
ಢಾಕಾ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ಶುಕ್ರವಾರ ಇಲ್ಲಿ ನಡೆದ 2ನೇ ಏಕದಿನ ಪಂದ್ಯದ ವೇಳೆ ರನೌಟ್ ಹೈಡ್ರಾಮಾ ನಡೆಯಿತು. ಪಾಕಿಸ್ತಾನ ಬ್ಯಾಟ್ ಮಾಡುವಾಗ ಮೊಹಮದ್ ರಿಜ್ವಾನ್ ಬಾರಿಸಿದ ಚೆಂಡು ಬೌಲರನ್ನು ದಾಟಿ ಮುಂದೆ ಹೋಗಲಿದೆ ಎಂದು ನಾನ್ ಸ್ಟ್ರೈಕರ್ ಸಲ್ಮಾನ್ ಅಘಾ ಭಾವಿಸಿ ರನ್ಗಾಗಿ ಓಡಲು ಮುಂದಾದರು. ಆದರೆ, ಯಾವಾಗ ರನ್ ಸಾಧ್ಯವಿಲ್ಲ ಎಂದು ತಿಳಿಯಿತೋ, ಆಗ ಕ್ರೀಸ್ಗೆ ಮರಳಲು ಮುಂದಾದಾಗ, ಚೆಂಡನ್ನು ಹಿಡಿಯುವ ಉದ್ದೇಶದಿಂದ ಬೌಲರ್ ಮೆಹಿದಿ ಹಸನ್ ಸಲ್ಮಾನ್ಗೆ ಅಡ್ಡ ಬಂದರು.
ಕ್ರೀಸ್ನಿಂದ ಹೊರಬಿದ್ದ ಸಲ್ಮಾನ್, ಬಗ್ಗಿ ಚೆಂಡನ್ನು ಬೌಲರ್ಗೆ ಎತ್ತಿಕೊಡಲು ಹೋದಾಗ, ತಕ್ಷಣ ಚೆಂಡನ್ನು ಎತ್ತಿಕೊಂಡ ಮೆಹಿದಿ ಅದನ್ನು ಸ್ಟಂಪ್ಸ್ಗೆ ಎಸೆದು ರನೌಟ್ಗೆ ಮನವಿ ಸಲ್ಲಿಸಿದರು.
ಕೆಲ ಕಾಲ ಮೆಹಿದಿ ಹಾಗೂ ಸಲ್ಮಾನ್ ನಡುವೆ ವಾದ ನಡೆಯಿತು. ಕೊನೆಗೆ ಅಂಪೈರ್ ಔಟ್ ತೀರ್ಪು ನೀಡಿದಾಗ ಸಲ್ಮಾನ್, ಹೆಲ್ಮೆಟ್ ಹಾಗೂ ಗ್ಲೌಸನ್ನು ನೆಲಕ್ಕೆಸೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಸನ್ನಿವೇಶದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಮೆಹಿದಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅನೇಕರು ಟೀಕಿಸಿದ್ದಾರೆ.
ಢಾಕಾ: ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಡಕ್ವರ್ತ್ ಲೂಯಿಸ್ ನಿಯಮದನ್ವಯ 128 ರನ್ಗಳ ಬೃಹತ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕ್ 47.3 ಓವರಲ್ಲಿ 274 ರನ್ಗೆ ಆಲೌಟ್ ಆಯಿತು. ಆ ಬಳಿಕ ಮಳೆ ಸುರಿದ ಕಾರಣ ಆಟ ಸ್ಥಗಿತಗೊಂಡಿತ್ತು. ಕೊನೆಗೆ ಬಾಂಗ್ಲಾದ ಇನ್ನಿಂಗ್ಸಲ್ಲಿ 32 ಓವರ್ಗೆ ಕಡಿತಗೊಳಿಸಿ 243 ರನ್ ಗುರಿ ನೀಡಲಾಯಿತು. ಬಾಂಗ್ಲಾ 23.3 ಓವರಲ್ಲಿ 114 ರನ್ಗೆ ಆಲೌಟ್ ಆಯಿತು. 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.