
ಗುವಾಹಟಿ: ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಹಿಂದೆ ಒಂದು ಪಕ್ಕಾ ಹೋಮ್ವರ್ಕ್ ಇತ್ತು. ಈ ಸತ್ಯವನ್ನು ತಂಡದ ನಾಯಕ ರಿಯಾನ್ ಪರಾಗ್ ಅವರೇ ಬಹಿರಂಗಪಡಿಸಿದ್ದಾರೆ. ಅದರಲ್ಲೂ, ಚೆನ್ನೈ ತಂಡದ ದೊಡ್ಡ ಭರವಸೆಯಾಗಿದ್ದ ಸಂಜು ಸ್ಯಾಮ್ಸನ್ರನ್ನು ಕೇವಲ 6 ರನ್ಗಳಿಗೆ ಔಟ್ ಮಾಡಿದ್ದು, ಮೊದಲೇ ಸಿದ್ಧಪಡಿಸಿದ್ದ ತಂತ್ರದ ಭಾಗವಾಗಿತ್ತು ಎಂದು ಪಂದ್ಯದ ನಂತರ ಪರಾಗ್ ಹೇಳಿಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಎದುರಿಸಿದ ಮೊದಲ ಮೂರ್ನಾಲ್ಕು ಬಾಲ್ಗಳನ್ನು ಗಮನಿಸಿದ ನಂತರವೇ ನಾವು ಈ ತಂತ್ರವನ್ನು ಬಳಸಿದೆವು ಎಂದು ಪರಾಗ್ ಹೇಳಿದ್ದಾರೆ. "ಸಂಜು ಭಾಯ್ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರು ಬ್ಯಾಟಿಂಗ್ಗೆ ಬಂದಾಗ ಮೊದಲ ನಾಲ್ಕೈದು ಎಸೆತಗಳನ್ನು ಎತ್ತ ಕಡೆ ಆಡುತ್ತಾರೆ ಎಂಬುದನ್ನು ನಾವು ಗಮನಿಸಿದೆವು. ಅದಕ್ಕೆ ತಕ್ಕಂತೆ ಫೀಲ್ಡರ್ಗಳನ್ನು ನಿಲ್ಲಿಸಿದೆವು. ಅವರ ಫೇವರಿಟ್ ಶಾಟ್ ಬದಲು ಬೇರೆ ಶಾಟ್ ಆಡುವಂತೆ ಮಾಡುವುದೇ ನಮ್ಮ ಗುರಿಯಾಗಿತ್ತು. ಅದೊಂದು ರೀತಿ ಜೂಜಾಟದಂತಿತ್ತು, ಆದರೆ ಆ ಪ್ಲಾನ್ ನಮಗೆ ವರ್ಕ್ ಆಯ್ತು" ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ಸಂಜುಗೆ ಹೆಚ್ಚು ಇಷ್ಟವಾದ ಪುಲ್ ಶಾಟ್ಗಳನ್ನು ಆಡಲು ಅವಕಾಶ ಕೊಡದೆ, ಅವರನ್ನು ಶಾಂತಗೊಳಿಸುವ ಹಾಗೆ ಬೌಲಿಂಗ್ ಮಾಡಲು ಬೌಲರ್ಗಳಿಗೆ ಸೂಚನೆ ನೀಡಿದ್ದೆವು ಎಂದು ಪರಾಗ್ ತಿಳಿಸಿದರು. "ಸಂಜು ಔಟಾದ ಶಾಟ್ ಅನ್ನೇ ಅವರು ಆಡಬೇಕೆಂದು ನಾವು ಬಯಸಿದ್ದೆವು. ಅವರಿಗೆ ಶಾರ್ಟ್ ಬಾಲ್ಗಳನ್ನು ಹಾಕಿ ಪುಲ್ ಮಾಡಲು ನಾವು ಬಿಡಲಿಲ್ಲ. ಬದಲಿಗೆ, ಬ್ಯಾಟ್ಸ್ಮನ್ಗೆ ಕಿರಿಕಿರಿ ಉಂಟುಮಾಡುವ ಹಾಗೆ ಬೌಲಿಂಗ್ ಮಾಡಲು ಪ್ರಯತ್ನಿಸಿದೆವು. ಆ ತಂತ್ರ ಫಲಿಸಿತು. ಒಂದು ವೇಳೆ ಆ ಪ್ಲಾನ್ ಫೇಲ್ ಆಗಿದ್ದರೆ, ನಾನೀಗ ಇಲ್ಲಿ ದಡ್ಡನ ಹಾಗೆ ಕೂತಿರಬೇಕಿತ್ತು" ಎಂದು ರಿಯಾನ್ ಪರಾಗ್ ನಗುತ್ತಾ ಹೇಳಿದರು.
ತನ್ನ ಹಳೆಯ ತಂಡದ ವಿರುದ್ಧ ಹೊಸ ತಂಡವಾದ ಚೆನ್ನೈ ಪರ ಆಡಿದ ಮೊದಲ ಪಂದ್ಯದಲ್ಲಿ ಸಂಜು ಮಿಂಚಲು ವಿಫಲರಾದರು. 7 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದ ಸಂಜು ವಿಕೆಟ್ ಅನ್ನು ರಾಜಸ್ಥಾನ್ ಬೌಲರ್ ನಂದ್ರೆ ಬರ್ಗರ್ ಪಡೆದರು. ರಿಯಾನ್ ಪರಾಗ್ ಅವರ ಚಾಣಾಕ್ಷ ಫೀಲ್ಡ್ ಪ್ಲೇಸ್ಮೆಂಟ್ ಸಂಜು ವಿಕೆಟ್ ಪತನಕ್ಕೆ ಪ್ರಮುಖ ಕಾರಣವಾಯಿತು.
ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಲಿಳಿದ ಸಿಎಸ್ಕೆ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದ ಜೇಮಿ ಓವರ್ಟನ್ 43 ರನ್ ಗಳಿಸಿದ್ದು ಬಿಟ್ಟರೇ ಉಳಿದ್ಯಾವ ಬ್ಯಾಟರ್ಗಳು ಕನಿಷ್ಠ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಸಿಎಸ್ಕೆ ಕೇವಲ 127 ರನ್ಗಳಿಗೆ ಸರ್ವಪತನ ಕಂಡಿತು.
ಇನ್ನು ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಚುರುಕಿನ ಅರ್ಧಶತಕ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಅಜೇಯ 38 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.