
ಬೆಂಗಳೂರು (ಏ.18): ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಿಂದೊಮ್ಮೆ 'ಈ ಸಲ ಕಪ್ ನಮ್ದೆ' ಎಂದು ಹೇಳಿದ್ದು ಸಾಕಷ್ಟು ಸುದ್ದಿಯಾಗಿತ್ತು. ಕೊಹ್ಲಿಗೆ ಕನ್ನಡ ಬರದೇ ಇದ್ದರೂ, ಆರ್ಸಿಬಿ ತಂಡದ ವಿಚಾರವಾಗಿ ಬಂದಾಗ ಕೊಹ್ಲಿ ಇಂಥದ್ದೊಂದು ಕನ್ನಡದ ಮಾತನಾಡಿದ್ದರು ಅನ್ನೋದನ್ನ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಈಗಂತೂ ಕೊಹ್ಲಿ ಕೆಲ ಶಬ್ದಗಳನ್ನು ಕನ್ನಡದಲ್ಲಿಯೇ ಮಾತನಾಡುವಷ್ಟು ಶಕ್ತರಾಗಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಮಹಿಳಾ ಟೀಮ್ನ ಮೆಂಟರ್ ಸಾನಿಯಾ ಮಿರ್ಜಾ ಅವರ ವಿಡಿಯೋ ವೈರಲ್ ಆಗುತ್ತದೆ. ನಾನ್ ಕನ್ನಡ ಮಾತನಾಡಲ್ಲ ಎಂದು ಅವರು ಹೇಳಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರಂತೂ ಆರ್ಸಿಬಿ ಟೀಮ್ ಸಾನಿಯಾ ಮಿರ್ಜಾರನ್ನು ಮೆಂಟರ್ ಸ್ಥಾನದಿಂದ ಕಿತ್ತು ಹಾಕದೇ ಇದ್ದರೆ ಪ್ರತಿಭಟನೆ ಮಾಡೋದಾಗಿ ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಬಹುತೇಕತು ತಮ್ಮ ಕಾಮೆಂಟ್ಗಳಲ್ಲಿ ಸಾನಿಯಾ ಮಿರ್ಜಾ ದುರಹಂಕಾರಿ ಎಂದಿದ್ದಾರೆ. ನೀವು ಈ ರೀತಿಯಲ್ಲಿ ಕನ್ನಡಕ್ಕೆ ಅಗೌರವ ತೋರುವುದಾದರೆ, ನೀವು ಕರ್ನಾಟಕಕ್ಕೆ ಬರಲೇ ಬೇಡಿ. ಕನ್ನಡಿಗರಿಗೂ ಕೂಡ ನೀವು ಯಾವುದೇ ರೀತಿಯಲ್ಲೂ ಅಗತ್ಯವಿಲ್ಲ ಎಂದು ಬರೆದಿದ್ದಾರೆ. ಆರ್ಸಿಬಿ ತಂಡ ಈಕೆಯಲ್ಲಿರುವ ಅಹಂಕಾರವನ್ನು ಮೊದಲು ಗಮನಿಸಬೇಕು ಎಂದು ತಂಡವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?: ಇತ್ತಿಚೆಗೆ ಸಾನಿಯಾ ಮಿರ್ಜಾ ಒಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರ ಜೊತೆಗಿನ ಸಂವಾದದಲ್ಲಿ ಸಾನಿಯಾ ಮಿರ್ಜಾ ಮಾತನಾಡಿದರು. ಈ ಹಂತದಲ್ಲಿ ಪತ್ರಕರ್ತರೊಬ್ಬರು 'ನೀವು ಯಾವುದಾದರೂ ಕನ್ನಡದ ಡೈಲಾಗ್ ಹೇಳಬಹುದೇ?' ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಾನಿಯಾ ಮಿರ್ಜಾ, ಇಲ್ಲ ನನಗೆ ಯಾವುದೇ ಅಂಥ ಡೈಲಾಗ್ಗಳು ಗೊತ್ತಿಲ್ಲ ಎಂದರೆ ಮುಗಿದು ಹೋಗುತ್ತಿತ್ತು. ಆದರೆ, ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದ ಆಕೆ, 'ಐ ಕೆನಾಟ್' (ನನಗೆ ಸಾಧ್ಯವಿಲ್ಲ) ಎಂದು ಇಂಗ್ಲೀಷ್ನಲ್ಲಿ ಉತ್ತರಿಸಿದರು. ಇದರ ಬೆನ್ನಲ್ಲಿಯೇ ಪತ್ರಕರ್ತ, ಆಕೆ ಆರ್ಸಿಬಿ ಮಹಿಳಾ ತಂಡದ ಮೆಂಟರ್ ಆಗಿರುವ ಕಾರಣ, 'ಈ ಸಲ ಕಪ್ ನಮ್ದೆ' ಎನ್ನುವ ಜನಪ್ರಿಯ ಫ್ಯಾನ್ ಸಾಲನ್ನು ಹೇಳಬಹುದೇ ಎಂದು ಕೇಳಿದರು. ಅದಕ್ಕೂ ಅದೇ ಧಾಟಿಯಲ್ಲಿ 'ಐ ಕೆನಾಟ್..' ಎಂದು ಉತ್ತರಿಸಿದ್ದಾರೆ.
ಇದೇ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕನ್ನಡದ ಪ್ರಮುಖ ಟ್ರೋಲ್ ಪೇಜ್ಗಳು ಸಾನಿಯಾ ಈ ಕುರಿತಾಗಿ ಕ್ಷಮೆ ಕೇಳಬೇಕು ಎಂದೂ ಆಗ್ರಹ ಮಾಡಿದ್ದಾರೆ. ಸಾನಿಯಾ ತಮಗೆ ಕನ್ನಡ ಗೊತ್ತಿಲ್ಲ ಎಂದು ಹೇಳಿದ್ದರೂ ತೊಂದರೆ ಇದ್ದಿರಲಿಲ್ಲ. ಆದರೆ, ಅವರು ಹೇಳಿದ ಧಾಟಿ ಸರಿಯಿರಲಿಲ್ಲ. ದುರಹಂಕಾರದಿಂದ ಅವರು ಮಾತನಾಡಿದ್ದಾರೆ ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ.
'ಆರ್ಸಿಬಿ ಟೀಮ್ನವರಿಗೆ ಒಂದು ವಿನಂತಿ. ಈಕೆಯನ್ನು ಇಂಗ್ಲೆಂಡ್ ಟೀಮ್ನ ಪ್ರಮೋಷನ್ಗೆ ಕಳಿಸಿಕೊಡಿ. ಆರ್ಸಿಬಿಯ ಫೇಸ್ ಆಗಿ ಇರಲು ಈಕೆ ಅರ್ಹರಲ್ಲ. ಈಕೆಯನ್ನು ಹಾಗೆ ನೋಡೋಕು ಸಾಧ್ಯವಿಲ್ಲ. ಆಕೆಯೊಂದಿಗೆ ಏನಾದರೂ ಒಪ್ಪಂದಗಳಿದ್ದರೆ ಅದನ್ನು ಇಲ್ಲಿಗೆ ಮುಗಿಸಿಬಿಡಿ' ಎಂದು ಮಂಜುನಾಥ್ ಆನಂದ್ ಎನ್ನುವ ವ್ಯಕ್ತಿ ಬರೆದುಕೊಂಡಿದ್ದಾರೆ.
'ಗುರುವೇ ಈಯಮ್ಮಂಗೆ ಕನ್ನಡದಲ್ಲಿ ಅದು ಹೇಳಿ ಇದು ಹೇಳಿ ಅಂತ ಕೇಳೋ ಅಂಥ ದರಿದ್ರ ನಮಗೇನಿದೆ? "Atleast" ಅನ್ನೋ ಅಷ್ಟರ ಮಟ್ಟಿಗೆ ಇಳಿದು ಕೇಳಿದ್ರೆ ನಮ್ಮ ಬಗ್ಗೆ ಏನು ಅಂದ್ಕೊಳ್ಬೇಡ ಅವ್ರು. ನಮ್ ಮರ್ಯಾದೆ ಉಳಿಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ. ಸ್ವಲ್ಪ ಸ್ವಾಭಿಮಾನ ಬೆಳೆಸಿಕೊಳ್ರಪ್ಪ. ಇವರನ್ನ ಒತ್ತಾಯ ಮಾಡಿ ಕನ್ನಡ ಮಾತಾಡಿಸೋ ಅವಶ್ಯಕತೆ ಇಲ್ಲ' ಎಂದು ಸಾನಿಯಾ ಮಿರ್ಜಾಗೆ ಕನ್ನಡ ಮಾತನಾಡಿ ಎಂದು ಕೇಳಿರೋದೇ ತಪ್ಪು ಎಂದು ಬರೆದಿದ್ದಾರೆ.
ಬುರ್ಖಾ ಧರಿಸಿ ಸೌದಿಗೆ ತೆರಳಿದ RCB ಮೆಂಟರ್ ಸಾನಿಯಾ, 'ಗಂಡ ಎಲ್ಲಮ್ಮ..' ಎಂದು ಕೇಳಿದ ಫ್ಯಾನ್ಸ್!
ಸುದ್ದಿಗೋಷ್ಠಿಯಲ್ಲಿ ಆಕೆಯೇ ಹೇಳಿರುವಂತೆ, ಬೆಂಗಳೂರಿನಲ್ಲಿಯೇ ಅವರು ವಾಸವಿದ್ದಾರೆ. ನಿರಂತರವಾಗಿ ಬೆಂಗಳೂರಿಗೂ ಬರುತ್ತಿದ್ದಾರೆ. ಹಾಗಿದ್ದರೂ ಕನ್ನಡ ಮಾತನಾಡಲು ಬರೋದಿಲ್ಲ. ಹೋಗಲಿ ಕೆಲವೊಂದು ಕನ್ನಡ ಪದಗಳನ್ನು ಮಾತನಾಡೋಕು ಆಕೆಗೆ ಸಾಧ್ಯವಿಲ್ಲ. ಇದು ದುರಹಂಕಾರ ಎಂದು ಇನ್ನೊಬ್ಬರು ಬರೆದಿದ್ದಾರೆ.
'ಕೆಟ್ಟ ಟೈಮ್ನಲ್ಲೂ ವಿನ್ ಆಗ್ತಾರಲ್ಲ, ಅವರೇ ಚಾಂಪಿಯನ್ಸ್..' ಆರ್ಸಿಬಿಯಲ್ಲಿ ಆರಂಭವಾಯ್ತು ಸಾನಿಯಾ ಸ್ಫೂರ್ತಿ!
'ದುರಹಂಕಾರಿ ಸಾನಿಯಾ ಮಿರ್ಜಾ. ಕನ್ನಡ ಮಾತಾಡಲ್ಲ ಅಂದ್ರೆ, ಆರ್ಸಿಬಿ ಮಹಿಳಾ ಟೀಮ್ನ ಮೆಂಟರ್ ಆಗಿ ಕೆಲಸ ಮಾಡೋ ಅವಶ್ಯಕತೆ ಇಲ್ಲ. ನಿನ್ನಂಥ ದುರಹಂಕಾರಿಗೆ ಏನ್ ಗೊತ್ತು ಕನ್ನಡ ಕನ್ನಡತನನ ಅಂದ್ರ ಕನ್ನಡ ಮಾತಾಡೋಕು ಯೋಗ್ಯತೆ ಬೇಕು ಅದು ಇಲ್ಲ ಬಿಡು ನಿಂಗ. ಕ್ರಿಕೆಟ್ ಗು ನೀನಗೂ ಸಂಬಂಧ ಇಲ್ಲದೆ ಇರೋರನ್ನ ಕುಡಸಿದ್ರ ಹಿಂಗ ಅಗುದ್' ಎಂದು ಇನ್ನೊಬ್ಬರು ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.