
ಬೆಂಗಳೂರು (ಮಾ.25): ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ರಸ್ತೆಯಲ್ಲಿ ಪ್ರಾಣಬಿಟ್ಟರು. ಈ ಕಾರ್ಯಕ್ರಮ ಇಷ್ಟು ಅವಾಂತರ ಆಗೋಕೆ ಯಾರು ಕಾರಣ ಅನ್ನೋದನ್ನು ಇಂದಿಗೂ ಕೂಡ ಸರ್ಕಾರವಾಗಲಿ, ಆರ್ಸಿಬಿ ಮ್ಯಾನೇಜ್ಮೆಂಟ್ ಆಗಲಿ, ಕೆಎಸ್ಸಿಎ ಆಗಲಿ ಒಪ್ಪಿಕೊಳ್ಳುತ್ತಿಲ್ಲ. ಈಗ ಮತ್ತೊಂದು ಐಪಿಎಲ್ ಸೀಸನ್ ಶುರುವಾಗುವ ಹಂತದಲ್ಲಿದೆ. ಈ ಒಂದು ವರ್ಷದಲ್ಲಿ ಏನೆಲ್ಲಾ ಬದಲಾವಣೆಗಳು ಆದವು. ಕೆಎಸ್ಸಿಎ ಮ್ಯಾನೇಜ್ಮೆಂಟ್ ಬದಲಾಯಿತು. ಆರ್ಸಿಬಿ ಮಾರಾಟವಾಯಿತು. ಚಿನ್ನಸ್ವಾಮಿ ಮೈದಾನದಲ್ಲಿ ಆಗಬೇಕಿದ್ದ ವಿಶ್ವಕಪ್ ಪಂದ್ಯಗಳು ಶಿಫ್ಟ್ ಆದವು. ಐಪಿಎಲ್ ಕೂಡ ಈ ಬಾರಿ ಆಗೋದಿಲ್ಲ ಎನ್ನುವ ಹಂತದಲ್ಲಿತ್ತು. ಕೊನೆಗೆ ಏನೋ ಒಂದು ಮಾಡಿ ಐಪಿಎಲ್ಗೆ ಚಿನ್ನಸ್ವಾಮಿ ಮೈದಾನದಲ್ಲಿ ಅಡಲು ಅನುಮತಿ ಸಿಕ್ಕಿದೆ.
ಹಾಗೆ ಸುಮ್ಮನೆ ಮ್ಯಾಚ್ ಆಡೋಕೆ ನಿಂತರೆ ಜನ ಬಿಡ್ತಾರಾ? ಅದಕ್ಕಾಗಿ ಆರ್ಸಿಬಿ ಇಡೀ ಐಪಿಎಲ್ ಸೀಸನ್ನಲ್ಲಿ 11 ಸೀಟ್ಗಳು ಖಾಲಿ ಇಡುವ ಎಮೋಷನಲ್ ಘೋಷಣೆ ಮಾಡಿತು. ತಮ್ಮ ಅಭಿಮಾನಿಗಳ ನೆನಪಿಗಾಗಿ ಅಭ್ಯಾಸದ ವೇಳೆ ತಮ್ಮ ಆಟಗಾರರು 11 ನಂಬರ್ನ ಜರ್ಸಿ ಧರಿಸುತ್ತಾರೆ ಎಂದು ಘೋಷಣೆ ಮಾಡಿತು. ಆ ಮೂಲಕ ತಮ್ಮ ಅಭಿಮಾನಿಗಳನ್ನು ನೆನಪಿಸಿಕೊಂಡಿದ್ದೇವೆ ಎಂದು ತಿಳಿಸುವ ಪ್ರಯತ್ನ ಮಾಡಿತು. ನಿಜಕ್ಕೂ ಇದು ಒಳ್ಳೆಯ ವಿಚಾರ.
ಆದರೆ, ಕೆಎಸ್ಸಿಎ ಇನ್ನೊಂದೆ ಹೆಜ್ಜೆ ಮುಂದೆಯೇ ಹೋಗಿ, ರಸ್ತೆಯಲ್ಲಿ ಸಾವು ಕಂಡ 11 ಆರ್ಸಿಬಿ ಅಭಿಮಾನಿಗಳಿಗೆ ಚಿನ್ನಸ್ವಾಮಿ ಮೈದಾನದಲ್ಲೇ ಸ್ನಾರಕ ಮಾಡಿ, ಅದನ್ನು ಇಂದು ಅನಾವರಣ ಕೂಡ ಮಾಡಿದೆ. ಗೃಹ ಸಚಿವ ಪರಮೇಶ್ವರ್ ಇದನ್ನು ಉದ್ಘಾಟನೆ ಕೂಡ ಮಾಡಿದರು. ಮೊದಲೇ ಚಿನ್ನಸ್ವಾಮಿಯಲ್ಲಿ ಸರಿಯಾಗಿ ಜನ ಹೊಕ್ಕರೆ ನಿಲ್ಲಲೂ ಸ್ಥಳವಿಲ್ಲ. ಇಂಥ ಸ್ಥಿತಿ ಇರುವಾಗ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ಆರ್ಸಿಬಿ ಫ್ಯಾನ್ಸ್ಗಳ ಸ್ಮಾರಕ ಮಾಡುವ ಅಗತ್ಯವೇನಿತ್ತು ಅನ್ನೋ ಪ್ರಶ್ನೆ ಎದುರಾಗಿದೆ.
ರಣಜಿ ಪಂದ್ಯ, ಕರ್ನಾಟಕ ಕ್ರಿಕೆಟ್ ಅಥವಾ ಟೀಮ್ ಇಂಡಿಯಾ ಕ್ರಿಕೆಟ್ಅನ್ನು ನೋಡುವಾಗ ಅಭಿಮಾನಿಗಳು ಇದೇ ರೀತಿ ಸಾವು ಕಂಡಿದ್ದರೆ, ಅವರಿಗೆ ಕೆಎಸ್ಸಿಎ ಆವರಣದಲ್ಲಿ ಸ್ಮಾರಕ ಮಾಡುವುದರಲ್ಲಿ ಒಂದು ಅರ್ಥವಿದೆ. ಆದರೆ, ಆರ್ಸಿಬಿ ಒಂದು ಕ್ರೀಡಾ ಫ್ರಾಂಚೈಸಿ. ಕೆಎಸ್ಸಿಎ ರಾಜ್ಯದಲ್ಲಿ ಕ್ರಿಕೆಟ್ ಆಡಳಿತ ನೋಡಿಕೊಳ್ಳುವ ಸಂಸ್ಥೆ. ತನ್ನ ವಿಜಯೋತ್ಸವದಲ್ಲಿ ಸಾವು ಕಂಡ ಅಭಿಮಾನಿಗಳಿಗೆ ಬೇರೆಯವರ ಮನೆಯಲ್ಲಿ ಒಂದು ಸ್ಮಾರಕ ಮಾಡಿ ಅದಕ್ಕೆ ಗೌರವ ಸಲ್ಲಿಸುವುದರಲ್ಲಿ ಅರ್ಥವೇನಿದೆ. ಇನ್ನೂ ಕೆಎಸ್ಸಿಎ ಮ್ಯಾನೇಜ್ಮೆಂಟ್ ಕೂಡ ಇದನ್ನು ದೊಡ್ಡ ಸಾಧನೆ ಅಂತಾ ಬೆನ್ನುತಟ್ಟಿಕೊಳ್ಳುವುದರಲ್ಲಿ ಅರ್ಥವೇನಿದೆ? ಹಾಗೇನಾದರೂ ಕೆಎಸ್ಸಿಎ ಸಾವು ಕಂಡ ಆರ್ಸಿಬಿ ಅಭಿಮಾನಿಗಳ ನೆನಪಿಗೆ ಏನಾದರೂ ಮಾಡುವಂತಿದ್ದರೆ, ಇಡೀ ಸ್ಟೇಡಿಯಂನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವುದರಲ್ಲಿ, ಕೆಎಸ್ಸಿಎ ಟಿಕೆಟ್ಅನ್ನು ನಿಜವಾದ ಕ್ರಿಕೆಟ್ ಅಭಿಮಾನಿಗಳಗೆ ಹಂಚುವುದರತ್ತ ಗಮನ ನೀಡಬೇಕು.
ಕೆಎಸ್ಸಿಎಯಲ್ಲಿ ಆರ್ಸಿಬಿ ತನ್ನ ಅಭಿಮಾನಿಗಳ ಸಾವಿಗೆ ಸ್ಮಾರಕ ಮಾಡಿ ಸುಮ್ಮನಾಗಿದೆ. ಕೆಎಸ್ಸಿಎ ಕೂಡ ತಾನೇನೋ ದೊಡ್ಡ ಸಾಧನೆ ಮಾಡಿದಂತೆ ಹೇಳಿಕೊಳ್ಳುತ್ತಿದೆ. ಆದರೆ, ತನ್ನ ಅಭಿಮಾನಿಗಳಿಗೆ ತನ್ನದೇ ನೆಲದಲ್ಲಿ ಒಂದು ಸಣ್ಣ ಜಾಗ ಕೊಡುವಷ್ಟು ಆರ್ಸಿಬಿ ಬಡವಾಗಿದೆಯೇ ಅನ್ನೋದು ಪ್ರಶ್ನೆ. ಆರ್ಸಿಬಿ ಎಂಜಿ ರೋಡ್ನಲ್ಲಿ ತನ್ನದೇ ಆದ ಆರ್ಸಿಬಿ ಕೆಫೆ ಹೊಂದಿದೆ. ಇದರ ಒಂದು ಪುಟ್ಟ ಜಾಗದಲ್ಲಿ ತನ್ನ 11 ಅಭಿಮಾನಿಗಳ ನೆನಪಿಗಾಗಿ ಪುಟ್ಟ ಸ್ಮಾರಕವನ್ನು ಮಾಡಬಹುದಿತ್ತು. ಆದರೆ, ದುಡ್ಡೇ ದೊಡ್ಡಪ್ಪ ಎನ್ನುವ ಆರ್ಸಿಬಿ, ತನ್ನ ಆರ್ಸಿಬಿ ಕೆಫೆಯನ್ನು ಮೋಜು, ಮಸ್ತಿ ಮಾಡೋದಕ್ಕೆ ಮಾತ್ರವೇ ಸೀಮಿತ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.