸಿಡಿಸಲು ಅವಕಾಶ ಬಾರಿಸಲು ಹಾರ್ದಿಕ್ ಪಾಂಡ್ಯ ಅವಕಾಶ ನೀಡಬೇಕಿತ್ತು ಎಂದಿತ್ತು. ಇದಷ್ಟೇ ಅಲ್ಲದೇ ಹಲವು ನೆಟ್ಟಿಗರು ಹಾರ್ದಿಕ್ ಪಾಂಡ್ಯ ಅವರನ್ನು ಸ್ವಾರ್ಥಿ ಎಂದು ಜರಿದಿದ್ದಾರೆ. ಪಂದ್ಯದಲ್ಲಿ ಇನ್ನೂ 13 ಎಸೆತ ಬಾಕಿ ಇತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. 

ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್‌..!

2014ರಲ್ಲಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕಾಂಗಿಯಾಗಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದ್ದರು. ಈ ಸಂದರ್ಭದಲ್ಲಿ ಧೋನಿ ಕ್ರೀಸ್‌ಗಿಳಿದಾಗ ಟೀಂ ಇಂಡಿಯಾ ಗೆಲ್ಲಲು 7 ಎಸೆತಗಳಲ್ಲಿ ಕೇವಲ ಒಂದು ರನ್ ಅಗತ್ಯವಿತ್ತು. ಆಗ ಧೋನಿ ಬೌಂಡರಿ ಬಾರಿಸಬಹುದಿತ್ತು. ಆದರೆ ಕ್ಯಾಪ್ಟನ್ ಕೂಲ್ ಹಾಗೆ ಮಾಡಲಿಲ್ಲ, ಬದಲಾಗಿ ಚೆಂಡನ್ನು ರಕ್ಷಣಾತ್ಮಕವಾಗಿ ಆಡುವ ಮೂಲಕ ಕೊಹ್ಲಿ ಸ್ಟ್ರೈಕ್‌ಗೆ ಬರುವಂತೆ ನೋಡಿಕೊಂಡರು. ಆಗ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿದ್ದರು. ಓವರ್ ಮುಕ್ತಾಯದ ಬಳಿಕ ಧೋನಿ, ಕೊಹ್ಲಿಗೆ ನೀನೇ ಮ್ಯಾಚ್ ಫಿನೀಶ್ ಮಾಡು ಎಂದು ಪ್ರೋತ್ಸಾಹಿಸಿದ್ದರು. ಇದೀಗ ಹಾರ್ದಿಕ್ ಪಾಂಡ್ಯ ಮಾಡಿದ ಸ್ವಾರ್ಥದ ನಡೆಯನ್ನು ನೆಟ್ಟಿಗರು ಟೀಕಿಸಿದ್ದು ಮಾತ್ರವಲ್ಲದೇ, ನಾಯಕರೆನಿಸಿಕೊಂಡವರು ಹೀಗಿರಬೇಕು ಎಂದು ಧೋನಿಯ ನಡೆಯನ್ನು ಸ್ಮರಿಸಿಕೊಂಡಿದ್ದಾರೆ.

ಸೂರ್ಯನಬ್ಬರಕ್ಕೆ ಕರಗಿದ ವೆಸ್ಟ್‌ ಇಂಡೀಸ್‌; ಟೀಂ ಇಂಡಿಯಾಗೆ ಮೊದಲ ಟಿ20 ಗೆಲುವು..!

ಇನ್ನು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್ ಶತಕದ ಹೊಸ್ತಿಲಲ್ಲಿ ಇದ್ದಾಗಲೂ ಕೂಡಾ ಇದೇ ರೀತಿ ರಕ್ಷಣಾತ್ಮಕವಾಗಿ ಆಡುವ ಮೂಲಕ ಯುವ ಕ್ರಿಕೆಟಿಗನನ್ನು ಬೆಂಬಲಿಸಿದ್ದರು.

ಹೇಗಿತ್ತು ಭಾರತ-ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯ?

ನಾಯಕ ರೋವ್ಮನ್‌ ಪೋವೆಲ್‌(19 ಎಸೆ​ತ​ದಲ್ಲಿ 40 ರನ್‌)ರ ವೀರಾ​ವೇ​ಶದ ನೆರ​ವಿ​ನಿಂದ ವಿಂಡೀಸ್‌ 5 ವಿಕೆಟ್‌ಗೆ 159 ರನ್‌ ಕಲೆಹಾಕಿ, ಭಾರ​ತಕ್ಕೆ ಸ್ಪರ್ಧಾ​ತ್ಮಕ ಗುರಿ ನೀಡಿತು. ಪಾದಾ​ರ್ಪಣಾ ಪಂದ್ಯ​ದಲ್ಲಿ ಯಶಸ್ವಿ ಜೈಸ್ವಾಲ್‌ ಕೇವಲ 1 ರನ್‌ಗೆ ಔಟಾ​ದರೆ, ಗಿಲ್‌(11 ಎಸೆ​ತ​ದಲ್ಲಿ 6 ರನ್‌) ಮತ್ತೊಮ್ಮೆ ವೈಫಲ್ಯ ಕಂಡರು. ಆದರೆ ಸೂರ್ಯ ಹಾಗೂ ತಿಲಕ್‌ ವರ್ಮಾ, ವಿಂಡೀಸ್‌ ಬೌಲರ್‌ಗಳನ್ನು ದಂಡಿ​ಸಿ​ದರು.

ಸಣ್ಣಗೆ ಮಳೆ ಬೀಳು​ತ್ತಿದ್ದ ಕಾರಣ, ಮೊದಲು 5 ಓವರ್‌ ಮುಕ್ತಾ​ಯಕ್ಕೆ ಡಕ್ವರ್ತ್‌ ಲೂಯಿಸ್‌ ನಿಯ​ಮ​ದ​ನ್ವಯ ಬೇಕಿದ್ದ ಗುರಿ ದಾಟು​ವುದು ಭಾರ​ತದ ಉದ್ದೇ​ಶ​ವಾ​ಗಿ​ತ್ತು. ಹೀಗಾಗಿ ತಿಲಕ್‌ ಕ್ರೀಸ್‌ಗಿಳಿ​ಯು​ತ್ತಿ​ದ್ದಂತೆ ಸತತ 2 ಬೌಂಡರಿ ಬಾರಿಸಿದರು. 5 ಓವ​ರಲ್ಲಿ ಭಾರತ 40 ರನ್‌ ಗಳಿ​ಸ​ಬೇ​ಕಿತ್ತು. ತಂಡ 2 ವಿಕೆಟ್‌ಗೆ 43 ರನ್‌ ಕಲೆಹಾಕಿ ಮುಂದಿತ್ತು.

ಪವರ್‌-ಪ್ಲೇ ಮುಕ್ತಾ​ಯಕ್ಕೆ 60 ರನ್‌ ಚಚ್ಚಿದ ಭಾರತ, ವಿಂಡೀಸ್‌ಗೆ ಪುಟಿ​ದೇ​ಳಲು ಬಿಡ​ಲಿಲ್ಲ. ಸೂರ್ಯ 23 ಎಸೆ​ತ​ದಲ್ಲಿ ಅರ್ಧ​ಶ​ತಕ ಪೂರೈಸಿ ಶತ​ಕದತ್ತ ಮುನ್ನು​ಗ್ಗಿ​ದರು. ಆದರೆ 83 ರನ್‌ (44 ಎಸೆತ, 10 ಬೌಂಡರಿ, 4 ಸಿಕ್ಸರ್‌) ಗಳಿ​ಸಿ​ದ್ದಾಗ ಅವರ ಇನ್ನಿಂಗ್‌್ಸಗೆ ತೆರೆ ಬಿತ್ತು. ತಿಲಕ್‌ ಜೊತೆ 50 ಎಸೆ​ತ​ದಲ್ಲಿ 87 ರನ್‌ಗಳ ಜೊತೆ​ಯಾಟವೂ ಕೊನೆ​ಗೊಂಡಿ​ತು. ತಿಲಕ್‌(49*), ಹಾರ್ದಿಕ್‌(20*) ಭಾರ​ತ​ವನ್ನು 13 ಎಸೆತ ಬಾಕಿ ಇರು​ವಂತೆ​ಯೇ ದಡ ಸೇರಿ​ಸಿ​ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?