ಸರ್ಫರಾಜ್‌ ಖಾನ್‌ಗೆ ಮುಳುವಾಯ್ತಾ ಚೇತನ್ ಶರ್ಮಾ ಮುಂದೆ ಮಾಡಿದ ಅಗ್ರೆಸಿವ್ ಸೆಲಿಬ್ರೇಷನ್‌..?

By Naveen KodaseFirst Published Jun 26, 2023, 2:29 PM IST
Highlights

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸರ್ಫರಾಜ್ ಖಾನ್ ಮತ್ತೊಮ್ಮೆ ವಿಫಲ
ಮುಂಬೈ ಪ್ರತಿಭಾನ್ವಿಯ ಬ್ಯಾಟರ್ ಕಡೆಗಣಿಸಿದ ಬಿಸಿಸಿಐ ಆಯ್ಕೆ ಸಮಿತಿ
ಸರ್ಫರಾಜ್ ಖಾನ್ ಆಕ್ರಮಣಕಾರಿ ಸೆಲಿಬ್ರೇಷನ್‌ ಈಗ ವೈರಲ್‌

ನವದೆಹಲಿ(ಜೂ.26): ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ಟೆಸ್ಟ್ ತಂಡದ ಕದ ತಟ್ಟುತ್ತಾ ಬಂದಿರುವ ಸರ್ಫರಾಜ್ ಖಾನ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಋತುರಾಜ್ ಗಾಯಕ್ವಾಡ್‌ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ಮುಂಬರುವ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಕಳೆದ ಮೂರು ರಣಜಿ ಟ್ರೋಫಿ ಸೀಸನ್‌ನಲ್ಲಿ ರನ್‌ ರಾಶಿ ಗುಡ್ಡೆ ಹಾಕಿರುವ ಮುಂಬೈ ಮೂಲದ ಸರ್ಫರಾಜ್ ಖಾನ್‌ ಅವರನ್ನು ಇದೀಗ ಆಯ್ಕೆ ಸಮಿತಿ ಮತ್ತೊಮ್ಮೆ ಕಡೆಗಣಿಸಿದೆ.

ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಚೇತೇಶ್ವರ್ ಪೂಜಾರ ಅವರನ್ನು ಕೈಬಿಡಲಾಗಿದೆ. ಆದರೆ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ಋತುರಾಜ್ ಗಾಯಕ್ವಾಡ್‌ ಅವರಿಗೆ ಮಣೆ ಹಾಕಲಾಗಿದೆಯಾದರೂ, ಆಯ್ಕೆಗೆ ಲಭ್ಯವಿದ್ದ ಸರ್ಫರಾಜ್ ಖಾನ್ ಅವರನ್ನು ಆಯ್ಕೆಗಾರರು ಆಯ್ಕೆ ಮಾಡದ ಕುರಿತಂತೆ ಹಲವು ಹಿರಿಯ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಫಿಟಿಐ ವರದಿಯೊಂದರ ಪ್ರಕಾರ, ಮೈದಾನದಾಚೆಗಿನ ಕೆಲವೊಂದು ವರ್ತನೆಗಳು ಫಾರ್ಮ್‌ನಲ್ಲಿರುವ ಸರ್ಫರಾಜ್ ಖಾನ್ ಅವರನ್ನು ಕಡೆಗಣಿಸಲು ಕಾರಣ ಎಂದೆಲ್ಲ ವರದಿಯಾಗಿದೆ.

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸರ್ಫರಾಜ್ ಖಾನ್ ಇನ್ನೇನು ಮಾಡಬೇಕು ಹೇಳಿ.?

ಪಿಟಿಐ ವರದಿಯ ಪ್ರಕಾರ, 2022-23ರ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಡೆಲ್ಲಿ ಎದುರು ಮುಂಬೈ ಬ್ಯಾಟರ್‌ ಸರ್ಫರಾಜ್ ಖಾನ್ ಆಕರ್ಷಕ ಶತಕ ಸಿಡಿಸಿದ್ದರು. ಆ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಪಂದ್ಯ ವೀಕ್ಷಿಸುತ್ತಿದ್ದರು. ಶತಕ ಸಿಡಿಸಿದ ಖುಷಿಯಲ್ಲಿ ಸರ್ಫರಾಜ್ ಖಾನ್ ಆಕ್ರಮಣಕಾರಿ ರೀತಿಯಲ್ಲಿ ಮೈದಾನದಲ್ಲಿಯೇ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿದ್ದರು. ಈ ಕಾರಣಕ್ಕಾಗಿಯೇ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಸಮಿತಿ ಭಾರತ ತಂಡಕ್ಕೆ ಪರಿಗಣಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇದೀಗ ಸರ್ಫರಾಜ್‌ ಖಾನ್‌ ಅವರ ಆ ಸಂಭ್ರಮಾಚರಣೆಯ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Sarfaraz Khan's aggressive celebration of pointing towards selector Chetan Sharma who was watching the Ranji match from stands didn't go down well. pic.twitter.com/qIZqgAEIi7

— Cricket Videos 🏏 (@Abdullah__Neaz)

ಸರ್ಫರಾಜ್ ಖಾನ್ 2022-23ರ ರಣಜಿ ಟ್ರೋಫಿ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 92.66ರ ಸರಾಸರಿಯಲ್ಲಿ 556 ರನ್ ಬಾರಿಸಿದ್ದರು. ಇನ್ನು ಇಲ್ಲಿಯವರೆಗೆ 37 ಪ್ರಥಮದರ್ಜೆ ಪಂದ್ಯಗಳನ್ನಾಡಿ 3505 ರನ್ ಬಾರಿಸಿದ್ದಾರೆ. ಇನ್ನು 2021-22ರ ರಣಜಿ ಟ್ರೋಫಿ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 122-75ರ ಸರಾಸರಿಯಲ್ಲಿ 982 ರನ್ ಸಿಡಿಸಿದ್ದರು. ಇನ್ನು ಇದಕ್ಕೂ ಮುನ್ನ 2019-20ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಸರ್ಫರಾಜ್ ಖಾನ್ 154.67ರ ಸರಾಸರಿಯಲ್ಲಿ 928 ರನ್ ಬಾರಿಸಿದ್ದರು.

ಭಾರತ ಟೆಸ್ಟ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ವಿಡಿಯೋ ಸಂದೇಶ ರವಾನಿಸಿದ ಚೇತೇಶ್ವರ್ ಪೂಜಾರ..!

ರಣಜಿ ಟ್ರೋಫಿ ಟೂರ್ನಿಯಲ್ಲಿ ಕಳೆದ ಮೂರು ಆವೃತ್ತಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಿರುವುದರ ಹೊರತಾಗಿಯೂ ಸರ್ಫರಾಜ್ ಖಾನ್ ಅವರೀಗ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಸರ್ಫರಾಜ್ ಖಾನ್ ವಿಂಡೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಈ ಕುರಿತಂತೆ ಸುನಿಲ್ ಗವಾಸ್ಕರ್ ಆಯ್ಕೆ ಸಮಿತಿಯ ಮೇಲೆ ಕಿಡಿಕಾರಿದ್ದರು. ಇದೀಗ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಕೂಡಾ ಬಿಸಿಸಿಐ ಆಯ್ಕೆ ಸಮಿತಿಯ ನಡೆಯ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. 

"ಸರ್ಫರಾಜ್ ಖಾನ್ ಇನ್ನೇನು ಮಾಡಬೇಕು ಹೇಳಿ? ಕಳೆದ ಮೂರು ವರ್ಷಗಳಿಂದ ಅವರು ಗಳಿಸಿರುವ ರನ್‌ಗಳನ್ನಾದರೂ ನೋಡಿ. ಅವರ ತಲೆ ಹಾಗೂ ಭುಜ ಸ್ವಲ್ಪವೂ ವಿಶ್ರಾಂತಿ ಪಡೆದಿಲ್ಲ. ಅವರು ಎಲ್ಲಾ ಕಡೆ ರನ್ ಗಳಿಸಿದ್ದಾರೆ. ಇಷ್ಟಾಗಿಯೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ. ನೀವು ಯಾವ ಸಂದೇಶವನ್ನು ರವಾನಿಸುತ್ತಿದ್ದೀರಾ?  ಎಂದು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್‌ ಚೋಪ್ರಾ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

click me!